ಉಪಚುನಾವಣೆ : ಕಣದಲ್ಲಿ 165 ಅಭ್ಯರ್ಥಿಗಳು : ಸಂಜೀವ್ ಕುಮಾರ್

ಬೆಂಗಳೂರು

    ನಾಮಪತ್ರ ಸಲ್ಲಿಕೆ ಮಾಡಿದ್ದ 218 ಅಭ್ಯರ್ಥಿಗಳಲ್ಲಿ 53 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಒಟ್ಟು 165 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. ಉಪ ಚುನಾವಣೆಗೆ ಅಖಾಡ ಸಿದ್ಧವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

     ನಗರದ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿ 53 ಅಭ್ಯರ್ಥಿಗಳು ನಾಮಪತ್ರ ಹಿಂದೆ ಪಡೆದಿದ್ದು, ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

      ಶಿವಾಜಿನಗರದಲ್ಲಿ ಅತಿ ಹೆಚ್ಚು 19 ಅಭ್ಯರ್ಥಿಗಳಿದ್ದರೆ, ಹೊಸಕೋಟೆಯಲ್ಲಿ 17, ವಿಜಯನಗರ ಮತ್ತು ಕೆ.ಆರ್.ಪುರದಲ್ಲಿ ತಲಾ 13, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ನಲ್ಲಿ ತಲಾ 12, ಗೋಕಾಕ್ ನಲ್ಲಿ 11, ಹುಣಸೂರಿನಲ್ಲಿ 10, ಕಾಗವಾಡದಲ್ಲಿ 9 ಹಾಗೂ ಅಥಣಿಯಲ್ಲಿ 8, ಹಿರೇಕೆರೂರು , ಚಿಕ್ಕಬಳ್ಳಾಪುರ ಮತ್ತು ರಾಣಿಬೆನ್ನೂರಲ್ಲಿ ತಲಾ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 13 ಮಹಿಳೆಯರು, 205 ಪುರುಷರು ಸೇರಿ ಒಟ್ಟು 218 ನಾಮಪತ್ರ ಸಲ್ಲಿಕೆಯಾಗಿದ್ದವು. ಅದರಲ್ಲಿ ಶಿವಾಜಿನಗರದಲ್ಲಿ ಅತಿ ಹೆಚ್ಚು ಅಂದರೆ 26 ಉಮೇದುವಾರಿಕ ಸಲ್ಲಿಕೆಯಾಗಿದ್ದವು ಎಂದರು.

    ಶಿವಾಜಿನಗರದಲ್ಲಿ 19 ಮತ್ತು ಹೊಸಕೋಟೆಯಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು, ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿ ಇರುವ ಕ್ಷೇತ್ರಗಳಾಗಿದ್ದು 15 ಹೆಸರುಗಳು ಮಾತ್ರ ಒಂದು ಮತಯಂತ್ರದಲ್ಲಿರಲಿವೆ. ಹೀಗಾಗಿ ಶಿವಾಜಿನಗರ ಮತ್ರು ಹೊಸಕೋಟೆ ಎರಡು ಕ್ಷೇತ್ರಗಳಲ್ಲಿ ಎರಡು ಬ್ಯಾಲೆಟ್ ಮತಯಂತ್ರವನ್ನು ಬಳಕೆ ಮಾಡಲಾಗುತ್ತದೆ. ಉಳಿದ ಕಡೆ 15 ಕ್ಕಿಂತ ಕಡಿಮೆ ಅಭ್ಯರ್ಥಿಗಳಿದ್ದರೆ ಒಂದೇ ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

   ಅಥಣಿ-8, ಕಾಗವಾಡ-1, ಗೋಕಾಕ್-0, ಯಲ್ಲಾಪುರ-4, ಹಿರೆಕೆರೂರು-5, ರಾಣಿಬೆನ್ನೂರು-4 , ವಿಜಯನಗರ-3, ಚಿಕ್ಕಬಳ್ಳಾಪುರ-0, ಕೆ.ಆರ್.ಪುರ-2, ಮಹಾಲಕ್ಷ್ಮಿಲೇಔಟ್-1, ಶಿವಾಜಿನಗರ-7, ಹೊಸಕೋಟೆ-7, ಕೆ.ಆರ್.ಪೇಟೆ-0, ಹುಣಸೂರು-11 ಅಭ್ಯರ್ಥಿಗಳು ಸೇರಿ ಒಟ್ಟು 53 ನಾಮಪತ್ರ ವಾಪಸ್ ಪಡೆದಿದ್ದಾರೆ.

    ಉಪ ಚುನಾವಣೆ ಹಿನ್ನೆಲೆಯಲ್ಲಿ ಹೊಸದಾಗಿ ಬಣ್ಣದ ಬಾರ್ ಕೋಡ್ ಹೊಂದಿರುವ ಮತದಾರರ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಕಾರ್ಡ್ ರೀತಿಯ ವೋಟರ್ ಐಡಿ ನೀಡಲು ಆರಂಭಿಸಿದ್ದೇವೆ. ಬಾರ್ ಕೋಡ್‍ನೊಂದಿಗೆ ಮತದಾರರ ವಿವರ ಇದರಲ್ಲಿ ಇರಲಿದೆ. ಹೊಸ ಮತದಾರರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ, ಮತ್ತೊಂದು ಕಾರ್ಡ್ ಬೇಕು ಎಂದರೆ 30 ರೂ. ಶುಲ್ಕ ಪಡೆದು ನೀಡುತ್ತೇವೆ. ಈ ಮೊದಲು ಚಾಲ್ತಿಯಲ್ಲಿರುವ ಕಪ್ಪುಬಿಳುಪು ಬಣ್ಣದ ಪೇಪರ್ ಕಾರ್ಡ್‍ಗಳ ಬಳಕೆಯೂ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.

    ಎಂ.3 ಇವಿಎಂಗಳನ್ನು ಬಳಕೆ ಮಾಡಲಾಗುತ್ತಿದ್ದು, ಮತಯಂತ್ರಗಳಿಗೆ ಅಭ್ಯರ್ಥಿಗಳ ಹೆಸರು ಹಾಕಿ ಎಲ್ಲವನ್ನೂ ಕ್ಷೇತ್ರಗಳಿಗೆ ಕಳಿಸಿಕೊಡಲಾಗುತ್ತದೆ ಎಂದು ಸಂಜೀವ್ ಕುಮಾರ್ ತಿಳಿಸಿದರು. ಕ್ರಿಮಿನಲ್ ಹಿನ್ನೆಲೆ ಇರುವ ಅಭ್ಯರ್ಥಿಗಳು ತಮ್ಮ ಪ್ರಕರಣಗಳ ಬಗ್ಗೆ ಮೂರು ಪ್ರಮುಖ ದಿನಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಲ್ಲಿ ಜಾಹೀರಾತು ನೀಡಬೇಕು ಎನ್ನುವುದನ್ನು ಕಳೆದ ಚುನಟವಣೆಯಲ್ಲಿ ಪರಿಚಯಿಸಿದ್ದು ಈ ಬಾರಿಯೂ ಅದು ಮುಂದುವರಿಯಲಿದೆ ಎಂದರು.

     ಉತ್ತರ ಕನ್ನಡ, ಹಾವೇರಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಇಡೀ ಜಿಲ್ಲಾ ವ್ಯಾಪ್ತಿಗೆ ಹಾಗೂ ಅಥಣಿ, ಕಾಗವಾಡ ಮತ್ತು ಗೋಕಾಕ್ ನಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮಾತ್ರ ನೀತಿ ಸಂಹಿತೆ ಅನ್ವಯಿಸುತ್ತದೆ. ನೀತಿ ಸಂಹಿತೆ ಜಾರಿ ವಿಚಾರದಲ್ಲಿ ಕೆಲವು ಗೊಂದಲಗಳಿದ್ದು ಅದನ್ನು ಬಗೆಹರಿಸಲಾಗಿದೆ ಎಂದು ಅವರು ತಿಳಿಸಿದರು.

     ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ 282 ಮೊಬೈಲ್ ಟೀಂ ಗಳು ಕಾರ್ಯನಿರ್ವಹಿಸುತ್ತಿದ್ದು, 33,03,930 ರೂಪಾಯಿ ನಗದು ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 29,02,683 ರೂ ಮೌಲ್ಯದ ಸೀರೆಗಳನ್ನು ವಶಪಡಿಸಿಕೊಂಡಿದ್ದು, ಮತದಾರರಿಗೆ ಹಂಚಲು ತಂದಿದ್ದ ಸೀರೆಗಳು, ಫ್ಲೈಯಿಂಗ್ ಸ್ಕ್ವಾಡ್ ಗಳಿಂದ 95,19,291 ರೂ ವಶ, 3.5 ಲಕ್ಷ ಮೌಲ್ಯದ 99 ಸಾವಿರ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಚುನಾವಣಾ ಆಮಿಷಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬರುವ ಹಾಗೂ ವಿವಿಧ ರಾಜಕೀಯ ಪಕ್ಷಗಳು ನೀಡುವ ಹೇಳಿಕೆಯನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಜೆಡಿಎಸ್ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಆಮಿಷ ಒಡ್ಡಿದೆ ಎಂಬ ಮಾಜಿ ಪ್ರಧಾನಿ ದೇವೇಗೌಡ ಹಾಗೂ ವಿ.ಎಸ್.ಉಗ್ರಪ್ಪ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಂಜೀವ್ ಕುಮಾರ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link