ಬ್ಯಾಡಗಿ:
ಜಾತಿ-ಧರ್ಮಗಳ ಬೇಧವಿಲ್ಲದೇ ಬಡ ಮಕ್ಕಳಿಗೆ ಉಚಿತವಾಗಿ ಅನ್ನ ಮತ್ತು ಶಿಕ್ಷಣ ದಾಸೋಹ ನೀಡುವಲ್ಲಿ ಲಿಂ.ಸಿದ್ಧಗಂಗಾಶ್ರೀಗಳು ತೆಗೆದುಕೊಂಡು ನಿಲುವು ಇಡೀ ವಿಶ್ವವನ್ನೇ ಬೆರಗಾಗುವಂತೆ ಮಾಡಿದೆ, ಶೈಕ್ಷಣಿಕವಾಗಿ ಸಮಾಜವನ್ನು ಸಮೃದ್ಧಿಗೊಳಿಸುವ ಮೂಲಕ ಸರ್ಕಾರದ ಮೇಲಿನ ಹೊರೆಯನ್ನು ಇಳಿಸಿದ ಶ್ರೀಮಠದ ಪರಂಪರೆಯನ್ನು ಮುಕ್ತಕಂಠದಿಂದ ಎಲ್ಲರೂ ಹೊಗಳಬೇಕಾಗಿದೆ ಎಂದು ಹುಕ್ಕೇರಿಮಠದ ಸದಾಶಿವಶ್ರೀಗಳು ಹೇಳಿದರು.
ಗಾನಯೋಗಿ ಕಲಾ ತಂಡದ ಆಶ್ರಯದಲ್ಲಿ ಪಟ್ಟಣದ ಅಟಲ್ಬಿಹಾರಿ ವಾಜಪೇಯಿ ರಂಗಮಂದಿರದಲ್ಲಿ ಜರುಗಿದ ತುಮಕೂರು ಸಿದ್ಧಗಂಗಾ ಮಠದ ಲಿಂ.ಶಿವಕುಮಾರ ಶ್ರೀಗಳ 112 ನೇ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕೇವಲ ಧಾರ್ಮಿಕ ಪ್ರಚಾರಕ್ಕಷ್ಟೇ ಸೀಮಿತಗೊಂಡಿದ್ದ ಮಠಗಳು ಅಂದಿನ ದಿನಗಳಲ್ಲಿ ಅಷ್ಟೊಂದಾಗಿ ಪ್ರಚಾರಕ್ಕೆ ಬಂದಿರಲಿಲ್ಲ,
ಅಷ್ಟೇ ಏಕೆ ಅವುಗಳ ಇರುವಿಕೆಯೂ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ ಆದರೆ ಕಳೆದ 20 ದಶಕಗಳಿಂದೀಚೆಗೆ ಬಹುತೇಕ ಮಠಗಳು ತಮ್ಮ ನಿಲುವುಗಳಲ್ಲಿ ಬದಲಾಯಿಸಿಕೊಂಡಿದ್ದು ಮೂಲಕ ಶೈಕ್ಷಣಿಕ ದಾಸೋಹವನ್ನು ನೀಡಲಾರಂಭಿಸಿದವು, ಇದರಲ್ಲಿ ತುಮಕೂರಿನ ಸಿದ್ಧಗಂಗಾಮಠ, ಮೈಸೂರಿನ ಸುತ್ತೂರುಮಠ, ಚಿತ್ರದುರ್ಗದ ಎಸ್ಜೆಎಂ, ಸಿರಿಗೆರೆಯ ತರಳಬಾಳುಮಠ, ಧರ್ಮಸ್ಥಳದ ಎಸ್ಡಿಎಂ, ನಾಗಮಂಗಲದ ಬಾಲ ಗಂಗಾಧರನಾಥ ಸ್ವಾಮೀಜಿ, ಬೆಳಗಾವಿಯ ಕೆಎಲ್ಈ,
ಕಲಬುರ್ಗಿಯ ಶರಣಬಸಪ್ಪ ಅಪ್ಪ, ಇಳಕಲ್ಲನ ಮಹಾಂತೇಶ್ವರ ಮಠ, ಬಾಳೆಹೊನ್ನೂರಿನ ರಂಭಾಪುರಿ ಮಠ, ಹುಬ್ಬಳ್ಳಿಯ ಮೂರುಸಾವಿರ ಮಠ ಹೀಗೆ ಸಾವಿರಾರು ಮಠಗಳು ಇಂದು ತಮ್ಮದೇ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದು ಮೂಲಕ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಹುಟ್ಟು ಹಾಕಿವೆ ಎಂದರು.
ಶರಣ ಪರಂಪರೆಯೇ ನಾಡಿಗೆ ಶಕ್ತಿ:ಶರಣ ಪರಂಪರೆಗಳು ರಾಜ್ಯಕ್ಕೆ ಇಂದು ಶೈಕ್ಷಣಿಕ ಶಕ್ತಿಯನ್ನು ತುಂಬಿಕೊಟ್ಟಿವೆ ಎಂದರೇ ತಪ್ಪಾಗಲಾರದು, ಕಾಯಕ ತತ್ವದೊಂದಿಗೆ ವರ್ಗ, ವರ್ಣ, ಜಾತಿ, ಧರ್ಮಗಳ ತೊಳಲಾಟದಿಂದ ಮುಕ್ತಗೊಳಿಸಿದ್ದಲ್ಲದೇ ಸಮಾಜವನ್ನು ಶೈಕ್ಷಣಿಕವಾಗಿ ಸದೃಡಗೊಳಿಸುವಲ್ಲ ದಾಪುಗಾಲು ಹಾಕಿವೆ, ಶರಣರ ತತ್ವಗಳು, ವಚನಗಳು ಸರ್ವಕಾಲಕ್ಕೂ ವಿದಿತ, ಸಮಾಜದಲ್ಲಿರುವ ಅಜ್ಞಾನ, ಮೌಢ್ಯತೆ ಹೋಗಲಾಡಿಸಿ ಶಕ್ತಿಯುತ ಸಮೃದ್ಧ ಸಮಾಜಕ್ಕೆ ಬಹುತೇಕ ಶ್ರೀಗಳೇ ಸ್ಪೂರ್ತಿಯಾಗಿ ನಿಂತಿದ್ದಾರೆ, ಅದರಲ್ಲೂ ಸಿದ್ಧಗಂಗಾಶ್ರೀಗಳು ಹಾಗೂ ಗದುಗಿನ ಪಂ.ಪುಟ್ಟರಾಜು ಗವಾಯಿಗಳು ಸಾಧನೆ ಅತ್ಯಂತ ಶ್ಲಾಘನೀಯ ಎಂದರು.
ಶ್ರೀಗಳ ಸಾಧನೆ ಪದಗಳಿಂದ ಬಣ್ಣಿಸಲು ಸಾಧ್ಯವಿಲ್ಲ:ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ಜಿಲ್ಲಾ ಕಬಡ್ಡಿ ಸಂಸ್ಥೆ ಅಧ್ಯಕ್ಷ ಮಂಜಣ್ಣ ಎಲಿ ಮಾತನಾಡಿ, ಸಿದ್ಧಗಂಗಾಶ್ರೀಗಳ ಸಾಧನೆಯನ್ನು ಕೇವಲ ಮಾತುಗಳಿಂದ ವರ್ಣಿಸಲು ಸಾಧ್ಯವಿಲ್ಲ, ವೀರಶೈವ ಪರಂಪರೆಯ ಮಠಾಧೀಶರೊಬ್ಬರು ಮುಂದಿನ ನೂರು ವರ್ಷದ ಬಳಿಕ ಸಮಾಜಕ್ಕೆ ಏನು ಅವಶ್ಯವಿದೆ..? ಅದು ಏನನ್ನು ಬಯಸುತ್ತದೆ..? ಅಂದಿನ ಅವಶ್ಯಕತೆಗಳನ್ನು ಏನೇಂಬುದನ್ನು ಕಳೆದ 100 ವರ್ಷಗಳ ಹಿಂದೆಯೇ ಆಲೋಚನೆ ಮಾಡಿಕೊಂಡಿದ್ದನ್ನು ಯಾವುದೇ ತರ್ಕಕ್ಕೂ ನಿಲುಕದ ಚಿಂತನೆಯಾಗಿದೆ ಎಂದರು.
ಗಾನಯೋಗಿ ಕಲಾತಂಡದ ಅಧ್ಯಕ್ಷ ವಿರಭದ್ರಪ್ಪ ಹೊಮ್ಮರಡಿ ಮಾತನಾಡಿ, ಶರಣರ ವಚನಗಳು ಯಾವುದೇ ಧರ್ಮ ಅಥವಾ ಜಾತಿಪ್ರಾಂತ್ಯಕ್ಕೆ ಸೇರಿದವುಗಳಲ್ಲ ಡಾಂಭಿಕ ಭಕ್ತಿ ಕಂದಾಚಾರ, ಅನಿಷ್ಟ ಸಂಪ್ರದಾಯ, ಸಾಮಾಜಿಕ ಮೌಢ್ಯ, ಮೂಢನಂಬಿಕೆ ಇವುಗಳನ್ನು ತೊಡೆದು ಹಾಕುವ ಮೂಲಕ ವಿಶ್ವ ಬಂಧುತ್ವದೊಂದಿಗೆ ಮಾನವತಾವಾದವನ್ನು ಸಾರುತ್ತಿವೆ, ಇಂತಹ ವಿಚಾರಗನ್ನು ತಿರಸ್ಕರಿಸಿದ ಪ್ರಸ್ತುತ ಸಮಾಜ ನೈತಿನಕವಾಗಿ ದುರ್ಬಲವಾಗಿದೆ ಇವೆಲ್ಲಾ ವಿಚಾರಗಳನ್ನೊಳಗೊಂಡ ಲಿಂ,ಶಿವಕುಮಾರಶ್ರೀಗಳು ದೇವರಿಗೆ ಸಮಾನ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸಾಮಾಜಿಕ ಕೆಲಸಗಳಲ್ಲಿ ತೊಡಗಿದ ಗಣ್ಯರು ಹಾಗೂ ಕಲಾವಿದರಿಗೆ ಸನ್ಮಾನಿಸಲಾಯಿತು, ವೇದಿಕೆಯಲ್ಲಿ ಜಯದೇವ ಶಿರೂರ, ನಾಗಣ್ಣ ಬಾರ್ಕಿ, ಕುಮಾರಗೌಡ್ರ ಪಾಟೀಲ, ಬಾಬಣ್ಣ ಮೇಲಗಿರಿ, ಬಿ.ಎಂ.ಕಡೇಕೊಪ್ಪ, ಚಂದ್ರಣ್ಣ ಅಂಗಡಿ, ಮಹಾಂತಪ್ಪ ಗೌಡ್ರ, ಯಮನಕ್ಕನವರ, ಚಿಕ್ಕಪ್ಪ ಛತ್ರದ, ಎಮ್.ಡಿ.ಚಿಕ್ಕಣ್ಣನವರ, ಗೀತಾ ಕಬ್ಬೂರ, ಎಮ್.ಎಫ್.ಕರಿಯಣ್ಣನವರ, ಮಾಲತೇಶ ದೇವಗಿರಿ, ಮಂಜುನಾಥ, ರೋಹಿಣಿ ಹುಣಶೀಮರದ, ಬಸವರಾಜ ಕರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
