ಹೊಸಪೇಟೆ
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಾನೇ ಜೈಲಿನಿಂದ ಹೊರ ಬಂದಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಇಂದು ವಿಜಯನಗರ ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಹೊಸಪೇಟೆಯ ವೇಣುಗೋಪಾಲ ದೇವಸ್ಥಾನದಲ್ಲಿ ಭೇಟಿ ಮಾಡಿದ ಗಣೇಶ್, ಆನಂದ ಸಿಂಗ್ ಅವರ ತಂದೆ ಪೃಥ್ವಿರಾಜ್ ಸಿಂಗ್ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಅಲ್ಲದೇ, ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ ಹೊಸಪೇಟೆಯಲ್ಲಿ ಈ ಘಟನೆ ನಡೆದಿದೆ.
ಆನಂದ್ ಸಿಂಗ್ ಪರಮಾಪ್ತ ಸಮೀವುಲ್ಲಾ ಮಧ್ಯಸ್ಥಿಕೆ
ನಂತರ ಹೊಸಪೇಟೆಯ ಪಟೇಲ್ ನಗರದಲ್ಲಿರುವ ಕೃಷ್ಣಾ ಮಂದಿರದಲ್ಲಿ ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ಒಂದು ಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆದಿದೆ ಎನ್ನಲಾಗಿದೆ. ಇನ್ನು ಕಮಲಾಪುರ ಮೂಲದ ಆನಂದ್ ಸಿಂಗ್ ಪರಮಾಪ್ತ ಸಮೀವುಲ್ಲಾ ಮಧ್ಯಸ್ಥಿಕೆಯಿಂದಾಗ ಈ ಭೇಟಿ ಸಾಧ್ಯವಾಗಿದ್ದು ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನು ಈ ಹಿಂದೆ ಆನಂದ್ಸಿಂಗ್ ಮೇಲೆ ಗಣೇಶ್ ಹಲ್ಲೆ ನಡೆಸಿದ್ರು ಎಂಬ ಆರೋಪ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದರು.