ಹುಳಿಯಾರು
ಹುಳಿಯಾರು ಹೋಬಳಿಯಲ್ಲಿ ಸತತ ಏಳೆಂಟು ವರ್ಷಗಳಿಂದ ಬರಗಾಲದ ಕಾಡುತ್ತಿದ್ದು ಮಳೆ ಬೆಳೆ ಇಲ್ಲದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರದ ಸಂಕಷ್ಟ ಪರಿಸ್ಥಿಯಲ್ಲಿ ಸುಗ್ಗಿಯ ಹಬ್ಬ ಸಂಕ್ರಾಂತಿ ಬಂದಿದೆ.
ಹಿಂದೆ ಮುಂಗಾರಿನಲ್ಲಿ ಹೆಸರು ಕಾಳು, ಹಿಂಗಾರಿನಲ್ಲಿ ರಾಗಿ ರೈತನ ಕೈಹಿಡಿಯುತ್ತಿದ್ದರಿಂದ ಸಂಕ್ರಾಂತಿ ಬಂತೆಂದರೆ ರೈತರ ಮೊಗದಲ್ಲಿ ಸುಗ್ಗಿಯ ಜತೆಗೆ ಹಿಗ್ಗೂ ಬರುತ್ತಿತ್ತು. ಆದರೆ ಈ ಬಾರಿ ಕೆಲವು ಭಾಗದಲ್ಲಿ ಅಷ್ಟೋಇಷ್ಟೋ ರಾಗಿ ರೈತನ ಕೈ ಹಿಡಿದಿದ್ದು ಬಿಟ್ಟರೆ ಇತರೆ ಎಲ್ಲಾ ಬೆಳೆಗಳೂ ಮಳೆಯಿಲ್ಲದೆ ಕೈ ಕೊಟ್ಟಿದೆ. ತೆಂಗು-ಅಡಿಕೆಯಂತೂ ಫಸಲು ಬರುವುದಿರಲಿ ಒಣಗುತ್ತಿರುವ ಮರಗಳನ್ನು ಉಳಿಸಿಕೊಂಡರೆ ಸಾಕು ಎನ್ನುವಂತ್ತಾಗಿದೆ.
ಮುಂಗಾರು ಮತ್ತು ಹಿಂಗಾರು ಕೈ ಹಿಡಿದಿದ್ದ ಕಾಲದಲ್ಲಿ ವರ್ಷಕ್ಕಾಗುವಷ್ಟು ಧಾನ್ಯ ಉಳಿಸಿಕೊಂಡು ಮಿಕ್ಕಿದ್ದನ್ನು ಮಾರಿ ಬಂದ ಹಣದಲ್ಲಿ ಸಂಭ್ರಮದಿಂದ ಸಂಕ್ರಾಂತಿ ಆಚರಿಸುತ್ತಿದ್ದರು. ಮನೆ ಮಂದಿಯೆಲ್ಲ ಸಂಭ್ರಮದಲ್ಲಿ ಮಿಂದು ತೇಲುತ್ತಿದ್ದರು. ಆದರೆ ಬರ ರೈತನ ಸಂಭ್ರಮ ಕಿತ್ತುಕೋಡಿದ್ದು ಗತಕಾಲದ ವೈಭವವನ್ನು ಇತ್ತೀಚಿನ ದಿನಗಳಲ್ಲಿ ನೋಡಲು ಸಾಧ್ಯವಿಲ್ಲ ಎಂಬುದು ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ತಿಳಿಸಿದರು.
ಆದರೂ ಹಬ್ಬ ಆಚರಿಸುವ ಅನಿವಾರ್ಯತೆಯಲ್ಲಿ ರೈತ ಸಿಲುಕಿದ್ದಾನೆ. ಮಳೆ, ಬೆಳೆಯಿಲ್ಲದೆ, ಬೆಳೆದ ಬೆಳೆಗಳ ಉತ್ಪನ್ನಗಳಿಗೆ ಬೆಲೆ ಇಲ್ಲದೆ ತೀವ್ರ ಸಂಕಷ್ಟದಿಂದ ಒದ್ದಾಡುತ್ತಿರುವ ರೈತರಿಗೆ ಯಾಕಾದರೂ ಹಬ್ಬ ಬಂದಿತೊ ಎನ್ನುವಂತಾಗಿದೆ. ಯಾವೊಬ್ಬ ರೈತರಲ್ಲೂ ಹಬ್ಬದ ಆಚರಣೆಯ ಖುಷಿ ಕಾಣುತ್ತಿಲ್ಲ. ಸುಗ್ಗಿಯೇ ಇಲ್ಲದ ಮೇಲೆ ಹಬ್ಬವಾದರೂ ಏಕೆ? ಎಂಬ ಪ್ರಶ್ನೆ ಕಾಡುತ್ತಿದೆ ಎಂದು ರೈತ ಸಂಘದ ಕೆಂಕೆರೆ ಸತೀಶ್ ಹೇಳುತ್ತಾರೆ.
ಹಳ್ಳಿ ಜನರಲ್ಲಿ ಹಬ್ಬದ ಸಂಭ್ರಮ ಮಂಕಾಗಿದ್ದರೂ ಪಟ್ಟಣದ ಜನರಲ್ಲಿ ಹಬ್ಬದ ವಾತಾವರಣ ಕಾಣುತ್ತಿತ್ತು. ಹಾಗಾಗಿ ರೈತ ವರ್ಗವನ್ನು ಹೊರತು ಪಡಿಸಿ ಇತರೆ ವರ್ಗದ ಜನರು ಹಬ್ಬದ ಸಾಮಾಗ್ರಿಗಳ ಖರೀದಿಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿತ್ತು. ಗೆಣಸು, ಕಬ್ಬು, ಅವರೇಕಾಯಿ ಬೆಲೆ ಈ ವರ್ಷ ಸ್ವಲ್ಪ ಹೆಚ್ಚಾಗಿದ್ದರೂ ವ್ಯಾಪಾರ ಮಾತ್ರ ಜೋರಾಗಿತ್ತು. ಕಬ್ಬು ಮತ್ತು ಗೆಣಸು ಬೆಳೆಯುವ ರೈತರಾರೂ ಇಲ್ಲಿಲ್ಲದ ಕಾರಣ ಅವರೇಕಾಯಿ ಬೆಳೆದ ಸ್ಥಳೀಯ ರೈತರಿಗಂತೂ ಈ ಸಂಕ್ರಾಂತಿ ಜೇಬು ತುಂಬಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
