ರಾಣೇಬೆನ್ನೂರು
ಸ್ವತ: ತಾನು ಬೆಳೆದ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದ ರೈತ ಹೊನ್ನಪ್ಪ ಪುಟ್ಟಕ್ಕನವರ ಕೂಗನ್ನು ಅರಿತ ಕೃಷಿ ಸಚಿವ ಬಿ.ಸಿ. ಪಾಟೀಲ ಮುದೇನೂರ ಗ್ರಾಮದಲ್ಲಿ ಬೆಂಕಿಗೆ ಆಹುತಿಯಾದ ಕಬ್ಬಿನ ಹೊಲಕ್ಕೆ ಭೇಟಿ ನೀಡಿ ರೈತನನ್ನು ಸಂತೈಸುವ ಕಾರ್ಯಕ್ಕೆ ಮುಂದಾದರು.
ಈ ಹಿಂದೆಯೇ ಕಾರ್ಖಾನೆ ಮೇಲಾಧಿಕಾರಿಗಳಿಗೆ, ತಹಶೀಲದಾರ ಸೇರಿದಂತೆ ಸಂಬಂಧಿಸಿ ಅಧಿಕಾರಿಗಳಿಗೆ ಈ ವಿಷಯವನ್ನು ಮನದಟ್ಟು ಮಾಡಿದ್ದರೂ ಸಹಿತ ಯಾವೊಬ್ಬ ಅಧಿಕಾರಿಗಳು ನಮ್ಮ ನೆರವಿಗೆ ಬಂದಿರುವುದಿಲ್ಲಾ ಇದರಿಂದ ನಾನು ಕಷ್ಟಪಟ್ಟು ಸಾಲ ಮಾಡಿ ಬೆಳೆದ ಕಬ್ಬು ಕೈಗೆ ಬಂದರೂ ಬಾಯಿಗೆ ಬರದ ಸ್ಥಿತಿ ಬಂದೊದಗಿತು. ಇದರಿಂದ ಮನನೊಂದು ಬೆಂಕಿ ಹಚ್ಚುವ ಕಾರ್ಯಕ್ಕೆ ಮುಂದಾಗಿರುವೆ ಎಂದು ರೈತ ಪುಟ್ಟಕ್ಕನವರ ತಮ್ಮ ಅಸಹಾಯಕತೆಯನ್ನು ಸಚಿವ ಬಿ.ಸಿ.ಪಾಟೀಲರ ಮುಂದೆ ತೋಡಿಕೊಂಡರು.
ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಸತತ ಬರಗಾಲ ಮತ್ತು ಅತೀವೃಷ್ಠಿಯಿಂದ ಬೇಸತ್ತು ಕಬ್ಬು ಬೆಳೆಯನ್ನೇ ತಮ್ಮ ಜೀವನಾಧಾರವಾಗಿ ನೆಚ್ಚಿಕೊಂಡ ರೈತ ವರ್ಗಕ್ಕೆ ಕಾರ್ಖಾನೆಯವರ ಬೇಜವಾಬ್ದಾರಿ ಮತ್ತು ನಿರ್ಲಕ್ಷತನದಿಂದ ಬೆಳೆದ ಕಬ್ಬನ್ನು ಕಟಾವು ಮಾಡದೇ ಖರೀದಿಸದೇ ಅನ್ಯಾಯವೆಸಗಿದ್ದಾರೆ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಕಾರ್ಖಾನೆಯವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರಿಂದ ಆದ ನಷ್ಠವನ್ನು ಕಾರ್ಖಾನೆಯವರೇ ಭರಿಸುವಂತೆ ಆದೇಶಿಸಬೇಕೆಂದರು.
ಇದಕ್ಕೆ ಸ್ಪಂಧಿಸಿ ಮಾತನಾಡಿದ ಬಿ.ಸಿ.ಪಾಟೀಲ, ರೈತರು ಯಾವದಕ್ಕೂ ಎದೆಗುಂದಬಾರದು. ಜೀವದ ಜೊತೆ ಚೆಲ್ಲಾಟವಾಡದೇ ಶಾಂತ ರೀತಿಯಿಂದ ಪರಿಸ್ಥಿಯನ್ನು ನಿಭಾಯಿಸಬೇಕು. ಇಲ್ಲಿ ನಡೆದ ಘಟನೆಯನ್ನು ಅವಲೋಕಿಸಿದ್ದೇನೆ ಆದ ಪ್ರಮಾದಕ್ಕೆ ಜಿಲ್ಲಾಧಿಕಾರಿ ಗಳೊಂದಿಗೆ ಮತ್ತು ಕಾರ್ಖಾನೆಯವರೊಂದಿಗೆ ಚರ್ಚಿಸಿ ಮುಂದೆ ಯಾವ ಕ್ರಮ ತೆಗೆದುಕೊಳ್ಳಬೇಕು ಪರಿಹಾರೋಪಾಯವೇನು ಎಂಬುದನ್ನು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಅವರೊಂದಿಗೂ ಚರ್ಚಿಸಿ ಮುಂದಿನ ಕ್ರಮಕ್ಕೆ ಆದೇಶಿಸುವೆ ಎಂದು ಭರವಸೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಅರುಣಕುಮಾರ ಪೂಜಾರ, ರೈತರು ಆತ್ಮಹತ್ಯೆಯಂಥಹ ಕೃತ್ಯಕ್ಕೆ ಕೈ ಹಾಕಬಾರದು. ನಾನು ಪಕ್ಕದ ಊರಿನವನಾದರೂ ನನಗೆ ಕಬ್ಬು ಬೆಳೆಗೆ ಬೆಂಕಿ ಹಚ್ಚುವ ವಿಷಯ ತಿಳಿದಿಲ್ಲಾ. ನಾನು ಪತ್ರಿಕೆಯನ್ನು ಓದಿಲ್ಲಾ ಎಂದು ಸಮಜಾಯಿಸಿ ಉತ್ತರ ನೀಡಿದರು. ನಂತರ ಇನ್ನು ಮುಂದೆ ರೈತ ಮುಖಂಡರು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲು ನನ್ನ ಗಮನಕ್ಕೆ ತನ್ನಿರಿ ಎಂದು ತಿಳಿಸಿದರು.
ನಂತರ ಸ್ಥಳೀಯ ರೈತರು ಹನಿ ನಿರಾವರಿಗೆ ಒತ್ತು ನೀಡಿರಿ. ಹನಿ ನೀರಾವರಿಯ ಪ್ರಯೊಜನಗಳನ್ನು ಕೇವಲ ಎಸ್/ಎಸ್ಟಿ ವರ್ಗದವರಿಗೆ ಮಾತ್ರ ಆಧ್ಯತೆ ನೀಡಿದ್ದೀರಿ ಅದನ್ನು ಸಾಮಾನ್ಯ ವರ್ಗಕ್ಕೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ಧೇಶಕ ಎನ್. ಮಂಜುನಾಥ, ಸಹಾಯಕ ನಿರ್ಧೇಶಕ ಎಚ್.ಬಿ. ಗೌಡಪ್ಪಳವರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಮುದೇನೂರ ಗ್ರಾ.ಪಂ.ಕಾರ್ಯದರ್ಶಿ ಗಣೇಶ ಬಾನಿ, ರೈತರಾದ ದಿಳ್ಳೆಪ್ಪ ಸತ್ಯಪ್ಪನವರ, ವಿರುಪಾಕ್ಷಪ್ಪ ಮೇಡ್ಲೇರಿ, ಹರಿಹರಗೌಡ ಪಾಟೀಲ, ಜಮಾಲಸಾಬ ಶೇತಸನದಿ, ಹನುಮಂತಪ್ಪ ಕೊಳ್ಳೇರ, ಅಶೋಕ ಗಂಗನಗೌಡ್ರ, ನಾಗರಾಜ ಸುರ್ವೇ, ರುದ್ರಮುನಿ ರಾಮಕ್ಕನವರ, ಮಾಲತೇಶ ಬೂದನೂರ, ಮಲ್ಲಣ್ಣ ನಡುವಿನಮನಿ, ಪ್ರಭು ಓಲೇಕಾರ, ನಾಗರಾಜ ಬೂದನೂರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
