ಹಿರಿಯೂರು :
ಅತಂತ್ರಸ್ಥಿತಿಯ ಸಮ್ಮಿಶ್ರ ಸರ್ಕಾರಗಳು ದೇಶದ ಸರ್ವತೋಮುಖ ಅಭಿವೃದ್ಧಿಗೆ ಮಾರಕ ಎಂದು ಚಿತ್ರದುರ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ, ಕೃಷಿವಿಜ್ಞಾನಿ ಡಾ|| ಬಿ.ಮಹಂತೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ 17ನೇ ವಾರ್ಡ್ನಲ್ಲಿ ನಗರಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಹೆಚ್.ವೆಂಕಟೇಶ ಅವರ ಪರವಾಗಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ಪಾದಯಾತ್ರೆ ಕೈಗೊಂಡು ಮತಯಾಚಿಸಿ ಅವರು ಮಾತನಾಡಿದರು.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅತ್ಯಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಜನಾದೇಶ ಪಡೆದಿದ್ದರೂ ಸಹ ಎರಡನೆಯ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯುವ ಜೆಡಿಎಸ್ ಪಕ್ಷದೊಂದಿಗೆ ಕೈಜೋಡಿಸಿ ಮೈತ್ರಿ ಸರ್ಕಾರ ರಚಿಸಿ, ಕಳೆದ ಒಂದು ವರ್ಷದಿಂದ ಪರಸ್ಪರ ಹೊಂದಾಣಿಕೆ ಇಲ್ಲದೆ ಕಿತ್ತಾಡುವುದರ ಮೂಲಕ ರಾಜ್ಯದ ಅಭಿವೃದ್ಧಿ ಕುಂಠಿತವಾಗಿರುವುದು ಸಮ್ಮಿಶ್ರ ಸರ್ಕಾರಗಳ ಅತಂತ್ರತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ನಗರಸಭಾ ಚುನಾವಣೆಯ 17ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ಹೆಚ್.ವೆಂಕಟೇಶ ಮಾತನಾಡಿ, ಹಿರಿಯೂರು ನಗರದ ಸ್ವಚ್ಛತೆ, ಗುಣಮಟ್ಟ ರಸ್ತೆ, ಬೀದಿ ದೀಪ ಸೌಲಭ್ಯ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಉದ್ಯಾನವನಗಳ ಅಭಿವೃದ್ಧಿ, ನಗರ ಹಸಿರೀಕರಣ ಮುಂತಾದ ಹಲವಾರು ಮುಲಭೂತ ನಾಗರೀಕ ಸೌಲಭ್ಯಗಳನ್ನು ಒದಗಿಸಲು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ವಿ.ಹರ್ಷ, ಎಂ.ಎಸ್.ರಾಘವೇಂದ್ರ, ನಾಗರಾಜನ್, ಶಿವಣ್ಣ, ಅನಿಲ್ಕುಮಾರ್, ರಂಗನಾಥ, ನಾಗರಾಜ್, ಗೀತಮ್ಮ ಮುಂತಾದವರು ಉಪಸ್ಥಿತರಿದ್ದರು.