ಬಳ್ಳಾರಿ
ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿ ಈ ವರ್ಷ 872 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದ್ದು, ಕ್ರಿಯಾಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗಣಿಬಾಧಿತ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಕಲ್ಪಿಸಲು ಉದ್ದೇಶಿಸಲಾಗಿದ್ದು, ಬಹುಗ್ರಾಮ ಕುಡಿಯುವ ನೀರು ಯೋಜನೆ, ಶುದ್ದ ನೀರಿನ ಘಟಕಗಳು ಸೇರಿದಂತೆ ಕುಡಿಯುವ ನೀರಿನ ಯೋಜನೆಗಳಿಗಾಗಿ 200 ಕೋಟಿ ರೂ.ಗಳನ್ನು ಈ ವರ್ಷದ ಜಿಲ್ಲಾ ಖನಿಜ ನಿಧಿ ಅಡಿ ತೆಗೆದಿರಿಸಲಾಗಿದೆ ಎಂದು ಅವರು ತಿಳಿಸಿದರು.
ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಹೈಮಾಸ್ಟ್ ದ್ವೀಪ, ಶೌಚಾಲಯ ಮತ್ತು ಸ್ನಾನಗೃಹ ಹಾಗೂ ಇನ್ನೀತರ ಸೌಕರ್ಯಗಳ ಕಲ್ಪನೆ, ಹಂಪಿಯ ಪುಷ್ಕರ ಸ್ನಾನಘಟ್ಟ ಬಳಿ ಸೌಕರ್ಯ ಕಲ್ಪಿಸುವಿಕೆಯೂ ಅನುದಾನ ಕಾಯ್ದಿರಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆ ಅಥವಾ ಧಾರ್ಮಿಕ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಸ್ವಾಮಿಹಳ್ಳಿ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ದರೋಜಿ 10 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ, ಕುಡಿತಿನಿಯಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣ, ಬಳ್ಳಾರಿ ಮಹಾನಗರ ಪಾಲಿಕೆಗೆ ಫಾಗಿಂಗ್ ಮಶೀನ್ ಖರೀದಿ, ಸಂಗನಕಲ್ಲು ಆಸ್ಪತ್ರೆಗೆ ಸೌಕರ್ಯ ಕಲ್ಪಿಸುವಿಕೆ, ಜಿಲ್ಲಾಸ್ಪತ್ರೆಯಲ್ಲಿ ಡ್ರಗ್ ಸ್ಟೋರೆಜ್ ಯುನಿಟ್, ರೂಪನಗುಡಿ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆಗಳ ಒದಗಿಸುವಿಕೆ, ಕೊಟ್ಟೂರು ಆಸ್ಪತ್ರೆ ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಇಲಾಖೆಗೆ ಸಂಬಂಧಿತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಡಿಎಂಎಫ್ ಲೋಗೋ ನಾಮಫಲಕ ಅಳವಡಿಸಿ: ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದ ಮೂಲಕ ಕೈಗೊಂಡ ಕಾಮಗಾರಿಗಳ ಹತ್ತಿರ ಡಿಎಂಎಫ್ ಲೋಗೋ ಮತ್ತು ಅದಕ್ಕೆ ಸಂಬಂಧಿಸಿದ ವಿವರಣೆಯುಳ್ಳ ನಾಮಫಲಕಗಳನ್ನು ಕಡ್ಡಾಯವಾಗಿ ಅಧಿಕಾರಿಗಳು ಅಳವಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಕುಲ್ ಸೂಚನೆ ನೀಡಿದರು.
ಇದರಿಂದ ಡಿಎಂಎಫ್ ಅಡಿ ಕೆಲಸಗಳು ಆಗಿವೆ ಎಂಬುದು ಇದರಿಂದ ಜನರಿಗೆ ಗೊತ್ತಾಗುತ್ತದೆ ಎಂದು ಹೇಳಿದ ಡಿಸಿ ನಕುಲ್ ಅವರು, ಜಿಲ್ಲಾ ಖನಿಜ ನಿಧಿಗೆ ಸಂಬಂಧಿಸಿದ ಅನುದಾನದವನ್ನು ರೂಪಿತವಾಗಿರುವ ನಿಯಮಾವಳಿಗಳಂತೆ ಮಾಡಿ ಎಂದರು.ಖನಿಜ ನಿಧಿ ಬಳಕೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಇದಕ್ಕೆ ಸಂಬಂಧಿಸಿದಂತೆ ಆಗಾಗ ಸಭೆ ನಡೆಸುತ್ತಿದ್ದು, ಆದ ಕಾರಣ ಡಿಎಂಎಫ್ ಚೆಕ್ಲಿಸ್ಟ್ ಅನುಸಾರ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
*ಡಿಎಂಎಫ್ ಅಡಿ ಹೆಚ್ಚು ಹಣ ಜಿಲ್ಲಾ ಕೈಗಾರಿಕಾಕೇಂದ್ರಕ್ಕೆ; ಕ್ರಿಯೆಟಿವಿಟಿಯಿಂದ ಕೆಲಸ ಮಾಡಿ: ಕೌಶಲ್ಯ ಅಭಿವೃದ್ಧಿ, ಮಹಿಳಾ ಕೌಶಲ್ಯ ತರಬೇತಿ, ಮಹಿಳಾ ಉದ್ಯಮಶೀಲತಾ ಪಾರ್ಕ್ ಮತ್ತು ವಿವಿಧ ಉದ್ದೇಶಗಳ ಪಾರ್ಕ್ಗಳು, ವಿವಿಧ ರೀತಿಯ ತರಬೇತಿಗಳಿಗಾಗಿ ಜಿಲ್ಲಾ ಖನಿಜ ನಿಧಿ ಅಡಿ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಹೆಚ್ಚೆಚ್ಚು ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದ ಡಿಸಿ ನಕುಲ್ ಅವರು ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳು ಹೆಚ್ಚೆಚ್ಚು ಮುತುವರ್ಜಿ ವಹಿಸಿ ಕ್ರಿಯಾತ್ಮಕ ಆಲೋಚನೆಗಳೊಂದಿಗೆ ಕೆಲಸ ಮಾಡುವುದರ ಮೂಲಕ ಜಿಲ್ಲಾಡಳಿತದ ಕನಸನ್ನು ಸಾಕಾರಗೊಳಿಸುವ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.
ಡಿಎಂಎಫ್ ಅಡಿಯ ಅನುದಾನದಡಿ ಇದುವರೆಗೆ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿಯನ್ನು ಜಿಲ್ಲಾಧಿಕಾರಿ ನಕುಲ್ ಪರಿಶೀಲಿಸಿದರು.ಜಿಪಂ ಸಿಇಒ ಕೆ.ನಿತೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
