ತಲೆ ಎತ್ತುತ್ತಿದೆ ಧರ್ಮಸ್ಥಳ ದೇಗುಲ ಶೈಲಿ ಮಂಟಪ..!

ದಾವಣಗೆರೆ:

    ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಮೊದಲ ಬಾರಿಗೆ ಅಸ್ಸಾಂ ದೇವಸ್ಥಾನ ಶೈಲಿಯ ಮಂಟಪ ನಿರ್ಮಿಸಿ, ಗಣಪತಿ ಪ್ರತಿಷ್ಠಾಪಿಸಿ ರಾಜ್ಯದ ಗಮನ ಸೆಳೆದಿದ್ದ ಹಿಂದೂ ಮಹಾ ಗಣಪತಿ ಟ್ರಸ್ಟ್ ಈ ಬಾರಿ ಧರ್ಮಸ್ಥಳ ಮಂಜುನಾಥಸ್ವಾಮಿ ದೇಗುಲ ಶೈಲಿಯಲ್ಲಿ ಮಹಾ ಮಂಟಪ ನಿರ್ಮಿಸುತ್ತಿದೆ.

    ಹಿಂದೂ ಮಹಾಸಭಾ ಟ್ರಸ್ಟ್‍ನ ದ್ವಿತೀಯ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಕರ್ಷಣೆಯ ಕೇಂದ್ರವೇ ಈ ಬಾರಿ ಧರ್ಮಸ್ಥಳದ ಮಂಜುನಾಥಸ್ವಾಮಿ ದೇಗುಲ ಶೈಲಿಯ ಮಹಾ ಮಂಟಪವಾಗಿದೆ. ಆದ್ದರಿಂದ ನೆರೆಹೊರೆ ಜಿಲ್ಲೆಯ ಜನರು ಈ ಬೃಹತ್ ದೇಗುಲವನ್ನು ಭಕ್ತಿಯಿಂದ ಕಣ್ತುಂಬಿಕೊಳ್ಳಬಹುದಾಗಿದೆ.

    ಪ್ರೌಢಶಾಲಾ ಮೈದಾನದಲ್ಲಿ ಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಕೋಲ್ಕತ್ತಾದ 15 ಜನ ಕಾರ್ಮಿಕರು, ಕಲಾವಿದರು ಮಂಜುನಾಥಸ್ವಾಮಿಯ ದೇವಾಲಯದ ವಿನ್ಯಾಸ, ವೇದಿಕೆ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ, ಕಳೆದ ನಾಲ್ಕೈದು ದಿನಗಳ ಕಾಲ ನಿರಂತರವಾಗಿ ಎಡೆಬಿಡದೇ ಮಳೆ ಸುರಿದ ಪರಿಣಾಮ ಐದು ದಿನಗಳ ಕಾಲ ಮಂಟಪ ನಿರ್ಮಾಣ ಕಾರ್ಯಕ್ರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ಮಳೆ ಸ್ವಲ್ಪ ಕಡಿಮೆ ಯಾಗಿರುವುದರಿಂದ ಶುಕ್ರವಾರದಿಂದ ಮಂಟಪ ನಿರ್ಮಾಣ ಕಾರ್ಯ ಮತ್ತೆ ಆರಂಭವಾಗಿದೆ.

    45 ಅಡಿ ಎತ್ತರ, 160 ಅಡಿ ಅಗಲ ಹಾಗೂ 120 ಅಡಿ ಉದ್ದದ ವಿಸ್ತೀರ್ಣದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಬೃಹತ್ ಮಂಟಪ ನಿರ್ಮಾಣವಾಗುತ್ತಿದ್ದು, ಇದಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚು ಬೊಂಬು, ರೀಪಸ್ ಹಾಗೂ ಹೊರ ವಿನ್ಯಾಸಕ್ಕೆ 3 ಸಾವಿರ ಮೀಟರ್‍ಗೂ ಹೆಚ್ಚು ಬಟ್ಟೆ ಬಳಸಲಾಗುತ್ತಿದೆ. 25 ಅಡಿ ಎತ್ತರದ ವೇದಿಕೆ ಸಿದ್ಧವಾಗುತ್ತಿದೆ.

    ಈ ಬಾರಿ 16 ಅಡಿ ಎತ್ತರದ ಮಣ್ಣಿನ ಗಣಪತಿ ಮೂರ್ತಿಯು ಪುಣೆಯಲ್ಲಿ ನಿರ್ಮಾಣವಾಗುತ್ತಿದ್ದು, ಇದಕ್ಕೆ ಅಲ್ಲಿಯ ಕಲಾವಿದರು ವಿಶೇಷ ರೂಪ ಕೊಡುತ್ತಿದ್ದಾರೆ. ಹಾಗೆಯೇ 10 ಅಡಿ ಎತ್ತರದ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ಮೂರ್ತಿಯು ಸಿದ್ಧವಾಗುತ್ತಿದೆ. ಹೀಗಾಗಿ ಗಣಪತಿಯ ದರುಶನಕ್ಕೆ ಬರುವ ಭಕ್ತಾದಿಗಳಿಗೆ ಇಲ್ಲಿ ಗಣಪತಿ ಮತ್ತು ಶ್ರೀಮಂಜುನಾಥಸ್ವಾಮಿ ದರುಶನ ಭಾಗ್ಯವೂ ಸಿಗಲಿದೆ.

      ಸೆಪ್ಟೆಂಬರ್ 2ರಂದು ಪ್ರತಿಷ್ಠಾಪನೆಯಾಗಲಿರುವ ಶ್ರೀಗಣೇಶ ಮೂರ್ತಿಯನ್ನು 27ನೇ ದಿನಕ್ಕೆ ವಿಸರ್ಜಿಸಲು ಟ್ರಸ್ಟ್ ತೀರ್ಮಾನಿಸಿದ್ದು, ಮೊದಲ ಎರಡು ದಿನ ಹಾಗೂ ಕೊನೆಯ ಮೂರು ದಿನಗಳನ್ನು ಹೊರತು ಪಡಿಸಿ, ಉಳಿದ 21 ದಿನಗಳ ಕಾಲವೂ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ಶ್ರೀಮಂಜುನಾಥಸ್ವಾಮಿಯ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.ಈ ಮಹಾ ಮಂಟಪದ ಎರಡು ಕಡೆ ಪ್ರವೇಶದ್ವಾರ ನಿರ್ಮಿಸಲಾಗುತ್ತಿದ್ದು, ವಿಘ್ನನಿವಾರಕನ ದರುಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಅಲ್ಲದೇ, 30*40 ಅಡಿ ವಿಸ್ತೀರ್ಣದಲ್ಲಿ ಪ್ರತ್ಯೇಕ ವೇದಿಕೆ ನಿರ್ಮಿಸಿ, ಈ ವೇದಿಕೆಯಲ್ಲಿ ಪ್ರತಿದಿನ ಹಾಸ್ಯ, ಸಂಗೀತ ಕಲಾವಿದರಿಂದ ಮನರಂಜನೆ ಕಾರ್ಯಕ್ರಮ ಆಯೋಜಿಸಲುದ್ದೇಶಿಸಲಾಗಿದೆ ಎನ್ನುತ್ತಾರೆ ಹಿಂದೂ ಮಹಾ ಗಣಪತಿ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು.

      ಈ ದೇಗುಲದ ದರ್ಶನಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೂ ಆಮಂತ್ರಣ ನೀಡಲು ಬರುವ ವಾರ ಧರ್ಮಸ್ಥಳಕ್ಕೆ ತೆರಳುತ್ತಿದ್ದೇವೆ. ಸೆ.2ರಿಂದ 27 ದಿನಗಳ ಕಾಲ ಪ್ರತಿಷ್ಠಾಪನೆಗೊಳ್ಳುವ ಗಣಪತಿ ಮೂರ್ತಿಯನ್ನು ವಿರ್ಸಜಿಸುವ ದಿನದಂದು ಐದು ಲಕ್ಷಕ್ಕೂ ಹೆಚ್ಚಿನ ಭಕ್ತರು ಸೇರುವ ನಿರೀಕ್ಷೆ ಇದೆ. ಅಂದು ಬೃಹತ್ ಮೆರವಣಿಗೆಯೊಂದಿಗೆ ಮೂರ್ತಿಯನ್ನು ತುಂಗಭದ್ರೆಯ ಒಡಲಲ್ಲಿ ವಿಸರ್ಜಿಸಲಾಗುವುದು ಎಂದು ಅವರು ಪ್ರಜಾಪ್ರಗತಿಗೆ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link