ಅತೃಪ್ತ ಶಾಸಕರಿಗೆ ಹಿನ್ನಡೆ: ರಾಜೀನಾಮೆಗೆ ಹಿಂಜರಿಕೆ

ಬೆಂಗಳೂರು

    ಎರಡು ದಿನಗಳ ಹಿಂದೆ ಶಾಸಕ ಸ್ಥಾನಕ್ಕೆ ಕಾಂಗ್ರೆಸ್‍ನ ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದು ಸರ್ಕಾರ ಪತನವಾಗಲಿದೆ ಎಂಬುದು ಹುಸಿಯಾಗುವಂತಾಗಿದೆ. ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿ 8-10 ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವಾದರೂ ಅದೇಕೋ ಏಕೋ ಏನೋ ಅತೃಪ್ತ ಶಾಸಕರ ರಾಜೀನಾಮೆ ಪರ್ವಕ್ಕೆ ಹಿನ್ನಡೆಯಾಗಿದೆ. ಕೆಲ ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ.

     ಕಳೆದ ಸೋಮವಾರ ಇಬ್ಬರು ಕೈ ಶಾಸಕರು ರಾಜೀನಾಮೆ ನೀಡಿ ಮುಂದುವರಿದ ಭಾಗವಾಗಿ 3-4 ಮಂದಿ ಶಾಸಕರು ಬುಧವಾರ ರಾಜೀನಾಮೆ ನೀಡುವುದು ನಿಶ್ಚಿತ ಎಂದು ಹೇಳಲಾಗಿತ್ತು. ಆದರೆ ಅತೃಪ್ತ ಶಾಸಕರಲ್ಲೇ ರಾಜೀನಾಮೆ ನೀಡುವ ವಿಚಾರದಲ್ಲಿ ಗೊಂದಲಗಳಾಗಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.

    ಕಾಂಗ್ರೆಸ್‍ನ ಅತೃಪ್ತ ಶಾಸಕರ ಗುಂಪಿನ ನಾಯಕರಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಮಂಗಳವರ ರಾತ್ರಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಅತೃಪ್ತ ಶಾಸಕರು, ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದು, ಮೊದಲು ಅವರು ರಾಜೀನಾಮೆ ಕೊಡಲಿ, ಇವರು ರಾಜೀನಾಮೆ ಕೊಡಲಿ ನಂತರ ನಾವೆಲ್ಲಾ ರಾಜೀನಾಮೆ ಕೊಡುತ್ತೇವೆ ಎಂದು ಸಬೂಬು ಹೇಳಿದ್ದಾರೆ.

      ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಶಾಸಕರಲ್ಲಿ ನಾವು ರಾಜೀನಾಮೆ ನೀಡಿದ ನಂತರ ಸಮ್ಮಿಶ್ರ ಸರ್ಕಾರ ಪಥನವಾಗದಿದ್ದರೆ ಏನು ಮಾಡುವುದು? ಸಮ್ಮಿಶ್ರ ಸರ್ಕಾರ ಪಥನವಾಗುವಷ್ಟು ಶಾಸಕರು ರಾಜೀನಾಮೆ ನೀಡುತ್ತಾರೆಯೇ? ಅಷ್ಟೊಂದು ಸಂಖ್ಯಾಬಲ ಇದೆಯೇ ಎಂಬ ಅನುಮಾನಗಳು ಕಾಡತೊಡಗಿವೆ. ಸುಮ್ಮನೆ ಸಂಖ್ಯಾಬಲವಿಲ್ಲದೆ 7-8 ಶಾಸಕರು ರಾಜೀನಾಮೆ ನೀಡಿದರೆ ತಮ್ಮ ಪರಿಸ್ಥಿತಿ ಇಂಗು ತಿಂದ ಮಂಗನಂತಾಗುತ್ತದೆ.

       ಅತ್ತ ಶಾಸಕ ಸ್ಥಾನವೂ ಇಲ್ಲ, ಇತ್ತ ಅಧಿಕಾರವು ಇಲ್ಲದಂತಾಗುತ್ತದೆ. ಹೀಗಾಗಿ ಎಲ್ಲವನ್ನು ಕಾದು ನೋಡಿ ಸರ್ಕಾರವನ್ನು ಉರುಳಿಸುವಷ್ಟು ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ರಾಜೀನಾಮೆ ನೀಡೋಣ ಎಂಬ ಮನಸ್ಥಿತಿಗೆ ಅತೃಪ್ತ ಶಾಸಕರು ಬಂದಿರುವುದು ಸರ್ಕಾರವನ್ನು ಅಸ್ಥಿರಗೊಳಿಸಲು ಸರಣಿ ರಾಜೀನಾಮೆಯ ತಂತ್ರ ಹೂಡಿದ್ದ ಬಿಜೆಪಿ ನಾಯಕರಲ್ಲಿ ತಳಮಳಕ್ಕೆ ಕಾರಣವಾಗಿದೆ.

      ಬಿಜೆಪಿಯ ವರಿಷ್ಠರೆ ನೇರವಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅತೃಪ್ತ ಶಾಸಕರ ಗುಂಪಿನಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಶಾಸಕರ ರಾಜೀನಾಮೆ ಪರ್ವ ಸದ್ಯಕ್ಕೆ ಸಾಕಾರಗೊಳ್ಳುವ ಸಾಧ್ಯತೆಗಳು ಕಾಣುತ್ತಿಲ್ಲ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿ ಅವರ ರಾಜೀನಾಮೆ ಪತ್ರವನ್ನು ತೋರಿಸಿದ್ದರೂ ಆ ಪತ್ರ ಇನ್ನೂ ಸಭಾಧ್ಯಕ್ಷರಿಗೆ ತಲುಪಿಲ್ಲ.

      ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಬುಧವಾರ ಬೆಂಗಳೂರಿನಲ್ಲೇ ಇದ್ದರು. ಮಧ್ಯಾಹ್ನದವರೆಗೂ ಯಾವೊಬ್ಬ ಶಾಸಕರು ಅವರನ್ನು ಭೇಟಿ ಮಾಡಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳುತ್ತಿದ್ದ ರಮೇಶ್‍ಜಾರಕಿಹೊಳಿ ಸಹ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡದಿರುವುದು ನಾನಾ ವಾಖ್ಯಾನಗಳಿಗೆ ಕಾರಣವಾಗಿದೆ.

        ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೋ, ಇಲ್ಲವೋ ಎಂಬುದೇ ಖಚಿತವಾಗಿಲ್ಲ. ಹಾಗಾಗಿ ಹಲವು ಅತೃಪ್ತ ಶಾಸಕರು ರಾಜೀನಾಮೆ ನೀಡಲು ಒಪ್ಪುತ್ತಿಲ್ಲ. ಮಂಗಳವಾರ ಸಭೆ ಸೇರಿದ್ದ ಐದಾರು ಮಂದಿ ಅತೃಪ್ತ ಶಾಸಕರು ಮೊದಲು ಬೇರೆ ಶಾಸಕರನ್ನು ರಾಜೀನಾಮೆ ಕೊಡಿಸಿ ಸರ್ಕಾರ ಬೀಳಿಸಬಹುದು ಎಂಬುದನ್ನು ಖಚಿತಪಡಿಸಿ, ನಂತರ ನಾವು ರಾಜೀನಾಮೆ ನೀಡುತ್ತೇವೆ ಎಂದು ಹೇಳಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಷ್ಟು ಶಾಸಕರಿಂದ ರಾಜೀನಾಮೆ ಕೊಡಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಕನಿಷ್ಠ 7-8 ಶಾಸಕರು ಮಾತ್ರ ರಾಜೀನಾಮೆ ಕೊಡಬಹುದು.

        ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದು ದೋಸ್ತಿ ಪಕ್ಷಗಳ ನಾಯಕರ ಲೆಕ್ಕಾಚಾರವಾಗಿದೆ. ಹಾಗಾಗಿಯೇ ದೋಸ್ತಿ ನಾಯಕರುಗಳು ಸದ್ಯಕ್ಕೆ ಯಾವುದೇ ಶಾಸಕರನ್ನು ಓಲೈಸುವ ಪ್ರಯತ್ನವನ್ನು ನಡೆಸಿಲ್ಲ. ಬೆಳವಣಿಗೆಗಳನ್ನು ಕಾದು ನೋಡಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ದೋಸ್ತಿ ನಾಯಕರು ತೀರ್ಮಾನಿಸಿದ್ದಾರೆ. ಅತೃಪ್ತ ಶಾಸಕರು ತಕ್ಷಣಕ್ಕೆ ರಾಜೀನಾಮೆ ಕೊಡಲು ಹಿಂದೇಟು ಹಾಕಿರುವುದರಿಂದ ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link