ಹೊನ್ನಾಳಿ
ಚಾಲಕನ ನಿಯಂತ್ರಣ ತಪ್ಪಿ ಜೀಪ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಪ್ನಲ್ಲಿದ್ದ ಓರ್ವ ವ್ಯಕ್ತಿ ಸಾವಿಗೀಡಾಗಿ, ನಾಲ್ವರು ಗಾಯಗೊಂಡಿರುವ ದುರ್ಘಟನೆ ತಾಲೂಕಿನ ಕೆಂಗಲಹಳ್ಳಿ ಗ್ರಾಮದ ಬಳಿ ಭಾನುವಾರ ಸಂಜೆ ಸಂಭವಿಸಿದೆ. ಚಳ್ಳಕೆರೆ ತಾಲೂಕು ಹೊಸಹಳ್ಳಿ ಗ್ರಾಮದ ಎಚ್.ಸಿ. ರಾಜೇಂದ್ರಕುಮಾರ್(59) ಮೃತರು. ಹೊಸಹಳ್ಳಿ ಗ್ರಾಮದ ಕವಿತಾ(35), ಚರಣ್ಯ(9), ಧೀರಜ್(7) ಮತ್ತು ಎಚ್.ಎಸ್. ಚಿದಾನಂದ್(38) ಗಾಯಾಳುಗಳು. ಅವರಿಗೆ ಕೂಲಂಬಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಬಳಿಕ ದಾವಣಗೆರೆಯ ಎಸ್ಸೆಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಬನ್ನಿಕೋಡು ಕ್ಯಾಂಪ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹರೀಶ್-ಮಂಜುಳಾ ದಂಪತಿಯ ಮಗುವಿನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಎಚ್.ಸಿ. ರಾಜೇಂದ್ರಕುಮಾರ್, ಕವಿತಾ, ಚರಣ್ಯ, ಧೀರಜ್ ಮತ್ತು ಎಚ್.ಎಸ್. ಚಿದಾನಂದ್ ತಮ್ಮ ಸ್ವಗ್ರಾಮ ಚಳ್ಳಕೆರೆ ತಾಲೂಕು ಹೊಸಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಜೀಪ್ ನಿಯಂತ್ರಣ ತಪ್ಪಿ ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಮೃತ ಎಚ್.ಸಿ. ರಾಜೇಂದ್ರಕುಮಾರ್ ಸಂಬಂಧಿ ಎಚ್.ಎಸ್. ಇಂದೂಧರ್ ನೀಡಿದ ದೂರಿನ ಮೇರೆಗೆ ಹೊನ್ನಾಳಿ ಪಿಎಸ್ಸೈ ಟಿ.ಎನ್. ತಿಪ್ಪೇಸ್ವಾಮಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
