ಹರಿಹರ:
ನಟ ದರ್ಶನ ಅಭಿನಯಿಸಲು ಹೊರಟಿರುವ ಗಂಡುಗಲಿ ರಾಜವೀರ ಮದಕರಿ ನಾಯಕ ಚಲನಚಿತ್ರದ ಕಥೆಯು ಐತಿಹಾಸಿಕ ಕಥೆಯಾಗಿದ್ದು ಯಾರೆ ಅಭಿನಯಿಸಿದರೂ ಮದಕರಿ ನಾಯಕನ ಜೀವನ ಚರೀತ್ರಗೆ ಮದಕರಿ ಪಾತ್ರಕ್ಕೆ ಚ್ಯುತಿ ಬಂದರೆ ನಾವು ವಿರೋಧಿಸುತ್ತೇವೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನನಾಂದ ಶ್ರೀಗಳು ಹೇಳಿದರು.
ಗಂಡುಗಲಿ ಮದಕರಿ ನಾಯಕನ ಕುರಿತು ಮಾಡುವ ಚಿತ್ರದಲ್ಲಿ ಸುದೀಪ್ ಅಭಿನಯಿಸಿದರೆ ಮಾತ್ರ ಚಿತ್ರಕ್ಕೆ ಹಾಗೂ ಪಾತ್ರಕ್ಕೆ ನ್ಯಾಯ ಸಿಗಲು ಸಾಧ್ಯ. ಅವರನ್ನು ಬಿಟ್ಟು ಬೇರೆಯವರು ಮದಕರಿ ನಾಯಕನ ಬಗ್ಗೆ ಸಿನಿಮಾ ಮಾಡಿ, ಅದರಲ್ಲಿ ಏನಾದರೂ ಮದಕರಿ ಪಾತ್ರಕ್ಕೆ ಚ್ಯುತಿ ಬಂದರೆ ನಾವು ವಿರೋಧಿಸುತ್ತೇವೆ ಎಂದು ಶ್ರೀಗಳು ಹೇಳಿದರು.
ತಾಲ್ಲೂಕಿನ ರಾಜನಹಳ್ಳಿ ಗುರುಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2010ರಲ್ಲೆ ಸುದೀಪ್ ಮದಕರಿ ನಾಯಕನ ಕುರಿತು ಚಿತ್ರ ಮಾಡುವ ವಿಷಯ ಪ್ರಸ್ತಾಪವಾಗಿತ್ತು. ಆದರೆ ಇದು ದೊಡ್ಡ ಬಜೆಟ್ನಲ್ಲಿ ಮಾಡಬೇಕಾದ ಸಿನಿಮಾ, ನಾನು ಸಹ ಈಗ ಇತರೆ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದೇನೆ ಎಂದು ಸ್ವತಃ ಸುದೀಪ್ ನನ್ನೊಂದಿಗೆ ಸಹ ಮತನಾಡಿದ್ದರು ಎಂದರು.
ಆಗಲೆ ತಾವು ಅಂತಹ ಸಿನಿಮಾ ಮಾಡಿದರೆ ನೀವೆ ಮದಕರಿ ಪಾತ್ರ ಮಾಡಿ, ವಾಲ್ಮೀಕಿ ಜನಾಂಗಕ್ಕೆ ಸೇರಿದ ನೀವೆ ಆ ಪಾತ್ರ ನಿರ್ವಹಿಸಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿದ್ದೆವು. ಆದರೆ ಈ ಮಧ್ಯೆ ಬಿಎಸ್ ವೇಣು ಬರೆದಿರುವ ಗಂಡುಗಲಿ ಮದಕರಿ ಕಾದಂಬರಿ ಆಧರಿಸಿ ನಟ ದರ್ಶನ್ ಸಿನಿಮಾ ಮಾಡುತ್ತಿರುವ ಬಗ್ಗೆ ತಿಳಿಯಿತು.
ಆದರೆ ಬಿ.ಎಲ್.ವೇಣು ಬರೆದಿರುವ ಕಾದಂಬರಿಯಲ್ಲಿ ಮದಕರಿ ನಾಯಕನ ಕೊನೆಗಾಲದ ಬಗ್ಗೆ ವಿಭಿನ್ನವಾಗಿ ಚಿತ್ರಿಸಿದ್ದು, ವಾಸ್ತವಕ್ಕೆ ಹತ್ತಿರವಿಲ್ಲದ ಕಾರಣ ಅಂತಹ ಸಿನಿಮಾ ಮಾಡುವುದು ಬೇಡ ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದರು.
ಮದಕರಿ ನಾಯಕನ ಜೀವನ ಚೆರಿತ್ರೆ ಕುರಿತು ತರಾಸು, ಲಕ್ಷ್ಮಣ ತೆಲಗಾವಿ, ಪ್ರಸಾದ್ ಎಂಬುವರು ಸಹ ಗ್ರಂಥ ಬರೆದಿದ್ದಾರೆ. ಒಂದೊಂದು ಕಾದಂಬರಿಯಲ್ಲೂ ಭಿನ್ನಭಿನ್ನವಾಗಿ ಮದಕರಿ ನಾಯಕನ ಬಗ್ಗೆ ಚಿತ್ರಿಸಿದ್ದಾರೆ. ಮದಕರಿ ನಾಯಕನ ಕುರಿತ ನೈಜ ಅಂಶಗಳು, ವಾಸ್ತವ ಸಂಗತಿಗಳು ನಮಗೆ ತಿಳಿದಿವೆ. ಆದರೆ ಇದುವರೆಗೂ ಚಿತ್ರ ನಿರ್ಮಾಪಕ ರ್ಯಾಕ್ಲೈನ್ ವೆಂಕಟೇಶ್ ಆಗಲಿ, ನಿರ್ದೆಶಕ ರಾಜೇಂದ್ರ ಸಿಂಗ್ ಬಾಬು ಆಗಲಿ ನಮ್ಮನ್ನು ಸಂಪರ್ಕಿಸಿಲ್ಲ ಎಂದರು.
ಆದರೆ ಸುದೀಪ್ ಈ ಹಿಂದೆಯೇ ಸಂಪರ್ಕಿಸಿ, ಚಿತ್ರಕಥೆ ಬಗ್ಗೆ ತಮ್ಮೊಂದಿಗೆ ಚರ್ಚಿಸಿದ್ದರು. ಆದ ಕಾರಣ ಅಂತಹದ್ದೇನಾದರೂ ಸಿನಿಮಾ ಮಾಡುವುದಾದರೆ ಅದನ್ನು ಸುದೀಪ್ ಅವರೆ ಮಾಡಲಿ ಎಂಬುದು ನಮ್ಮ ಸಮಾಜದವರ ಅಭಿಪ್ರಾಯವಾಗಿದೆ.
ಸುದೀಪ್ ನಮ್ಮ ಸಮುದಾಯಕ್ಕೆ ಸೇರಿದವರಾಗಿರಬಹುದು ಆದರೆ ಸಿನಿಮಾರಂಗದಲ್ಲಿ ಜಾತೀಯತೆ ತರುವ ಉದ್ದೇಶ ತಮ್ಮದಲ್ಲ. ಈಗಲೂ ನಮ್ಮ ಪೀಠಕ್ಕೆ ಎಲ್ಲಾ ಸಮುದಾಯದ ಭಕ್ತರು ಆಗಮಿಸುತ್ತಾರೆ. ಎಲ್ಲರಿಗೂ ಸೂಕ್ತ ಮಾರ್ಗದರ್ಶನ, ಆದ್ಯಾತ್ಮಿಕ ಅರಿವು ಮೂಡಿಸಲಾಗುತ್ತಿದೆ.
ಮಠದ ಉದ್ದೇಶ ಆರೋಗ್ಯಕರ ಸಮಾಜ ನಿರ್ಮಿಸುವುದೇ ಆಗಿದೆ ಎಂದು ತಮ್ಮ ಮಾತಿಗೆ ಸಮರ್ಥನೆ ನೀಡಿದರು.
ಮದಕರಿ ನಾಯಕನ ಬಗ್ಗೆ ಕೆಲವು ಸಾಹಿತಿಗಳು ಅಪಚಾರವಾಗುವಂತೆ ಬರೆದಿದ್ದು, ಅದೆ ರೀತಿ ಸಿನಿಮಾ ಮೂಡಿ ಬಂದರೆ ಮದಕರಿ ನಾಯಕನ ವ್ಯಕ್ತಿತ್ವಕ್ಕೆ ಚ್ಯುತಿಯಾಗುತ್ತದೆ ಎಂಬುದಷ್ಟೆ ನಮ್ಮ ಕಾಳಜಿಯಾಗಿದೆ. ಆದ್ದರಿಂದ ಚಿತ್ರವನ್ನು ಯಾರೆ ಮಾಡಲಿ ನಮ್ಮನ್ನು ಸಂಪರ್ಕಿಸಿದರೆ ವಾಸ್ತವ ಅಂಶಗಳನ್ನು ನೀಡುತ್ತೇವೆ. ಅವುಗಳನ್ನು ಆಧರಿಸಿ ಸಿನಿಮಾ ಮಾಡುವುದಾದರೆ ತಮ್ಮದೇನು ತಕರಾರಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
