ಗುಬ್ಬಿ
ಕೊರೋನಾ ವಾರಿಯರ್ಸ್ಗಳಾಗಿ ದುಡಿದ ಅಂಗನವಾಡಿ ಸಿಬ್ಬಂದಿಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿರುವುದು ವಿಷಾದಕರ ಸಂಗತಿ ಎಂದು ಅಂಗವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಅನುಸೂಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಸಿಐಟಿಯು, ಎಐಟಿಯುಸಿ ನೇತೃತ್ವದಲ್ಲಿ ಆಗ್ರಹಿಸಿ ಕರೆ ನೀಡಿದ್ದ ಧರಣಿ ಹಿನ್ನಲೆಯಲ್ಲಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತರ ಸಂಘದ ಪದಾದಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಕೊರೋನಾದಿಂದ ಮೃತಪಟ್ಟಲ್ಲಿ 50 ಲಕ್ಷ ರೂ ವಿಮೆಗೆ ನಮ್ಮನ್ನು ಅಳವಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇಡೀ ಕುಟುಂಬಕ್ಕೆ ಕೋವಿಡ್ ತಪಾಸಣೆ ಮತ್ತು ಚಕಿತ್ಸೆಯನ್ನು ಉಚಿತವಾಗಿ ನೀಡಬೇಕು. ರಾಜ್ಯದಲ್ಲಿ 5 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜತೆಗೆ 35 ಮಂದಿ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ. ಈ ಜತೆಗೆ ಕೆಲಸದ ಒತ್ತಡದಿಂದ 23 ಮಂದಿ ನೌಕರರು ಮೃತಪಟ್ಟಿದ್ದಾರೆ. ಇವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನದ ಊಟದೊಂದಿಗೆ ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಸೇವೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ಖಂಡನೀಯ. ಸಾರ್ವಜನಿಕ ವಲಯಗಳ ಖಾಸಗೀರಣ ಮೊದಲು ನಿಲ್ಲಿಸಬೇಕು ಜತೆಗೆ ಸಮಗ್ರ ಶಿಶು ಅಭಿವೃದ್ದಿ ಯೋಜನೆ, ಆರೋಗ್ಯ ಮಿಶನ್ ಯೋಜನೆ ಮುಂತಾದ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನುಬಜಟ್ ಅನುದಾನದ ಹಂಚಿಕೆ ಮಾಡುವ ಜತೆ ಯೋಜನೆಯನ್ನು ಖಾಯಂ ಮಾಡುವಂತೆ ಒತ್ತಾಯಿಸಿದರು.
ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೊರೋನಾ ಸೋಂಕಿತರಾದಲ್ಲಿ ಅಂತಹ ಕಾರ್ಮಿಕರಿಗೆ 10 ಲಕ್ಷ ರೂ ಪರಿಹಾರ ನಿಧಿಯಿಂದ ನೀಡಿ ಅಪಾಯಕಾರಿ ಕೆಲಸದ ಭತ್ಯೆಯಾಗಿ 10 ಸಾವಿರ ರೂಗಳನ್ನು ಪ್ರತಿ ತಿಂಗಳು ನೀಡಲು ಸರ್ಕಾರ ಮುಂದಾಗಬೇಕು. ಕ್ವಾರಂಟೈನ್ ಸಂದರ್ಭದಲ್ಲಿ ಕೆಲಸ ಮಾಡಿದ ಬಿಸಿಯೂಟ ನೌಕರರಿಗೆ ವೇತನ ಮೂಡಲೇ ಪಾವತಿ ಮಾಡುವ ಜತೆಗೆ ಆದಾಯ ತೆರಿಗೆ ಪಾವತಿಸಲಾಗದ ಬಡ ಕುಟುಂಬಗಳಿಗೆ ಆರು ತಿಂಗಳ ಕಾಲ 7500 ರೂಗಳನ್ನು ಕನಿಷ್ಠ ವೇತನ ಪಾವತಿಸಿ ಮಾಸಿಕ ಪಿಂಚಣಿ 10 ಸಾವಿರ ರೂಗಳನ್ನು ನೀಡಬೇಕು ಎಂದು ತಾಲ್ಲೂಕು ಕಾರ್ಯದರ್ಶಿ ಸರೋಜಾ ಆಗ್ರಹಿಸಿದರು.ಈ ಸಂದರ್ಭದಲ್ಲಿ ಶಿರಸ್ತೇದಾರ್ ಶ್ರೀರಂಗ ಅವರಿಗೆ ಮನವಿಪತ್ರ ಸಲ್ಲಿಸಿದರು.ಧರಣಿಯಲ್ಲಿ ಸಂಘಟನೆಯ ಖಜಾಂಚಿ ವಿರೂಪಾಕ್ಷಮ್ಮ, ಚಂದ್ರಮ್ಮ, ಮಂಗಳಮ್ಮ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








