ರಾಣೇಬೆನ್ನೂರು
ಇಲ್ಲಿನ ನಗರಸಭೆ ಸಭಾಭವನದಲ್ಲಿ 2020-21 ನೇ ಸಾಲಿನ ಆಯ-ವ್ಯಯ ಮಂಡನಾ ಸಭೆಯಲ್ಲಿ ಸರ್ಕಾರಿ ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆ, ಪಾರ್ಕಗಳ ಅಭಿವೃದ್ಧಿ, ನಗರದೆಲ್ಲೆಡೆ ಬೀದಿ ದೀಪಗಳ ಸಮಸ್ಯೆ, ರಾಜ ಕಾಲುವೆ ಸರ್ವೆ ಕಾರ್ಯ, ಪೌರಕಾರ್ಮಿಕರಿಗೆ ಸಮವಸ್ತ್ರ ನೀಡುವುದು, ಆರೋಗ್ಯ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು ಸೇರಿದಂತೆ ಹತ್ತು ಹಲವಾರು ಬಗೆಯ ಚರ್ಚೆಗಳು ನಡೆದವು.
ಇದಕ್ಕೂ ಮುನ್ನ ಆಯ-ವ್ಯಯ ಮಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಬಜೆಟ್ ಮಂಡಿಸಿದ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಪ್ರಾರಂಭಿಕ ಶಿಲ್ಕು 1387.58 ಲಕ್ಷ ರೂ.ಗಳು ಇದ್ದು, ನಿರೀಕ್ಷಿತ ರಾಜಸ್ವ ಜಮೆಗಳು 3221.82 ಲಕ್ಷ ರೂ.ಗಳು, ನಿರೀಕ್ಷಿತ ಬಂಡವಾಳ ಜಮೆಗಳು 1324.64 ರೂ.ಗಳು, ನಿರೀಕ್ಷಿತ ಅಸಮಾನ್ಯ ಜಮೆಗಳು 2048.76 ಲಕ್ಷ ರೂ.ಗಳು ಸೇರಿ ಒಟ್ಟು 6595.22 ಲಕ್ಷ ರೂ.ಗಳು ನಿರೀಕ್ಷಿತ ಜಮೆಗಳು ಆಗಿದೆ.
ನಿರೀಕ್ಷಿತ ರಾಜಸ್ವ ಪಾವತಿಗಳು 2497.82 ಲಕ್ಷ ರೂ.ಗಳು, ನಿರೀಕ್ಷಿತ ಬಂಡವಾಳ ಪಾವತಿಗಳು 3051.74 ಲಕ್ಷ ರೂ.ಗಳು, ನಿರೀಕ್ಷಿತ ಅಸಮಾನ್ಯ ಪಾವತಿಗಳು 2285.84 ಲಕ್ಷ ರೂ.ಗಳು ಆಗಿದ್ದು ಒಟ್ಟು 7835.40 ನಿರೀಕ್ಷಿತ ಪಾವತಿಗಳು ಆಗಿದ್ದು ಇದರಲ್ಲಿ 147.40 ಉಳಿತಾಯದ ಬಜೆಟ್ ನೀಡಲಾಗಿದೆ ಎಂದರು.
ನಗರಸಭೆ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ ಇತ್ಯಾದಿಗಳಿಂದ ಒಟ್ಟು ರೂ. 1666.82 ಲಕ್ಷಗಳ ಆದಾಯ ನಿರೀಕ್ಷಿಸಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ನಿರೀಕ್ಷಿತ ಅನುದಾನಗಳಾದ ಎಸ್ಎಫ್ಸಿ ಮುಕ್ತ ನಿಧಿಯಿಂದ ರೂ. 450.00 ಲಕ್ಷ ರೂ.ಗಳು. ಎಸ್ಎಫ್ಸಿ ವಿದ್ಯುತ್ ಅನುದಾನದಿಂದ ರೂ. 500.00 ಲಕ್ಷಗಳು. ಎಸ್ಎಫ್ಸಿ ವೇತನ ಅನುದಾನದಿಂದ ರೂ.450.00 ಲಕ್ಷಗಳು. ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ 15 ನೇ ಹಣಕಾಸು ಯೋಜನೆಯಡಿ ರೂ. 710.00 ಲಕ್ಷಗಳು. ಎಸ್ಎಫ್ಸಿ ಕುಡಿಯುವ ನೀರಿನ ಯೋಜನೆಗಾಗಿ ರೂ. 30.00 ಲಕ್ಷಗಳು, ಖಾಯಂ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ರೂ. 60.00 ಲಕ್ಷಗಳು, ಅಮೃತ ಯೋಜನೆಯಡಿ ಬಾಕಿ ಬಿಡುಗಡೆಯಾಗಬೇಕಾದ ಅನುದಾನ ರೂ. 84.64 ಲಕ್ಷಗಳು, ಎಸ್ಎಫ್ಸಿ ವಿಶೇಷ ಅನುದಾನ ರೂ. 500.00 ಲಕ್ಷಗಳು.
ಸರ್ಕಾರದಿಂದ ನಿರೀಕ್ಷಿಸಲಾದ ಈ ಎಲ್ಲ ಅನುದಾನವನ್ನು ರಸ್ತೆಗಳು ಹಾಗೂ ಚರಂಡಿ ನಿರ್ಮಾಣಕ್ಕಾಗಿ, ಪ್ರತಿ ವಾರ್ಡನಲ್ಲಿ ಡಾಂಬರ್ ಅಥವಾ ಕಾಂಕ್ರೀಟ್ ಬದಲಾಗಿ ಪೇವಿಂಗ್ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ನಗರದಲ್ಲಿನ ಎಲ್ಲೆಡೆ ಕುಡಿಯುವ ನೀರಿನ ಸಮರ್ಪಕ ಸರಬರಾಜಿಗೆ ರೂ. 397.02 ಲಕ್ಷಗಳನ್ನು ಮೀಸಲಿರಿಸಲಾಗುವುದು. ನಗರದ ಬಡಾವಣೆಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲಾಗುವುದು.
ಸಾರ್ವಜನಿಕರ ಹಿತ ದೃಷ್ಠಿಯಿಂದ ಸಿಸಿ ಕ್ಯಾಮೆರಾ ಅಳವಡಿಕೆ, ಪುಟ್ಪಾತ್ ನಿರ್ಮಾಣ, ಹಸರೀಕರಣಗೊಳಿಸಲು ರಸ್ತೆ ಬದಿ ಗಿಡ ನೆಡುವುದು, ಅಂಗನವಾಡಿ ಕೇಂದ್ರಗಳಲ್ಲಿ ಸ್ಮಾಟ್ ಕ್ಲಾಸ್ ನಡೆಸಲು, ನಗರಸಭೆ ಶಾಲೆ ಅಭಿವೃದ್ಧಿ, ದೊಡ್ಡ ಕೆರೆ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಘನತ್ಯಾಜ್ಯ ವಿಲೆವಾರಿ, ಯುಜಿಡಿ ಕಾಮಗಾರಿಗೆ 71 ಲಕ್ಷ ರು. ಮೀಸಲಿಡಲಾಗಿದೆ ಎಂದರು.
ನಗರಸಭಾ ಕಲಾಭವನ ಅಭಿವೃದ್ಧಿ, ಸರ್ಕಾರಿ ಕಟ್ಟಡಗಳ ಮೇಲೆ ಸರ್ಕಾರದ ಯೋಜನೆಗಳ ಕುರಿತು ಗೋಡೆ ಬರಹಕ್ಕಾಗಿ 10 ಲಕ್ಷ ರು. ಮೀಸಲಿರಿಸಲಾಗಿದೆ. ಕಚೇರಿ ರೆಕಾರ್ಡ್ ರೂಂ ಅಭಿವೃದ್ಧಿಗೆ 5 ಲಕ್ಷ ರೂ.ಗಳು, ಖಾಯಂ ಪೌರ ಕಾರ್ಮಿಕರಿಗೆ ಜಿ+1 ಮಾದರಿಗಳಲ್ಲಿ ಮನೆ ನಿರ್ಮಾಣ, ಮಳೆ ನೀರು ಚರಂಡಿ ಹಾಗೂ ರಾಜ ಕಾಲುವೆ ಅಭಿವೃದ್ಧಿ, ಸರ್ಕಾರಿ ಕಟ್ಟಡಗಳ ಮೇಲೆ ಮಳೆ ನೀರು ಕೊಯ್ಲು ನಿರ್ಮಾಣ, ನಗರದ ಮುಖ್ಯ ಸರ್ಕಲ್ಗಳಿಗೆ ಕಾರಂಜಿ ಹಾಗು ಲೈಟಿಂಗ್ ವ್ಯವಸ್ಥೆ, ಕ್ಲಾಕ್ ಅಳವಡಿಕೆ, ಉದ್ಯಾನವನಗಳ ಅಭಿವೃದ್ಧಿಸಿ ಒಪನ್ ಜಿಮ್ಗಳನ್ನು ಅಳವಡಿಸುವುದು.
ನಗರದಲ್ಲಿನ ಸ್ಮಶಾನ ಅಭಿವೃದ್ಧಿ, ನಗರದಲ್ಲಿನ ನಿರುದ್ಯೋಗ ಯುವಕ-ಯುವತಿಯರಿಗಾಗಿ ತರಭೇತಿ ಕಾರ್ಯಕ್ರಮ, ಸ್ವಸಹಾಯ ಗುಂಪುಗಳಿಗೆ ಆವರ್ತಕ ನಿಧಿ, ಬೀದಿ ವ್ಯಾಪಾರಸ್ಥರಿಗೆ ವಿವಿಧ ಸೌಲಭ್ಯ, ನಲ್ಮ ಯೋಜನೆಯಡಿ ನಗರದ ನಿರಾಶ್ರಿತರಿಗೆ ವಸತಿ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ನಿರಾಶ್ರಿತ ನಿರ್ವಹಣಾ ಕೇಂದ್ರವನ್ನು ಮೇಲ್ದರ್ಜೆಗೆರಿಸಿ ನಿರಾಶ್ರಿತರಿಗೆ ವಸತಿ ಕಲ್ಪಿಸಿ ಕೊಡುವುದು. ನಗರದ ವಿವಿಧ ಬಡಾವಣೆಗಳಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕಾಗಿ ಆದ್ಯತೆ, ನಿರುದ್ಯೋಗ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಮುಖಾಂತರ ಸಹಾಯ ಧನ ನೀಡುವುದು.
ರಾಜ್ಯ ರಾಷ್ಠ್ರಿಯ ಕ್ರೀಡೆ/ಕಲೆ/ಸಾಂಸ್ಕøತಿಕ ಹಾಗೂ ಇತರೆ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಸಹಾಯ ಧನ ನೀಡುವುದು. ಕಸ ನಿರ್ವಹಣೆ, ಸ್ವಚ್ಛತೆ, ನೀರಿನ ಮಿತವ್ಯಯ ಬಳಕೆ ಹಾಗೂ ಇತ್ಯಾದಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗುವುದು ಎಂದರು.
ನಗರಸಭೆ ಪೌರಾಯುಕ್ತ ಎನ್. ಮಹಾಂತೇಶ್, ನಗರಸಭೆ ಸದಸ್ಯರುಗಳಾದ ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ, ಪ್ರಕಾಶ ಪೂಜಾರ, ನಾಗರಾಜ ಪವಾರ, ಗಂಗಮ್ಮ ಹಾವನೂರ, ಶಶಿಧರ ಬಸೇನಾಯ್ಕರ, ನಿಂಗರಾಜ ಕೋಡಿಹಳ್ಳಿ, ಪ್ರಕಾಶ ಬುರಡಿಕಟ್ಟಿ, ರಮೇಶ ಕರಡೆಣ್ಣನವರ, ಪ್ರಭಾವತಿ ತಿಳುವಳ್ಳಿ, ನಗರಸಭೆ ಸಿಬ್ಬಂಧಿಗಳಾದ ಎಸ್.ಬಿ ಪಾಟೀಲ. ಎಲ್.ಶಂಕರ್, ಸಿಬ್ಬಂಧಿ ವರ್ಗದವರು ಸೇರಿದಂತೆ ನಗರಸಭೆಯ ಸರ್ವ ಸದಸ್ಯರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
