ಚಿತ್ರದುರ್ಗ:
ಡಾ.ಬಿ.ಆರ್.ಅಂಬೇಡ್ಕರ್ರವರು ಬಾಲ್ಯದಲ್ಲಿಯೇ ಸಾಕಷ್ಟು ನೋವು, ಹಿಂಸೆ, ಸಂಕಟ, ಅವಮಾನಗಳ್ನು ಅನುಭವಿಸಿದ್ದರಿಂದ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಲು ಕಾರಣವಾಯಿತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಹೇಳಿದರು.
ವಕೀಲರ ಸಮುದಾಯದಿಂದ ವಕೀಲರ ಭವನದಲ್ಲಿ ಮಂಗಳವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ರವರ 128ನೇ ಜಯಂತಿಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಅಸ್ಪೃಶ್ಯತೆ ಬಗ್ಗೆ ಹೋರಾಡಿ ಜೀವನದಲ್ಲಿ ಕಹಿ ಅನುಭವಗಳನ್ನು ಸಹಿಸಿಕೊಂಡ ಅಂಬೇಡ್ಕರ್ರವರು ದೌರ್ಜನ್ಯ, ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಲು ಜೀವನ ಪರ್ಯಂತ ಹೋರಾಡಿ ಜಗತ್ತು ಮೆಚ್ಚುವಂತ ಸಂವಿಧಾನವನ್ನು ರಚಿಸಿ ಭಾರತಕ್ಕೆ ನೀಡಿದ್ದಾರೆ. ಕಾಲುವೆ ನೀರನ್ನು ಕುಡಿಯಲು ಅಂಬೇಡ್ಕರ್ಗೆ ಸ್ವತಂತ್ರವಿರಲಿಲ್ಲ. ಎತ್ತಿನ ಬಂಡಿಯಲ್ಲಿ ಕೂರುವಂತಿಲ್ಲ. ಶಾಲೆಯಲ್ಲಿ ಹಿಂದಿನ ಬೆಂಚಿನಲ್ಲಿ ಕೂರುತ್ತಿದ್ದರು. ಅವರು ಮುಟ್ಟಿದ್ದ ಪುಸ್ತಕವನ್ನು ಬೇರೆ ಯಾರು ಮುಟ್ಟುತ್ತಿರಲಿಲ್ಲ. ಅಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎಂದು ವಿದ್ಯಾರ್ಥಿ ಜೀವನದಲ್ಲಿ ಅಂಬೇಡ್ಕರ್ರವರು ಎದುರಿಸಿದ ಸವಾಲುಗಳನ್ನು ಮೆಲುಕು ಹಾಕಿದರು.
ಲಂಡನ್, ಅಮೇರಿಕಾ, ನ್ಯೂಯಾರ್ಕ್, ಕೊಲಂಬಿಯಾದಲ್ಲಿ ಶಿಕ್ಷಣ ಪಡೆದಿರುವ ಡಾ.ಬಿ.ಆರ್.ಅಂಬೇಡ್ಕರ್ ಹಲವಾರು ಪದವಿಗಳನ್ನು ಪಡೆದು 200 ಪಿ.ಹೆಚ್.ಡಿ.ಗಳಿಸಿ ಒಳ್ಳೆ ಒಳ್ಳೆ ಪುಸ್ತಕಗಳನ್ನು ಬರೆದಿದ್ದಾರೆ. ದೇಶದಲ್ಲಿನ ಅಸಮಾನತೆಯನ್ನು ನೋಡಿ ಬೇಸರಪಟ್ಟುಕೊಂಡು ಅವರು ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ ಹಿಂದು ಧರ್ಮದಲ್ಲಿಯೇ ಸಾಯಲಾರೆ ಎಂದು ಬೌರ್ಧ ಧರ್ಮಕ್ಕೆ ಸೇರಿಕೊಂಡರು. ಅಸ್ಪೃಶ್ಯತೆ, ಅಸಮಾನತೆ ವಿರುದ್ದ ಹೋರಾಡಿದ ಮಹಾನ್ ಚೇತನರಾಗಿದ್ದ ಅಂಬೇಡ್ಕರ್ರವರ ವಿಚಾರ-ಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಎಲ್ಲರಲ್ಲಿ ಮೈಯಲ್ಲಿಯೂ ಹರಿಯುತ್ತಿರುವುದು ಒಂದೇ ರಕ್ತ. ನೀರು, ಆಹಾರ, ಗಾಳಿ ಸಮಾನವಾಗಿದೆ. ಆದರೆ ಜಾತೀಯತೆ ಮಾತ್ರ ಇನ್ನು ನಿರ್ಮೂಲನೆಯಾಗಿಲ್ಲ. ಅಂಬೇಡ್ಕರ್ ಲಂಡನ್ಗೆ ಹೋಗಬೇಕಾದರೆ ಅವರ ಹೆಂಡತಿ ಒಡವೆ ಮಾರಿ ಕಳಿಸಿಕೊಡುತ್ತಾರೆ. ದೇಶಕ್ಕಾಗಿ ಅವರ ತ್ಯಾಗವೂ ಇದೆ ಎಂದು ಸ್ಮರಿಸಿಕೊಂಡ ಎಸ್.ಬಿ.ವಸ್ತ್ರಮಠರವರು ಎಲ್ಲರೂ ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಅಂಬೇಡ್ಕರ್ರವರ ಆಶಯಗಳು ಈಡೇರಲು ಸಾಧ್ಯ ಎಂದು ಹೇಳಿದರು.
ವಕೀಲರ ಸಂಘದ ಹಿಂದಿನ ಅಧ್ಯಕ್ಷ ಎನ್.ಬಿ.ವಿಶ್ವನಾಥ್ ಮಾತನಾಡಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರಂತಹ ಮಹಾನ್ ಸಾಧಕರನ್ನು ನೆನಪಿಸಿಕೊಂಡು ಅವರ ಆದರ್ಶಗಳನ್ನು ಪಾಲಿಸಿದಾಗ ನಿಜವಾಗಿಯೂ ಅಂಬೇಡ್ಕರ್ ಜಯಂತಿಗೆ ಅರ್ಥ ಬರುತ್ತದೆ ಎಂದು ನುಡಿದರು.
ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡುತ್ತ ಏಪ್ರಿಲ್ ಹದಿನಾಲ್ಕರಂದು 154 ರಾಷ್ಟ್ರಗಳಲ್ಲಿ ಅಂಬೇಡ್ಕರ್ರವರ ಜಯಂತಿಯನ್ನು ಆಚರಿಸಲಾಗಿದೆ. ಹೋರಾಟಗಾರರು, ದಾರ್ಶನಿಕರು, ಕಾರ್ಮಿಕ ಮುಖಂಡರುಗಳನ್ನು ದೇಶ ಕೊಡುಗೆಯಾಗಿ ನೀಡಿದೆ. ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಹೋರಾಟ ಮಾಡಿದವರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಒಬ್ಬರು. ಅವರನ್ನು ಒಂದು ಜಾತಿಗೆ ಮೀಸಲಿರಿಸದೆ ಎಲ್ಲರೂ ಸ್ಮರಿಸಬೇಕು ಎಂದು ಕರೆ ನೀಡಿದರು.
ವೈಯಕ್ತಿಕ ಬದುಕನ್ನು ಬದಿಗೊತ್ತಿ ದೇಶಕ್ಕಾಗಿ ತ್ಯಾಗ ಮಾಡಿದ ಅಂಬೇಡ್ಕರ್ 1932 ರಲ್ಲಿ ನಡೆದ ಪೂನ ಒಪ್ಪಂದದಲ್ಲಿ ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡುವಂತೆ ಬ್ರಿಟೀಷರ ವಿರುದ್ದ ಹೋರಾಡಿದ ಮಹಾನ್ ಶಕ್ತಿ ಎಂದು ನೆನಪಿಸಿಕೊಂಡರು.
ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಅಂಬೇಡ್ಕರ್ ಕುರಿತು ಮಾತನಾಡಿದರು.
ಎರಡನೆ ಹೆಚ್ಚುವರಿ ನ್ಯಾಯಾಧೀಶರಾದ ವೀರಣ್ಣ, ಒಂದನೆ ಹೆಚ್ಚುವರಿ ನ್ಯಾಯಾಧೀಶರಾದ ಶಿವಣ್ಣ, ಎರಡನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಭಂಡಾರಿ, ಪ್ರಿನ್ಸಿಪಲ್ ಸಿವಿಲ್ ಜಡ್ಜ್ ನಂದ್ಯಾಲ್ ಸಮೀರ್, ವಕೀಲರ ಸಂಘದ ನೂತನ ಅಧ್ಯಕ್ಷ ಎಸ್.ವಿಜಯಕುಮಾರ್, ಉಪಾಧ್ಯಕ್ಷ ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಅನಿಲ್ಕುಮಾರ್, ಖಜಾಂಚಿ ಪ್ರಸನ್ನಕುಮಾರ್ ವೇದಿಕೆಯಲ್ಲಿದ್ದರು.
ನ್ಯಾಯವಾದಿಗಳಾದ ರವೀಂದ್ರ, ಶರಣಪ್ಪ, ಕುಮಾರಪ್ಪ, ಚಂದ್ರಪ್ಪ ಸೇರಿದಂತೆ ನೂರಾರು ವಕೀಲರು, ಸಮಾಜ ಸೇವಕಿ ಮುನಿರಾ ಎ.ಮಕಾಂದಾರ್ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದರು.ವಿಜಯಮ್ಮ ಪ್ರಾರ್ಥಿಸಿದರು. ನ್ಯಾಯವಾದಿ ಎನ್.ಚಂದ್ರಣ್ಣ ಸ್ವಾಗತಿಸಿದರು. ವೈ.ತಿಪ್ಪೇಸ್ವಾಮಿ ವಂದಿಸಿದರು. ನ್ಯಾಯವಾದಿ ಬಿ.ಟಿ.ರಾಜಣ್ಣ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
