ಅಂಗನವಾಡಿ ಕಾರ್ಯಕರ್ತರ 6 ನೇ ಜಿಲ್ಲಾ ಸಮ್ಮೇಳನ

ತುರುವೇಕೆರೆ:
   
        ಅಂಗನವಾಡಿ ಕಾರ್ಯಕರ್ತರ ಉಳಿವಿಗಾಗಿ ಹಮ್ಮಿಕೊಳ್ಳಬಹುದಾದ ಕಾರ್ಯ ಚಟುವಟಿಕೆಗಳ ಬಗ್ಗೆ ರೂಪುರೇಷೆ ತಯಾರಿಸುವ ಸಲುವಾಗಿ ಇದೇ ತಿಂಗಳ 29 ಮತ್ತು 30 ರಂದು ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ 6 ನೇ ಜಿಲ್ಲಾ ಸಮ್ಮೇಳನವನ್ನು ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕೆ.ವಸಂತಕುಮಾರಿ ತಿಳಿಸಿದ್ದಾರೆ. 
         ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅಂಗನವಾಡಿಗಳಿಗೆ ಬಡವರು ಮತ್ತು ರೈತಾಪಿಗಳ ಮಕ್ಕಳೇ ವಿದ್ಯೆ ಕಲಿಯಲು ಬರುತ್ತಾರೆ. ರಾಜ್ಯದಲ್ಲಿ ಸುಮಾರು 45 ಲಕ್ಷ ಮಕ್ಕಳು ಅಂಗನವಾಡಿಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. 1975 ರಿಂದಲೂ ಪೋಲಿಯೋ, ಅಂಗವೈಕಲ್ಯದಿಂದ ಬಳಲುತ್ತಿರುವ ಮಕ್ಕಳ ಪೋಷಣೆ, ಶಿಶು ಹಾಗೂ ತಾಯಂದಿರ ರಕ್ಷಣೆ ಮಾಡುವಲ್ಲಿ ಅಂಗನವಾಡಿ ಕಾರ್ಯಕರ್ತರು ಬಹಳ ಶ್ರಮಿಸಿದ್ದಾರೆ. ಇಂತಹ ಕಾರ್ಯ ಮಾಡುತ್ತಿರುವ ಕಾರ್ಯಕರ್ತೆಯರನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಅಂಗನವಾಡಿ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವ ಆಲೋಚನೆಯನ್ನು ಮಾಡಿದೆ. ಇದು ದುರದೃಷ್ಠಕರ. 
       ಸಾಕಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಕುಡಿಯುವ ನೀರು ಮರೀಚಿಕೆಯಾಗಿದೆ. ಅಂಗನವಾಡಿಗಳು ದೇವಸ್ಥಾನ, ಸಮುದಾಯ ಭವನಗಳು ಮತ್ತು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಗುಣಮಟ್ಟದ ಆಹಾರದ ವಿತರಣೆಯಲ್ಲೂ ಲೋಪವಿದೆ. ಇವುಗಳನ್ನು ಅಭಿವೃಧ್ಧಿ ಪಡಿಸುವುದನ್ನು ಬಿಟ್ಟು ಸಮಸ್ಯೆಗಳನ್ನು ಸಮಸ್ಯೆಗಳನ್ನಾಗಿಯೇ ಬಿಡಲಾಗಿದೆ. ಇದು ಮುಂದೊಂದು ದಿನ ಮುಚ್ಚುವ ಉದ್ದೇಶವೆಂಬುದು ಸ್ಪಷ್ಠ. ಕೇಂದ್ರದ ಇಂತಹ ದುಷ್ಠ ಆಲೋಚನೆಯ ವಿರುದ್ಧ ಸಮರ ಸಾರಲು ಡಿ. 29 ಮತ್ತು 30 ರಂದು ಪಟ್ಟಣದ ಗುರುಸಿದ್ದರಾಮೇಶ್ವರ ಭವನದಲ್ಲಿ ಜಿಲ್ಲಾ ಸಮ್ಮೇಳವನ್ನು ಆಯೋಜಿಸಲಾಗಿದೆ. 
 
         ಜಿಲ್ಲೆಯ 6 ನೇ ಸಮಾವೇಶ ಇದಾಗಿದೆ. ಜಿಲ್ಲೆಯಿಂದ ಆಯ್ದ ಸುಮಾರು 500 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಬಹಿರಂಗ ಸಭೆಗೆ ಸುಮಾರು ಐದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಧ್ಯಕ್ಷೆ ಕೆ.ವಸಂತಕುಮಾರಿ ತಿಳಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಆಶಾರಾಣಿ, ಸಿಐಟಿಯು ನ ಸಂಚಾಲಕ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link