ಹಾನಗಲ್ಲ :
ಸುಗ್ಗಿಯ ಕಾಲದಲ್ಲಿ ರೈತರು ಬೆಳೆದ ಫಸಲಿನ ಬೆಲೆ ಕುಸಿತವಾಗಿ ಆರ್ಥಿಕ ಸಂಕಷ್ಟ ಕ್ಕೆ ಗುರಿಯಾಗುವ ಮೂಲಕ ಕೃಷಿಕ ದಿವಾಳಿಯಾಗುವ ಸಂದರ್ಬಗಳೇ ಹೆಚ್ಚಾಗಿರುವಾಗ, ಈ ಕಾಲದಲ್ಲಿ ಅಡಮಾನ ಸಾಲ ಯೋಜನೆ ಆರಂಭಿಸಿರುವ ಪಟ್ಟಣದ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ ಕ್ರಮ ನಿಜಕ್ಕೂ ಸ್ವಾಗತಾರ್ಹ ಸಂಗತಿ ಎಂದು ಶಾಸಕ ಸಿ.ಎಂ.ಉದಾಸಿ ಹರ್ಷ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯಲ್ಲಿ ಅಡಕೆ ಅಡಮಾನ ಸಾಲ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹುಬೆಳೆ ಬಂದಾಗ ದರ ಕುಸಿತವಾಗುವುದು ಸಾಮಾನ್ಯ… ಇಂಥ ಸಂದರ್ಭದಲ್ಲಿ ಆತುರ ಹಾಗೂ ಸಾಲದ ಬಾಧೆಯಿಂದ ಹೊರಬರಲು ರೈಥೃಊ ಕೈಗೆ ಬಂದ ಬೆಲೆಗೆ ಫಸಲು ಮಾರದೇ, ಒಂದೆಡೆ ಸಂಗ್ರಹಿಸಿಟ್ಟುಕೊಂಡು ಅಗತ್ಯಕ್ಕೆ ತಕ್ಕಷ್ಟು ಸಾಲ ಪಡೆಯುವುದು ಉತ್ತಮ ಕ್ರಮವಾಗಿದೆ. ಇದಕ್ಕೆ ಸಹಕಾರಿಯಾಗುವ ರೀತಿಯನ್ನು ಬ್ಯಾಂಕ್ ಸಾಲ ಯೋಜನೆ ಆರಂಬಿಸಿರುವುದು ನಿಜಕ್ಕೂ ಒಳ್ಳೆಯ ಕ್ರಮ. ಈಗಾಗಲೇ ಭತ್ತ, ಗೋವಿನಜೋಳ ಸೇರಿದಂತೆ ಉಳಿದೆಲ್ಲ ಫಸಲುಗಳ ಮೇಲೆ ಸಾಲ ಸೌಲಭ್ಯ ದೊರೆಯುತ್ತಲಿವೆ. ಆದರೆ ತೋಟಗಾರಿಕೆ ಬೆಳೆಯ ಮೇಲೆ ಸಾಲ ನೀಡುವ ವ್ಯವಸ್ಥೆ ಈ ಭಾಗದಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ಇಲ್ಲಿನ ಶಿವಾಜಿ ಸಹಕಾರಿ ಸಂಸ್ಥೆ ಈ ಹೊಸದಾದ ಯೋಜನೆಯನ್ನು ಜಾರಿಗೊಳಿಸಿದೆ. ರೈತರು ಈ ಅವಕಾಶವನ್ನು ಬಳಸಿಕೊಂಡು ಮಾರುಕಟ್ಟೆಯಲ್ಲಿ ಯೋಗ್ಯ ದರ ಬಂದಾಗ ಮಾರಾಟ ಮಾಡಿ ಲಾಭ ಪಡೆಯಬಹುದಾಗಿದೆ ಎಂದು ಸೂಚಿಸಿದರು.
ಸಂಸ್ಥೆಯ ಅಧ್ಯಕ್ಷ ರಾಜು ಗೌಳಿ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಇತ್ತೀಚೆಗೆ ಅಡಕೆ ತೋಟಗಾರಿಕೆ ಕೃಷಿ ಕ್ಷೇತ್ರ ಹೆಚ್ಚುತ್ತಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯಿಂದ ರೈತರಿಗಾಗಿ ಹೊಸ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ. ಅಡಕೆ ಶೇಖರಣೆಗಾಗಿ ಗೋದಾಮು ಇದೆ. ಅಡಮಾನವಾದ ಅಡಕೆ ಹಾಳಾಗದಂತೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಡಕೆಗೆ ವಿಮಾ ಯೋಜನೆ ಅಳವಡಿಸುವ ಉದ್ದೇಶವೂ ಇದೆ. ಇದರಿಂದ ಯಾವುದೇ ನಷ್ಟಕ್ಕೆ ಅವಕಾಶವಿರುವುದಲ್ಲ. ರೈತರ ಫಸಲಿಗೆ ಇನ್ನಷ್ಟು ಸುರಕ್ಷತೆ ಸಾಧ್ಯವಾಗುತ್ತದೆ. ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇ ರೀತಿಯ ಮೋಸಕ್ಕೂ ಅವಕಾಶವಿಲ್ಲ. ಈ ಭಾಗದಲ್ಲಿರುವ ಚಿಕ್ಕ ಹಿಡುವಳಿದಾರ ತೋಟಗಾರರಿಗೆ ಈ ಯೋಜನೆ ಹೆಚ್ಚು ಲಾಭದಾಯಕವಾಗುತ್ತದೆ ಎಂದರು.
ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಆದಿಶಕ್ತಿ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಕಲಾಲ, ಸಂಸ್ಥೆಯ ಉಪಾಧ್ಯಕ್ಷ ರಾಮಚಂದ್ರ ಬೊಮ್ಮನಹಳ್ಳಿ, ಜನತಾ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ನಾಗೇಂದ್ರ ಬಂಕಾಪುರ, ವಿನೋದ ಅಚಲಕರ, ಶೇಖರ ಜೀವಾಜಿ, ಮಂಜಣ್ಣ ಕೂಸನೂರ, ಸುನೀಲ ಅರ್ಕಸಾಲಿ, ತೋಟಗಾರಿಕಾ ರೈತರಾದ ವಸಂತ ಕಂಕಾಳಿ, ಕೃಷ್ಣ ಶಿಂಧೆ, ನಾರಾಯಣ ಪವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
