ಹುಳಿಯಾರು ಪ.ಪಂ.ನಿಂದ ಗಣಪತಿ ವಿಸರ್ಜನೆಗೆ ವ್ಯವಸ್ಥೆ

ಹುಳಿಯಾರು

     ಪಟ್ಟಣದಲ್ಲಿ ಸಾರ್ವಜನಿಕರು ಮನೆಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿ ವಿಗ್ರಹಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹುಳಿಯಾರು ಪ.ಪಂ.ನಿಂದ ಕಲ್ಯಾಣಿಯ ವ್ಯವಸ್ಥೆ ಮಾಡಿರುವುದಾಗಿ ಪ.ಪಂ. ಮುಖ್ಯಾಧಿಕಾರಿ ಮಂಜುನಾಥ್ ಅವರು ತಿಳಿದ್ದಾರೆ.ಹುಳಿಯಾರು ಸಮೀಪದ ಮುಕ್ತಿಧಾಮದ ಬಳಿ ಲಿಂಗಪ್ಪನಪಾಳ್ಯದ ತಿರುವಿನಲ್ಲಿ ಗಣಪತಿ ವಿಸರ್ಜನೆಗಾಗಿಯೇ ಪುರಾತನ ಕಲ್ಯಾಣಿ ಕ್ಲೀನ್ ಮಾಡಿ ನೀರು ಬಿಟ್ಟು ವ್ಯವಸ್ಥೆ ಕಲ್ಪಿಸಿರುವುದಾಗಿ ಅವರು ತಿಳಿಸಿದ್ದಾರೆ.

    ಹುಳಿಯಾರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಗಳನ್ನು ಹುಳಿಯಾರು ಕೆರೆ ಅಥವಾ ತಿಮ್ಲಾಪುರ ಕೆರೆಯಲ್ಲಿ ವಿಸರ್ಜಿಸುತ್ತಿದ್ದರು. ಆದರೆ ಈ ಎರಡೂ ಕೆರೆಯಲ್ಲದೆ ಸಣ್ಣಪುಟ್ಟ ಕಟ್ಟೆಗಳಲ್ಲೂ ಸಹ ನೀರಿಲ್ಲದೆ ಬರಿದಾಗಿದೆ. ಪರಿಣಾಮ ಇಲ್ಲಿನ ನಿವಾಸಿಗಳಿಗೆ ಗಣಪತಿ ವಿಸರ್ಜನೆಗೆ ತೊಂದರೆಯಾಗಿತ್ತು.

    ಇದನ್ನು ಮನಗಂಡು ಸರ್ಕಾರಿ ಜಾಗದಲ್ಲಿ 5 ಅಡಿ ಗುಂಡಿ ತೆಗೆದು ಕೊಳವೆ ಬಾವಿಯಿಂದ ನೀರು ಬಿಟ್ಟು ತಾತ್ಕಾಲಿಕವಾಗಿ ಗಣಪತಿಗಳ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲು ಪ.ಪಂ.ನಿಂದ ಮುಂದಾದಾಗ ಮುಕ್ತಿಧಾಮದ ಪಕ್ಕ ಲಿಂಗಪ್ಪನಪಾಳ್ಯದ ತಿರುವಿನಲ್ಲಿ ಕಲ್ಯಾಣಿಯಿದ್ದು ಕಾಲಕ್ರಮೇಣ ಮುಚ್ಚಿ ಹೋಗಿದೆ ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದರು.

    ಹಾಗಾಗಿ ಕಲ್ಯಾಣಿ ಸ್ವಚ್ಛ ಮಾಡಿದರೆ ಗಣಪತಿ ವಿಸರ್ಜನೆಯ ಜೊತೆ ಮುಂದೆ ಮಳೆ ಬಂದಾಗ ನೀರು ನಿಂತು ಸ್ಥಳೀಯರು ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಲು ಸಹಕಾರಿಯಾಗುತ್ತದೆಂದು ನಿರ್ಧರಿಸಿ ಜೆಸಿಬಿಯ ಸಹಾಯದೊಂದಿಗೆ ಕಲ್ಯಾಣಿಯಲ್ಲಿ ತುಂಬಿದ್ದ ಮಣ್ಣು ತೆಗೆಯಲಾಯಿತು. ಅಚ್ಚರಿ ಎನ್ನುವಂತೆ ಗಣಪತಿ ವಿಸರ್ಜನೆಗೆ ಹೇಳಿ ಮಾಡಿಸಿದ ಐದಾರು ಅಡಿ ಆಳದ 10*10 ಅಗಲದ ಕಲ್ಲಿನಿಂದ ನಿರ್ಮಾಣವಾದ ಕಲ್ಯಾಣಿ ಪತ್ತೆಯಾಯಿತು.

    ಈಗ ಈ ಕಲ್ಯಾಣಿಗೆ ಕೊಳವೆ ಬಾವಿಯಿಂದ ನೀರು ತುಂಬಿಸಿದ್ದು ಸೋಮವಾರದಿಂದಲೇ ಇಲ್ಲಿ ಗಣಪತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ವಿಗ್ರಹದ ಜೊತೆಗೆ ಇರುವ ಹೂವು, ಪತ್ರೆ ಇತ್ಯಾದಿಗಳನ್ನು ಪ್ರತ್ಯೇಕವಾಗಿ ಕಲ್ಯಾಣಿಯ ಹೊರಗೆ ಹಾಕಿ, ಗಣಪತಿ ಮೂರ್ತಿಗಳನ್ನು ಮಾತ್ರ ವಿಸರ್ಜಿಸುವಂತೆ ತಿಳಿಸಿದರಲ್ಲದೆ 3 ದಿನಗಳ ಕಾಲ ನಿತ್ಯ ಇಲ್ಲಿ ನೀರು ತುಂಬಿಸಲಾಗುವುದು. ನಂತರದ ದಿನಗಳಲ್ಲಿ ಗಣಪತಿ ವಿಸರ್ಜಿಸುವವರು ಮಾಹಿತಿ ನೀಡಿದಾದಲ್ಲಿ ನೀರು ತುಂಬಿಸಿ ವಿಸರ್ಜನೆಗೆ ಅವಕಾಶ ಕಲ್ಪಿಸುವುದಾಗಿ ಅವರು ತಿಳಿಸಿದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link