ಶಿರಾ
ಬಸ್ ಪ್ರಯಾಣಿಕನೊಬ್ಬನ ಹಠದಿಂದಾಗಿ ಬಸ್ಸಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಮಾಯಕ ಪ್ರಯಾಣಿಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತಾವರೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಾವರೇಕೆರೆ ಸಮೀಪದ ಹೆದ್ದಾರಿಯಲ್ಲಿನ ಮಾರನಗೆರೆ ಬಳಿ ಪ್ರಯಾಣಿಕರಿದ್ದ ಬಸ್ಸೊಂದು ಚಲಿಸುತ್ತಿದ್ದಾಗ ರಾತ್ರಿ 1.30ರ ಸಮಯದಲ್ಲಿ ಪ್ರಯಾಣಿಕನೊಬ್ಬ ತಾನು ಮೂತ್ರ ವಿಸರ್ಜನೆ ಮಾಡಬೇಕೆಂದು ಚಾಲಕನಿಗೆ ಮನವಿ ಮಾಡಿದ್ದಾನೆ. ಇದು ಅಪಘಾತ ವಲಯವಾದ್ದರಿಂದ ಮುಂದೆ ನಿಲ್ಲಿಸುತ್ತೇನೆ ಎಂದು ಪ್ರಯಾಣಿಕನಿಗೆ ಬಸ್ ಚಾಲಕ ತಿಳಿಸಿದರೂ ಹಠದಿಂದ ಪ್ರಯಾಣಿಕ ಬಸ್ ನಿಲ್ಲಿಸುವಂತೆ ಮಾಡಿದ್ದನು ಎನ್ನಲಾಗಿದೆ.
ಒತ್ತಾಯಕ್ಕೆ ಮಣಿದ ಚಾಲಕ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದಾಗ ಮೂತ್ರ ವಿಸರ್ಜನೆಗೆಂದು ಸದರಿ ಪ್ರಯಾಣಿಕ ತೆರಳಿದಾಗ ಹಿಂಬದಿಯಿಂದ ಬಂದ ಲಾರಿಯೊಂದರ ಚಾಲಕನಿಗೆ ನಿಂತಿದ್ದ ಬಸ್ ಹತ್ತಿರಕ್ಕೆ ಬಂದಾಗ ಕಂಡಿದೆ ಎನ್ನಲಾಗಿದ್ದು, ಸದರಿ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 40 ವರ್ಷದ ಮಲ್ಲಪ್ಪ ಸಜ್ಜನ್ ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದು 10 ಮಂದಿಗೆ ಗಾಯಗಳಾಗಿವೆ. ಮೂತ್ರ
ವಿಸರ್ಜನೆಗೆಂದು ಹಠ ಮಾಡಿ ನಿಲ್ಲಿಸಿದ್ದ ಪ್ರಯಾಣಿಕನ ಮೇಲೆ ಬಸ್ ಚಾಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೆ ಪ್ರಯಾಣಿಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ತಾವರೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.