ಚಿತ್ರದುರ್ಗ:
ಆರೋಗ್ಯಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ಗಳನ್ನು ಮಾರಾಟ ಮಾಡಬಾರದೆಂಬ ನಿಯಮವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಕವರ್ಗಳನ್ನು ಮಾರಾಟ ಮಾಡುತ್ತಿದ್ದವರ ಮೇಲೆ ನಗರಸಭೆಯವರು ಮಂಗಳವಾರ ನಾಲ್ಕು ಕಡೆ ದಾಳಿ ನಡೆಸಿ ಅಂದಾಜು ಹದಿಮೂರು ಕ್ವಿಂಟಾಲ್ ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊದಲು ಅಂಜುಮಾನ್ ಸರ್ಕಲ್ನ ಮನೆಯೊಂದರ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಂಡು ನಂತರ ಆತ ನೀಡಿದ ಸುಳಿವಿನ ಮೇರೆಗೆ ಸಂತೆಹೊಂಡ ಹಿಂಭಾಗ ಕನ್ನಿಕ ರಸ್ತೆಯಲ್ಲಿರುವ ಬೆಹರು ಟ್ರೇಡಿಂಗ್ಗೆ ಲಗ್ಗೆಯಿಟ್ಟ ನಗರಸಭೆ ಕಮೀಷನರ್ ಹಾಗೂ ಸಿಬ್ಬಂದಿ ಮಹಡಿ ಮೇಲಿರುವ ಮನೆಯಲ್ಲಿ ಹುಡುಕಾಟ ನಡೆಸಿ ನಂತರ ಬೀಗ ಹಾಕಿದ್ದ ಮಳಿಗೆಯೊಂದನ್ನು ತೆರೆಯುವಂತೆ ಮಾಲೀಕನಿಗೆ ಸೂಚಿಸಿದಾಗ ಸುಮಾರು ಅರ್ಧ ಗಂಟೆಗಳ ಕಾಲ ನಾವು ಯಾವ ಪ್ಲಾಸ್ಟಿಕ್ ಕವರ್ಗಳನ್ನು ಮಾರಾಟ ಮಾಡುವುದಿಲ್ಲವೆಂದು ವಾದಿಸಿದಾಗ ಇಲ್ಲಿ ಪ್ಲಾಸ್ಟಿಕ್ ಇದ್ದೆ ಇದೆ ಎಂದು ಖಚಿತಪಡಿಸಿಕೊಂಡ ನಂತರ ಪೊಲೀಸರ ಸಮ್ಮುಖದಲ್ಲಿ ಬೀಗ ಹೊಡೆದು ನೋಡಿದಾಗ ಸುಮಾರು ಹದಿನೈದಕ್ಕೂ ಹೆಚ್ಚು ಪ್ಲಾಸ್ಟಿಕ್ ಬಂಡಲ್ಗಳು ದೊರಕಿತು.
ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಜೈನ್ ಮಾರ್ಕೆಟ್ನ ಮನೆಯೊಂದರಲ್ಲಿಯೂ ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಂಡ ನಗರಸಭೆಯವರು ವಾಸವಿ ಶಾಲೆ ಹಿಂಭಾಗ ಬಾಲಾಜಿ ಟ್ರೇಡಿಂಗ್ನಲ್ಲಿ ಥರ್ಮಕೋಲ್ ತಟ್ಟೆ ಹಾಗೂ ಲೋಟಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡರು.
ನಗರಸಭೆ ಪೌರಾಯುಕ್ತರಾದ ಚಂದ್ರಪ್ಪ, ಪರಿಸರ ಇಂಜಿನಿಯರ್ ಜಾಫರ್, ಹೆಲ್ತ್ ಇನ್ಸ್ಪೆಕ್ಟರ್ಗಳಾದ ಕಾಂತರಾಜ್, ಸರಳ, ಭಾರತಿ, ಬಾಬುರೆಡ್ಡಿ, ಮಂಜುನಾಥ್, ಅಶೋಕ್, ಕಂದಾಯಾಧಿಕಾರಿ ವಾಸೀಂ, ದಫೆದಾರ್ಗಳಾದ ಲಿಂಗರಾಜು, ರವಿ ದಾಳಿಯಲ್ಲಿದ್ದರು.ಜಿಲ್ಲಾಧಿಕಾರಿ ಆರ್.ವಿನೋತ್ಪ್ರಿಯಾ ಬೆಹರು ಟ್ರೇಡಿಂಗ್ಗೆ ತೆರಳಿ ನಗರಸಭೆಯವರು ವಶಪಡಿಸಿಕೊಂಡಿರುವ ಪ್ಲಾಸ್ಟಿಕ್ಗಳನ್ನು ವೀಕ್ಷಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
