ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದ ನಾಡಿನ ಪುರಾತನ ಕಾಲದ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆರ್ಥಿಕ ನೆರವು ನೀಡುವ ಮೂಲಕ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಸಹಾಯ ಮಾಡುತ್ತಿದ್ದು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲ್ಲೂಕು ಯೋಜನಾಧಿಕಾರಿ ಲತಾ ಬಂಗೇರ ತಿಳಿಸಿದರು.
ಅವರು, ಶುಕ್ರವಾರ ತಾಲ್ಲೂಕಿನ ಜಾಜೂರು ವಲಯ ವ್ಯಾಪ್ತಿಯ ಕೊರ್ಲಕುಂಟೆ ಗ್ರಾಮದ ಈಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರಕ್ಕಾಗಿ 50 ಸಾವಿರ ಡಿಡಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಿಗೆ ಹಸ್ತಾಂತರಿಸಿ ಮಾತನಾಡಿದರು. ಗ್ರಾಮೀಣ ಭಾಗಗಳಲ್ಲಿ ಹಲವಾರು ಕಾರಣಗಳಿಂದಾಗಿ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಪ್ರಯತ್ನಿಸುವುದು ಕಡಿಮೆ. ಈ ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆ ವೈಪಲ್ಯದಿಂದ ಜನರು ಹೆಚ್ಚು ತೊಂದರೆಯಲ್ಲಿದ್ದು, ಪ್ರತಿಯೊಂದು ಹಂತದಲ್ಲೂ ದೇವರ ಮೊರೆ ಹೋಗುತ್ತಿದ್ಧಾರೆ.
ಗ್ರಾಮದ ಈಶ್ವರ ದೇವಸ್ಥಾನ ಇಲ್ಲಿನ ಸುತ್ತಮುತ್ತಲ ಗ್ರಾಮಗಳ ಭಕ್ತರ, ಭಕ್ತಿ ಶ್ರದ್ದಾ ಕೇಂದ್ರವಾಗಿದ್ದು, ದೇವಸ್ಥಾನ ಜೀರ್ಣೋದ್ದಾರವಾದಲ್ಲಿ ಎಲ್ಲಾ ಭಕ್ತರಿಗೂ ಶ್ರೀಸ್ವಾಮಿಯ ಕೃಪೆ ದೊರಕಲಿ ಎಂಬ ಉದ್ದೇಶದಿಂದ ಆರ್ಥಿಕ ನೆರವು ನೀಡಲಾಗಿದೆ ಎಂದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಸಿದ್ದಪ್ಪ ಡಿಡಿ ಸ್ವೀಕರಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನೀಡಿದ ಈ ಹಣವನ್ನು ದೇವಸ್ಥಾನದ ಅಭಿವೃದ್ಧಿಗಾಗಿ ಉಪಯೋಗಿಸಲಾಗುವುದು. ಗ್ರಾಮ ಈ ದೇವಸ್ಥಾನದ ಅಭಿವೃದ್ಧಿಗೆ ನೆರವು ನೀಡುತ್ತಿರುವ ಸಂಸ್ಥೆಯ ಕಾರ್ಯ ಪ್ರಶಂಸನೀಯವೆಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಮುಖಂಡರಾದ ರುದ್ರಮುನಿ, ಪ್ರಕಾಶ್, ಜಾಜೂರು ವಲಯ ಮೇಲ್ವಿಚಾರಕ ಡಿ.ಸೋಮಶೇಖರ್, ಸೇವಾಪ್ರತಿನಿಧಿಗಳಾದ ಶಾರದಮ್ಮ, ಒಕ್ಕೂಟದ ಅಧ್ಯಕ್ಷೆ ಉಮಾ ಮುಂತಾದವರು ಉಪಸ್ಥಿತರಿದ್ದರು.