ಹಿರಿಯೂರು :
ನಮ್ಮ ದೇಶದ ಎಲ್ಲಾ ಕಾನೂನುಗಳ ಮೂಲ ಈ ಸಂವಿಧಾನವಾಗಿದೆ. ಪ್ರಪಂಚದ ಅತಿದೊಡ್ಡ ಲಿಖಿತ ಸಂವಿಧಾನ ನಮ್ಮದಾಗಿದ್ದು, ದಿನಾಂಕ:26-11-1949ರಂದು ಇದನ್ನು ಮೊದಲಿಗೆ ಅಂಗೀಕರಿಸಲಾಯಿತು. ಈ ಸಂವಿಧಾನವು ದೇಶವನ್ನು ನಡೆಸುವ ಚೌಕಟ್ಟನ್ನು ಹಾಕಿಕೊಡುತ್ತದೆ ಎಂಬುದಾಗಿ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಡಿ. ನ್ಯಾಯಾಧೀಶರಾದ ಶಿಲ್ಪಿ ಬಿ.ವಿ.ಮನುಪಟೇಲ್ ಹೇಳಿದರು.
ತಾಲ್ಲೂಕಿನ ದೇವರಕೊಟ್ಟ ಮುರಾರ್ಜಿದೇಸಾಯಿ ವಸತಿಶಾಲೆ ಆವರಣದಲ್ಲಿ ಕಾನೂನು ಸೇವಾಸಮಿತಿ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಧೀಶರಾದ ಸಿ.ಎನ್.ಮುನಿರತ್ನಮ್ಮ ಮಾತನಾಡಿ, ಸಂವಿಧಾನದ ವಿರುದ್ಧವಾದ ವಿಷಯಗಳು ಶೂನ್ಯ ಅವುಗಳನ್ನು ಜಾರಿಗೆ ತರುವುದು ಅಸಾಧ್ಯ ಈ ಸಂವಿಧಾನ ಇಲ್ಲದೇ ಹೋದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರಾದ ಟಿ.ಜಗದೀಶ್, ಟಿ.ದೃವಕುಮಾರ್, ಹಾಗೂ ಅಬ್ಬಿಹೊಳೆ ಪಿಎಸ್ಐ ರಾಘವೇಂದ್ರರವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಬಸವರಾಜು, ವಕೀಲರಾದ ಎಸ್.ಈರಣ್ಣ, ಪ್ರಾಂಶುಪಾಲರಾದ ಜೆ.ಪ್ರಕಾಶ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ