ಬೆಂಗಳೂರು
ಒಂದು ತಿಂಗಳ ಸಂಬಳ ನೀಡದಿದಕ್ಕೆ ಆಕ್ರೋಶಗೊಂಡ ಕಂಪನಿಯ ಮಾಲೀಕನನ್ನೇ ಎರಡು ಬಾರಿ ಅಪಹರಿಸಿ ರಾಡ್ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
ಹಲಸೂರಿನ ಂಜಯ್, ರಾಕೇಶ್, ನಿರಂಜನ್, ದರ್ಶನ್ ಬಂಧಿತ ಆರೋಪಿಗಳಾಗಿದ್ದು ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿ ಕೊಂಡಿರುವ ನಾಲ್ವರು ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ಕಾರ್ಯ ನಡೆಸಲಾಗಿದೆ.
ವಿಪರ್ಯಾಸವೆಂದರೆ ಅಪಹರಣಗೊಂಡು ಹಲ್ಲೆಗೊಳಗಾಗಿದ್ದ ಮಾಲೀಕ ಮನನೊಂದು ನಾಪತ್ತೆಯಾಗಿದ್ದಾನೆ. ಈ ಸಂಬಂಧ ಮತ್ತೆ ಹಲಸೂರು ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಹಲಸೂರಿನ ನಿವಾಸಿ ಎಸ್.ಕೆ. ಸುಜಯ್ ಎಂಬಾತ ನಗರದ ಇನ್ಫೋಟಿಕ್ ಸಾಫ್ಟ್ವೇರ್ ಕಂಪನಿಯನ್ನು ಕಳೆದ ಫೆಬ್ರುವರಿಯಲ್ಲಿ ತೆರೆದು. ಆರ್ಥಿಕ ತೊಂದರೆಯಿಂದ ಮಾರ್ಚ್ನಲ್ಲಿ ಕಂಪನಿ ಮುಚ್ಚಿ ಉದ್ಯೋಗಿಗಳಿಗೆ ವೇತನ ಕೊಡದೇ ಸತಾಯಿಸುತ್ತಿದ್ದ.
ಇದರಿಂದ ಆಕ್ರೋಶಗೊಂಡ 8 ಮಂದಿ ಉದ್ಯೋಗಿಗಳು ಮಾಲೀಕನನ್ನು ಕಳೆದ ತಿಂಗಳ 21ರಂದು ಹಲಸೂರು ಠಾಣಾ ವ್ಯಾಪ್ತಿಯ ಕೇಂಬ್ರಿಡ್ಜ್ ಲೇಔಟ್ ಬಳಿ ಕರೆಸಿಕೊಂಡಿದ್ದರು. ಅಲ್ಲಿಂದ ಕಾರಿನಲ್ಲಿ ಎಚ್ಎಸ್ಆರ್ ಲೇಔಟ್ಗೆ ಆರೋಪಿ ನಿರಂಜನ್ ಮನೆಗೆ ಕರೆದೊಯ್ದು ,ಕಬ್ಬಿಣದ ರಾಡ್ನಿಂದ ಸುಜಯ್ ತಲೆ, ಬೆನ್ನು, ಕೈ ಕಾಲಿಗೆ ಹಲ್ಲೆ ಮಾಡಿದ್ದರು.ಒಂದು ದಿನದ ಬಳಿಕ ಸುಜಯ್ನನ್ನು ಮನೆ ಬಳಿ ಬಿಟ್ಟು ಹೋಗಿದ್ದರು. ತಿಂಗಳ ಸಂಬಳ ನೀಡದಿದ್ದರೆ ಸುಳ್ಳು ಪ್ರಕರಣ ದಾಖಲಿಸಿ ಕುಟುಂಬಕ್ಕೆ ತೊಂದರೆ ಕೊಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು.
ಎರಡು ದಿನದ ಬಳಿಕ ತಮಿಳುನಾಡಿಗೆ ಹಣ ತರಲು ಹೋಗಿದ್ದ ಸುಜಯ್ಗೆ ಮತ್ತೆ ಅಪಹರಿಸಿ ಮದ್ದೂರಿಗೆ ಕರೆದೊಯ್ದು, ತೋಟ ವೊಂದರಲ್ಲಿ ಮತ್ತೊಮ್ಮೆ ಹಲ್ಲೆ ನಡೆಸಿ ಮಾರನೇ ದಿನ ಬೆಂಗಳೂರಿನ ವಿರುಪಾಕ್ಷಪುರಕ್ಕೆ ತಂದು ಬಿಟ್ಟಿದ್ದರು.ಆಟೋದಲ್ಲಿ ಮನೆಗೆ ಬಂದು ಸೇರಿದ್ದ ಸುಜಯ್ ಮನನೊಂದು ವಿಷ ಸೇವನೆ ಮಾಡಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಮನೆಗೆ ಹೋದ ನಂತರ ಖಿನ್ನತೆಗೊಂಡು ನಾಪತ್ತೆಯಾಗಿದ್ದಾರೆ ಎಂದು ಸುಜಯ್ ಪೊಷಕರು ನಾಪತ್ತೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹಾಗೂ ನಾಪತ್ತೆಯಾಗಿರುವ ಸುಜಯ್ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








