ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿಯವರಿಗೆ ಮತ ನೀಡುವಂತೆ ಮತದಾರರನ್ನು ವಿನಂತಿಸಲು ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರಮೋದಿ ಏ.9ರ ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಮೋದಿಯವರ ಬೃಹತ್ ಸಮಾವೇಶಕ್ಕೆ ತೆರಳಿದ್ದಾರೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆ ಮಂಡಿ ರಾಮದಾಸ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಈಗಾಗಲೇ ಬಿರುಸಿನ ಪ್ರಚಾರ ಕೈಗೊಂಡಿದ್ದು, ಶಕ್ತಿ ಕೇಂದ್ರಗಳ ಎಲ್ಲಾ ಘಟಕಗಳಿಗೆ ನಿರ್ದೇಶನ ನೀಡಿದ್ದು, ಕ್ಷೇತ್ರದ 259 ಶಕ್ತಿ ಕೇಂದ್ರಗಳಿಂದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ತಮ್ಮ ತಮ್ಮ ವಾಹನಗಳಲ್ಲಿ ಸಮಾವೇಶಕ್ಕೆ ಆಗಮಿಸಲಿದ್ದು, ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಚುನಾವಣೆ ಪ್ರಚಾರದಿಂದ ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಚಿತ್ರದುರ್ಗ ಕ್ಷೇತ್ರ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ ಎಂದರು.
ಈಗಾಗಲೇ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಸಭೆಯ ಬಗ್ಗೆ ಪ್ರಚಾರ ಕೈಗೊಂಡಿದ್ದು, ಎಲ್ಲೆಡೆ ಉತ್ತಮ ವಾತಾವರಣವಿದೆ. ಮೋದಿಯವರ ಆಗಮನ ಕುರಿತು ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಜನಜಾಗೃತಿ ಮೂಡಿಸಿದ್ದು, ಜನರು ನರೇಂದ್ರಮೋದಿಯವರ ಭಾಷಣವನ್ನು ಕೇಳಲು ಆತುರರಾಗಿದ್ದು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗ ಮೋದಿಯವರ ಹವಾ ಎಲ್ಲೆಡೆ ವ್ಯಾಪಿಸಿದೆ ಎಂದರು.
ಈಗಾಗಲೇ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಸ್ವಯಂ ಪ್ರೇರಿತರಾಗಿ ಸುಮಾರು ಸ30ಕ್ಕೂ ಹೆಚ್ಚು ಬಸ್, 20ಕ್ಕೂ ಹೆಚ್ಚು ಕ್ರೂಸರ್ ವಾಹನಗಳಲ್ಲಿ ಕಾರ್ಯಕರ್ತರು ತೆರಳಿದ್ದಾರೆ. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ದರ್ಶನ ಭಾಗ್ಯ ಪಡೆಯಲು ಭಾಷಣವನ್ನು ಆಲಿಸಲು ಸ್ವಯಂ ಪ್ರೇರಿತವಾಗಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ತಮ್ಮದೇಯಾದ ಖಾಸಗಿ ವಾಹನಗಳ ಮೂಲಕ ಚಿತ್ರದುರ್ಗಕ್ಕೆ ತೆರಳಿದ್ದು, ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಕಮಲ ಅರಳಲಿದೆ ಎಂದಿದ್ಧಾರೆ.