ಶಿರಾ:
ರಾಜ್ಯವನ್ನು ಶಾಶ್ವತವಾಗಿ ಬರಮುಕ್ತಗೊಳಿಸಲು ಸರ್ಕಾರ ಈಗಾಗಲೇ ರೂಪಿಸಿರುವ ‘ಜಲಾಮೃತ ಯೋಜನೆ’ಯನ್ನು ಕೂಡಲೇ ಅನುಷ್ಟಾನಕ್ಕೆ ತರಬೇಕು ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಜಲ ಸಾಧಕ ಡಾ.ರಾಜೇಂದ್ರ ಸಿಂಗ್ ಒತ್ತಾಯಿಸಿದರು.
ನಗರದ ಹೊರವಲಯದ ಗುಮ್ಮನಹಳ್ಳಿಯ ಗೇಟ್ನಲ್ಲಿರುವ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ತುಮಕೂರು ವಿಜ್ಞಾನ ಕೇಂದ್ರ, ಧಾನ್ಯ ಸಂಸ್ಥೆ, ಸಹಜ ಸಮೃದ್ಧ, ಸಹಜ ಬೇಸಾಯ ಶಾಲೆ, ಶಾಶ್ವತ ನೀರಾವರಿ ಹೋರಾಟ ಸಮಿತಿ ಕೋಲಾರ, ದೀನಬಂಧು ಆಶ್ರಮ ಚಾಮರಾಜನಗರ ಮತ್ತು ಜೀವನಾಡಿ ಇವರ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಬರಮುಕ್ತ ಕರ್ನಾಟಕ ಆಂದೋಲನ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು.
ಅಂರ್ತಜಲ ಕುಸಿತದಿಂದ ಪ್ರಸ್ತುತ ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು, ಯುವಜನರು ನಗರದ ಕಡೆ ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಬದುಕನ್ನು ಕಟ್ಟಿಕೊಳ್ಳಲು ವ್ಯವಸಾಯ ಹಾಗೂ ನೀರು ಪ್ರಮುಖ ಪಾತ್ರವಹಿಸುತ್ತವೆ. ಹಾಗೇ ರಾಜ್ಯವನ್ನು ಬರಮುಕ್ತವನ್ನಾಗಿಸಲು ಸರ್ಕಾರ ಏನು ಕ್ರಮಗಳನ್ನು ಕೈಗೊಂಡಿದೆ ಎಂಬುದು ಮುಖ್ಯವಾಗಿದೆ ಎಂದರು.
ಜಲಕ್ಷಾಮ, ಅನಾವೃಷ್ಟಿ ಸೇರಿದಂತೆ ಬರ ಪರಿಸ್ಥಿತಿಯನ್ನು ಶಾಶ್ವತವಾಗಿ ನಿವಾರಿಸದೇ ಇರಲು ಕಾರಣವೇನು ಎಂದು ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕಾಗಿದೆ. ಹಾಗೇ ನೀರು ಮತ್ತು ಪರಸರವನ್ನು ಸಂರಕ್ಷಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.
ಪ್ರಜಾಸತ್ತಾತ್ಮಕ ವಿಕೇಂದ್ರಿಕೃತ ಸಮುದಾಯಚಾಲಿತ ಕಾರ್ಯಕ್ರಮಕ್ಕೆ ತಮ್ಮ ಆದ್ಯತೆ, ಜನರು ಭಾಗವಹಿಸಿ ಬರಮುಕ್ತ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಯುವಜನರು ಹೆಚ್ಚು ಆಸಕ್ತಿವಹಿಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು, ‘ರಾಜ್ಯವನ್ನು ಬರಮುಕ್ತಗೊಳಿಸಲು ಮಳೆ ನೀರು ಕೊಯ್ಲಿನ ಮೂಲಕ ನೀರನ್ನು ಸಂಗ್ರಹ ಮಾಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು. ಜಲಸಂರಕ್ಷಣೆ ಕುರಿತು ಯುವಜನರಲ್ಲಿ ಹೆಚ್ಚು ಅರಿವು ಮೂಡಿಸಬೇಕು. ಮನೆಯಂತೆಯೇ ಕೆರೆ ಕಟ್ಟೆಗಳಲ್ಲಿರುವ ನೀರನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು, ನಿವೃತ್ತ ಭೂ ಗರ್ಭ ವಿಜ್ಞಾನಿ ಆರ್.ಎಸ್.ಸಾಹುಕಾರ್, ವಾಲ್ಮಿ ನಿರ್ದೇಶಕ ರಾಜೇಂದ್ರ ಪೋದಾರ್, ತಮಿಳುನಾಡಿನ ರೈತ ಮುಖಂಡ ಗುರುಮೂರ್ತಿ, ವಿಶ್ರಾಂತ ಐಜಿಪಿ ಅರಕೇಶ್ ಇದ್ದರು. ಶಿಬಿರದಲ್ಲಿ ರಾಜ್ಯದ 14 ಜಿಲ್ಲೆಗಳಿಂದ 250 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಶಿಬಿರವನ್ನು ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ನೆಲದಿಮ್ಮನಹಳ್ಳಿ ಚಿನ್ನೇನಹಳ್ಳಿ ಹಾಗೂ ಕಾಳೇನಹಳ್ಳಿ ಗಂಗಮ್ಮನ ಕೆರೆಯನ್ನು ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಉದ್ಘಾಟಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
