ಮಧುಗಿರಿ
ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹೊಂದುತ್ತದೆ. ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಹಾಗೂ ಅವರ ಸರ್ವತೋಮುಖ ಬೆಳವಣಿಗೆಗೆ ಶೈಕ್ಷಣಿಕ ಪ್ರವಾಸ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರೇವಾ ಯೂನಿವರ್ಸಿಟಿಯ ಕಂಪ್ಯೂಟರ್ ವಿಭಾಗದ ನಿರ್ದೇಶಕ ಡಾ.ಎಸ್.ಸೆಂಥಿಲ್ ಅಭಿಪ್ರಾಯಪಟ್ಟರು.
ಮಧುಗಿರಿಯ ಜ್ಞಾನ ಪ್ರಿಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳ ಹೆಸರಾಂತ ರೇವಾ ಯೂನಿವರ್ಸಿಟಿಗೆ ಶೈಕ್ಷಣಿಕ ಉದ್ದೇಶದ ಭೇಟಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಬಹಳ ಸುಂದರವಾದುದು. ಅದನ್ನು ಆರೈಕೆ ಮಾಡುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಶಿಕ್ಷಣದ ಜೊತೆಗೆ ಶಿಕ್ಷಣೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉನ್ನತ ಶಿಕ್ಷಣದಲ್ಲಿ ಯಾವೆಲ್ಲಾ ವಿಭಾಗಗಳಿವೆ. ತಮ್ಮ ಅಭಿರುಚಿಗೆ ತಕ್ಕ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ರೇವಾ ಯೂನಿವರ್ಸಿಟಿಯ ಕಂಪ್ಯೂಟರ್ ವಿಭಾಗದ ಪ್ರೊಫೆಸರ್ ಹಾಗೂ ಸಂಯೋಜಕರಾದ ಆರ್.ಪಿನಕಪಾಣಿ ಮತ್ತು ಮಾರ್ಕೆಟಿಂಗ್ ವಿಭಾಗದ ಅಬ್ಬಾಸ್ ಮಾತನಾಡಿದರು. ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ತಾಂತ್ರಿಕ ವಿಭಾಗದ ಪ್ರಯೋಗಾಲಯದಲ್ಲಿನ ಮಾದರಿಗಳು ಹಾಗೂ ನ್ಯಾಯಾಲಯದಲ್ಲಿ ನಡೆಯುವ ವಾದ ವಿವಾದಗಳ ಬಗ್ಗೆ ಹಲವಾರು ಪ್ರಾತ್ಯಕ್ಷಿತೆಯನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು.
ಹಳ್ಳಿಗಾಡಿನ ವಿದ್ಯಾರ್ಥಿಗಳಾದ ನಮಗೆ ಇಂತಹ ಒಂದು ಹೆಸರಾಂತ ಯೂನಿವರ್ಸಿಟಿಯನ್ನು ಭೇಟಿ ಮಾಡುವ ಅವಕಾಶ ಕನಸಿನ ಮಾತಾಗಿತ್ತು. ಇದಕ್ಕೆ ಅವಕಾಶ ಮಾಡಿಕೊಟ್ಟು, ನಮಗೆ ಓದಲು ಹೆಚ್ಚು ಸ್ಪೂರ್ತಿದಾಯಕ ಕೆಲಸ ಮಾಡಿರುವ ಕಾಲೇಜಿನ ಆಡಳಿತ ಮಂಡಳಿಗೆ ಹಾಗೂ ರೇವಾ ಯೂನಿವರ್ಸಿಟಿಯ ಎಲ್ಲಾ ಸಿಬ್ಬಂದಿ ವರ್ಗಕ್ಕೂ ನಾವೆಲ್ಲಾ ಆಭಾರಿಯಾಗಿದ್ದೇವೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆಯ ಕಾರ್ಯದರ್ಶಿ ಮಧುಪ್ರಿಯ, ಕಾಲೇಜಿನ ಪ್ರಾಂಶುಪಾಲ ಹನುಮಂತರಾಯಪ್ಪ, ಉಪನ್ಯಾಸಕ ನರಸಿಂಹಮೂರ್ತಿ, ಕಾವ್ಯ, ಪ್ರತಿಭಾ ಹಾಗೂ ಸಿಬ್ಬಂದಿವರ್ಗದವರಾದ ಮೋಹನ್ ಕುಮಾರ್ ಎನ್., ಶಿವಕುಮಾರ್, ಬಾಲು, ಗಂಗಮ್ಮ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.