ರಸ್ತೆ ರೆಸ್ಟೊರೇಷನ್ ಅಪೂರ್ಣ:2 ಕಂಪನಿಗೆ ತಲಾ 1ಲಕ್ಷ, 1 ಕಂಪನಿಗೆ 50 ಸಾವಿರ ದಂಡ

ತುಮಕೂರು

       ತುಮಕೂರು ನಗರದಲ್ಲಿ ರಸ್ತೆ ಅಗೆದ ಬಳಿಕ ಅದನ್ನು ನಿಗದಿತ ಸಮಯದಲ್ಲಿ ನಿಯಮಾನುಸಾರ ಮತ್ತೆ ಯಥಾಸ್ಥಿತಿಗೆ (ರೆಸ್ಟೊರೇಷನ್) ತರದಿರುವ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಕಠಿಣ ಕ್ರಮ ಕೈಗೊಂಡಿದ್ದು, ಮೂರು ಪ್ರಮುಖ ಕಂಪನಿಗಳಿಗೆ ದಂಡ ವಿಧಿಸಿದೆ.

      ಎರಡು ಕಂಪನಿಗಳಿಗೆ ತಲಾ ಒಂದು ಲಕ್ಷ ರೂ. ಹಾಗೂ ಒಂದು ಕಂಪನಿಗೆ 50,000 ರೂ. ದಂಡವನ್ನು ವಿಧಿಸಲಾಗಿದೆ.

       ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರ ಅಧ್ಯಕ್ಷತೆಯಲ್ಲಿ ನಡೆದಿರುವ ಸಮನ್ವಯ ಸಮಿತಿ ಸಭೆಯಲ್ಲಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.

       “ರೆಸ್ಟೊರೇಷನ್ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದ ಕಾರಣ ಎಲ್ ಅಂಡ್ ಟಿ ಏಜೆನ್ಸಿಗೆ 1 ಲಕ್ಷ ರೂ., ಮೆಗಾ ಗ್ಯಾಸ್ ಏಜೆನ್ಸಿಗೆ 1 ಲಕ್ಷ ರೂ. ಹಾಗೂ ರಿಲೆಯನ್ಸ್ ಜಿಯೋ ಏಜೆನ್ಸಿಗೆ 50,000 ರೂ. ದಂಡ ವಿಧಿಸಲು ಆದೇಶಿಸಲಾಯಿತು. ಬೆಸ್ಕಾಂಗೆ ರೆಸ್ಟೊರೇಷನ್ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ಸೂಚಿಸಲಾಯಿತು” ಎಂದು ಆಯುಕ್ತರು ತಿಳಿಸಿದ್ದಾರೆ.

ಇನ್ನಿತರ ಸೂಚನೆಗಳು

      ಮನಗರದ 25 ನೇ ವಾರ್ಡ್‍ನ 1 ರಿಂದ 8 ನೇ ಮುಖ್ಯರಸ್ತೆಗಳ ರೆಸ್ಟೊರೇಷನ್ ಕಾಮಗಾರಿಯನ್ನು ಮೆಗಾ ಗ್ಯಾಸ್ ಕಂಪನಿಯು ತಕ್ಷಣವೇ ಪೂರ್ಣಗೊಳಿಸಲು ಈ ಸಭೆಯಲ್ಲಿ ಸೂಚಿಸಲಾಯಿತು. ಇದರ ವೆಚ್ಚವನ್ನು ಜಿಯೋ, ಎಲ್ ಅಂಡ್ ಟಿ ಮತ್ತು ಮೆಗಾ ಗ್ಯಾಸ್ ಕಂಪನಿಗಳು ಸಮನಾಗಿ ಭರಿಸಲು ಸೂಚಿಸಲಾಯಿತು.

     ಭಕಾಮಗಾರಿ ಸಂದರ್ಭದಲ್ಲಿ ರಸ್ತೆ ಪಕ್ಕದ ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದ್ದರೆ, ಅದನ್ನು ಎಲ್ಲ ಏಜೆನ್ಸಿಯವರೂ ತೆರವುಗೊಳಿಸಬೇಕು. ಇತ್ತೀಚಿನ ಮಳೆಯಿಂದ ಕುಸಿತಗೊಂಡಿರುವ ಸ್ಥಳಗಳಲ್ಲಿ ಪುನಃ ಮಣ್ಣನ್ನು ತುಂಬಿ ರೆಸ್ಟೊರೇಷನ್ ಕಾಮಗಾರಿ ಕೈಗೊಳ್ಳಬೇಕು.

        25 ನೇ ವಾರ್ಡ್‍ನಲ್ಲಿ ಮೆಗಾ ಗ್ಯಾಸ್ ಕಂಪನಿಯು ಉಳಿಕೆ ಕಾಮಗಾರಿಯನ್ನು ಹಾಗೂ 25,26,30,31 ರಲ್ಲಿ ರೆಸ್ಟೊರೇಷನ್ ಕಾಮಗಾರಿಯನ್ನು 15 ದಿನಗಳೊಳಗೆ ಪೂರ್ಣಗೊಳಿಸಲು ಹಾಗೂ ಇದಕ್ಕಾಗಿ ಪ್ರತ್ಯೇಕ ತಂಡ ಇರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

        ಸ್ಮಾರ್ಟ್ ರಸ್ತೆ ಕಾಮಗಾರಿ ಸ್ಥಳಗಳಲ್ಲಿ ಎಲ್ಲ ಏಜೆನ್ಸಿಯವರೂ ಪೈಪ್‍ಲೈನ್ ಮತ್ತು ಕೇಬಲ್ ಅಳವಡಿಕೆ ಕಾಮಗಾರಿಯನ್ನು ಆದ್ಯತೆ ಮೇಲೆ ನಿರ್ವಹಿಸಬೇಕು. ರಿಲೆಯನ್ಸ್ ಕಂಪನಿಯವರು ಇತ್ತೀಚಿನ ಮಳೆಯಿಂದಾಗಿ ಕುಸಿದಿರುವ ಎಲ್ಲ ಚೇಂಬರ್‍ಗಳ ಸುತ್ತಲೂ ರೆಸ್ಟೊರೇಷನ್ ಕಾಮಗಾರಿ ನಿರ್ವಹಿಸಬೇಕು ಎಂಬ ಸೂಚನೆಗಳನ್ನು ನೀಡಲಾಯಿತು.

     ಈ ಸಮನ್ವಯ ಸಮಿತಿ ಸಭೆಯಲ್ಲಿ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳಾದ ಬಿ.ತಿಪ್ಪೇರುದ್ರಪ್ಪ ಮತ್ತು ಬಿ.ಕೆ.ಆಶಾ, ಬೆಸ್ಕಾಂನ ಸಹಾಯಕ ಇಂಜಿನಿಯರ್ ಬಸವರಾಜ್, ಪಾಲಿಕೆಯ ಎಲ್ಲ ಇಂಜಿನಿಯರ್‍ಗಳು, ಮೆಗಾ ಗ್ಯಾಸ್‍ನ ಗಣೇಶ್ ಮತ್ತು ಸುನಿಲ್, ಎಲ್ ಅಂಡ್ ಟಿ ಕಂಪನಿ ಪರವಾಗಿ ನಿರ್ಮಲ್ ಕುಮಾರ್ ಮತ್ತು ದೀಪಕ್ ಕುಮಾರ್,ರಿಲೆಯನ್ಸ್‍ನ ಪ್ರಾಜೆಕ್ಟ್ ಮ್ಯಾನೇಜರ್‍ಗಳಾದ ಖುಮೀರ್ ಮತ್ತು ಶ್ರೀಧರ್, ಕರ್ನಾಟಕ ನಗರ ನೀರು ಪೂರೈಕೆ ಮಂಡಲಿಯ ಎ.ಇ.ಇ. ಈರಣ್ಣ, ಮಂಡಲಿಯ ಗುತ್ತಿಗೆದಾರ ರಮೇಶ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link