ದಾವಣಗೆರೆ:
ಭಾರತೀಯರ ಕೊಡುಗೆಯಾಗಿರುವ ಪಾರಂಪರಿಕ ವೈದ್ಯ ಪದ್ಧತಿಯು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಸರಿಸಲಿ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಹಾಗೂ ಮೂಲಿಕಾ ಉತ್ಸವದ ಸಮಾರೋಪ ಸಮಾರಂಭ ಸಾನಿಧ್ಯ ವಹಿಸಿ ಮಾತನಾಡಿದ ಅಅವರು, ಜಗತ್ತಿಗೆ ಭಾರತೀಯರ ಕೊಡುಗೆಯಾಗಿರುವ ಪಾರಂಪರಿಕ ವೈದ್ಯ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳೆಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಕಡಿಮೆ ಖರ್ಚಿನಲ್ಲಿ ಬಡಜನರಿಗೆ ದೊರೆಯ ಬಹುದಾದ ಯಾವುದಾದರೂ ವೈದ್ಯ ಪದ್ಧತಿ ಇದ್ದರೆ, ಅದು ಪಾರಂಪರಿಕ ವೈದ್ಯ ಪದ್ಧತಿ ಮಾತ್ರವಾಗಿದೆ. ಈ ಪದ್ಧತಿಯಲ್ಲಿ ನಮ್ಮ ಮನೆ ಹಾಗೂ ಸುತ್ತಮುತ್ತ ದೊರೆಯುವ ಗಿಡಮೂಲಿಕೆಗಳನ್ನು ಬಳಸಿಕೊಂಡು ಅನೇಕ ಕಾಯಿಲೆಗಳನ್ನು ವಾಸಿ ಮಾಡಬಹುದಾಗಿದೆ. ಆದ್ದರಿಂದ ಇದು ಅತ್ಯಂತ ಸರಳ ಚಿಕಿತ್ಸಾ ಪದ್ಧತಿಯಾಗಿದೆ ಎಂದು ವಿಶ್ಲೇಷಿಸಿದರು.
ನಾಡಿ ಮಿಡಿತದ ಮೂಲಕವೇ ನೋವು, ಕಾಯಿಲೆಯನ್ನು ಗ್ರಹಿಸಿ, ಆರೋಗ್ಯ ಸಮಸ್ಯೆಯನ್ನು ಗುಣಪಡಿಸಬಲ್ಲ ಸಾಮಥ್ರ್ಯದ ಜ್ಞಾನ ಪಾರಂಪರಿಕ ವೈದ್ಯರಿಗೆ ಇದೆ. ಇಂದು ಪ್ರತಿನಿತ್ಯ ಟಿವಿ ಮುಂದೆ ಕುಳಿತು ಕಾಲಹರಣ ಮಾಡುವುದರಿಂದ ಆರೋಗ್ಯಪೂರ್ಣ ಬದುಕು ಸಿಗುವುದಿಲ್ಲ. ಅದರ ಬದಲು ಪಾರಂಪರಿಕ ವೈದ್ಯ ಪದ್ಧತಿಯ ಜ್ಞಾನ ಪಡೆದು, ಸದ್ವಿನಿಯೋಗ ಮಾಡಿದರೆ ಸ್ವಾಸ್ಥ್ಯಯುತ ಸಮಾಜ ನಿರ್ಮಿಸಬಹುದು. ಹೀಗಾಗಿ ಎಲ್ಲರೂ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಬಿ.ಮಂಜುನಾಥ ಮಾತನಾಡಿ, ಜನಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅರಣ್ಯ ನಾಶವೂ ಹೆಚ್ಚಾಗುತ್ತಿದೆ. ಗಿಡ-ಮರ ಉಳಿಸಬೇಕೆಂಬ ಕಾಳಜಿ ಯಾರಿಗೂ ಇಲ್ಲವಾಗಿದೆ. ಶೇ.20ರಷ್ಟು ಮಾತ್ರ ಅರಣ್ಯವಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಶೇ.10ರಷ್ಟು ಮಾತ್ರವಿದೆ. ಆದರೆ, ಇತ್ತೀಚೆಗೆ ರೈತರಲ್ಲಿ ಜಾಗೃತಿ ಮೂಡುತ್ತಿರುವುದರಿಂದ ಜಿಲ್ಲೆಯಲ್ಲಿ ಹಸಿರು ಹೊದಿಕೆ ಹೆಚ್ಚಾಗುತ್ತಿದೆ. ಕಳೆದ ವರ್ಷ 6 ಲಕ್ಷ ಸಸಿಗಳನ್ನು ಇಲಾಖೆಯಿಂದ ಉಚಿತವಾಗಿ ನೀಡಿದ್ದೇವೆ ಎಂದರು.
ಅಗತ್ಯವಿರುವ ಔಷಧೀಯ ಸಸ್ಯಗಳನ್ನು ಒದಗಿಸಿದರೆ ಅರಣ್ಯ ಇಲಾಖೆಯ 7 ನರ್ಸರಿಗಳಲ್ಲಿ ಅವುಗಳನ್ನು ಸಂವರ್ಧಿಸಿ, ವೈದ್ಯರಿಗೆ ಉಚಿತವಾಗಿ ಕೊಡುವ ವ್ಯವಸ್ಥೆ ಮಾಡಲಾಗುವುದು. ಪಾರಂಪರಿಕ ವೈದ್ಯ ಪದ್ಧತಿ ಉಳಿಯುವ ನಿಟ್ಟಿನಲ್ಲಿ ಔಷಧೀಯ ಗಿಡಮೂಲಿಕೆಗಳನ್ನು ಉಳಿಸಿ ಬೆಳೆಸಬೇಕು. ಈ ದಿಸೆಯಲ್ಲಿ ಪ್ರತಿ ಹಳ್ಳಿಯಲ್ಲೂ ಔಷಧಿ ವನ ರೂಪಿಸಬೇಕೆಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ವೇದಮೂರ್ತಿ ಮಾತನಾಡಿ, ರೈತರ ಹೊಲ, ತೋಟಗಳಲ್ಲೇ ಸಾಕಷ್ಟು ಪ್ರಮಾಣದ ಔಷಧೀಯ ಸಸ್ಯಗಳಿದ್ದರೂ ಅವುಗಳ ಬಗ್ಗೆ ನಮಗೆ ಮಾಹಿತಿ ಇಲ್ಲವಾಗಿದೆ. ಅರಣ್ಯ ನಾಶದಿಂದ ನೈಸರ್ಗಿಕ ಔಷಧೀಯ ಸಸ್ಯಗಳು ನಶಿಸುತ್ತಿರುವ ಸಂದರ್ಭದಲ್ಲಿ ಅವುಗಳನ್ನು ನಾವೇ ಬೆಳೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ 2000ರಲ್ಲಿ ರಾಷ್ಟ್ರೀಯ ಔಷಧಿ ಸಸ್ಯಗಳ ಪ್ರಾಧಿಕಾರ ರಚನೆಯಾಗಿದ್ದು, ಔಷಧಿ ಗಿಡಗಳ ಮಿಷನ್ ಯೋಜನೆಯಡಿ ಗಿಡಮೂಲಿಕೆಗಳ ಉತ್ಪಾದನೆ, ಸಂಸ್ಕರಣೆ ಹಾಗೂ ಮಾರುಕಟ್ಟೆಗೆ ಸಬ್ಸಿಡಿ ನೀಡಲಾಗುತ್ತಿದೆ. ಆದ್ದರಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾನವಿ ಶಿವಶಕ್ತಿ ಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ, ಬಾಲಸುಬ್ರಹ್ಮಣ್ಯ ಗುರೂಜಿ, ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷ ನೇರ್ಲಿಗಿ ಗುರುಸಿದ್ಧಪ್ಪ, ಚುನಾವಣಾ ಸಮಿತಿ ಅಧ್ಯಕ್ಷ ಮುಕುಂದ ಮೈಗೂರು, ಪ್ರೊ.ಜಿ.ಹರಿರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
