ಬೆಂಗಳೂರು
ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 59 ಬಾಂಗ್ಲಾ ಪ್ರಜೆಗಳನ್ನು ಬಂಧಿಸಿ ಅವರ ದೇಶಕ್ಕೆ ವಾಪಸ್ ಕಳುಹಿಸಲು ನಗರದ ಪೊಲೀಸರು ಮುಂದಾಗಿರುವುದಕ್ಕೆ ಕೋಲ್ಕತ್ತಾದಲ್ಲಿ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಗಡಿಭದ್ರತಾ ಪಡೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ.
ನಗರದಲ್ಲಿ 59 ಬಾಂಗ್ಲಾ ಪ್ರಜೆಗಳನ್ನು ಬಂಧಿಸಿ ಅವರ ದೇಶಕ್ಕೆ ವಾಪಸ್ ಕಳುಹಿಸಲು ಮುಂದಾಗಿರುವುದಕ್ಕೆ ಕೋಲ್ಕತ್ತಾದಲ್ಲಿ ವಿರೋಧ ವ್ಯಕ್ತವಾಗಿಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೂರ್ವ ವಿಭಾಗದ ಡಿಸಿಪಿ ಎಸ್.ಡಿ.ಶರಣಪ್ಪ ಸೋಮವಾರ ಕೋಲ್ಕತ್ತಾಕ್ಕೆ ತೆರಳಿ ಬಿಎಸ್ಎಫ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಗಡಿಪಾರು ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಗಡಿಪಾರು ಮಾಡಲು ಆಯಾ ರಾಜ್ಯಗಳ ಪೊಲೀಸರು ಕೋಲ್ಕತ್ತಾಗೆ ಬರುತ್ತಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ಸಂಘಟನೆಗಳು ಹಲವು ದಿನಗಳಿಂದ ಪ್ರತಿಭಟನೆ ಆರಂಭಿಸಿವೆ. ಹೀಗಾಗಿ, ಗಡಿಪಾರು ಪ್ರಕ್ರಿಯೆ ಸ್ವಲ್ಪ ವಿಳಂಬವಾಗಲಿದೆ.
ಏಕಕಾಲದಲ್ಲಿ 59 ಮಂದಿಯನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ. ನಿತ್ಯ 10 ಮಂದಿಯನ್ನಷ್ಟೇ ಗಡಿಪಾರು ಮಾಡಲಾಗು ವುದೆಂದು ಬಿಎಸ್ಎಫ್ ಅಧಿಕಾರಿಗಳು ಹೇಳುತ್ತಿದ್ದಾರೆ. ಅವರ ಸೂಚನೆಯಂತೆ ಬಾಂಗ್ಲಾ ಪ್ರಜೆಗಳ ಗಡಿಪಾರಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮಂಗಳವಾರ ಅಥವಾ ಬುಧವಾರ 10 ಮಂದಿಯನ್ನು ಗಡಿಪಾರು ಮಾಡುವ ಪ್ರಕ್ರಿಯೆ ಆರಂಭವಾಗ ಲಿದೆ ’ ಎಂದು ಡಿಸಿಪಿ ಶರಣಪ್ಪ ಅವರ ಜೊತೆ ತೆರಳಿರುವ ಅಧಿಕಾರಿಗಳ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ರಾಮಮೂರ್ತಿನಗರ,ಮಾರತ್ತಹಳ್ಳಿ ಇನ್ನಿತರ ಕಡೆಗಳಲ್ಲಿ ಸಿಕ್ಕಿಬಿದ್ದಿದ್ದ 22 ಮಹಿಳೆಯರು ಸೇರಿದಂತೆ 59 ಬಾಂಗ್ಲಾ ಪ್ರಜೆಗಳನ್ನು ಕರೆದುಕೊಂಡು ನಗರದ ಪೊಲೀಸರ ವಿಶೇಷ ತಂಡ ಈಗಾಗಲೇ ಕೋಲ್ಕತ್ತಾ ತಲುಪಿದೆ.
‘59 ಮಂದಿ ಭಾರತದವರು. ಅವರೆಲ್ಲ ಅಮಾಯಕರು ಹಾಗೂ ಬಡವರು. ಯಾವುದೇ ವಿಚಾರಣೆ ನಡೆಸದೆ ಅವರನ್ನು ಬಾಂಗ್ಲಾ ಪ್ರಜೆಗಳೆಂದು ತೀರ್ಮಾನಿಸುವುದು ಯಾವ ನ್ಯಾಯ. ಅವರನ್ನು ಗಡಿಪಾರು ಮಾಡಲು ಬಿಡುವುದಿಲ್ಲ’ ಎಂದು ಸ್ಥಳೀಯ ಮಾನವ ಹಕ್ಕುಗಳ ಸಂಘಟನೆಗಳು ಪಟ್ಟು ಹಿಡಿದಿವೆ.
ಕೋಲ್ಕತ್ತಾ ಹಾಗೂ ಬಾಂಗ್ಲಾ ಗಡಿಯಲ್ಲಿ ಪ್ರತಿಭಟನೆ ಆರಂಭಿಸಿವೆ.ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಸ್ಥಳೀಯ ಪೊಲೀಸರು, ‘ಸದ್ಯಕ್ಕೆ ಗಡಿಪಾರು ಪ್ರಕ್ರಿಯೆ ಸ್ಥಗಿತಗೊಳಿಸಿ’ ಎಂದು ಹೇಳಿದ್ದಾರೆ. ಅದರಿಂದಾಗಿ 59 ಮಂದಿ ಬಾಂಗ್ಲಾದೇಶಿಯರ ಸಮೇತ ಬೆಂಗಳೂರು ಪೊಲೀಸರು, ಕೋಲ್ಕತ್ತಾದಲ್ಲೇ ಬೀಡು ಬಿಟ್ಟಿದ್ದಾರೆ. ಅವರ ವಸತಿಗೆ ಸ್ಥಳೀಯ ಕಲ್ಯಾಣ ಮಂಟಪವೊಂದರಲ್ಲಿ ವ್ಯವಸ್ಥೆ ಮಾಡಲಾಗಿದೆ. 24 ಗಂಟೆಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
