ದಾವಣಗೆರೆ
2021 ರಲ್ಲಿ ನಡೆಯುವ ಜನಗಣತಿಗೆ ಪೂರಕವಾಗಿ ಮೊದಲನೇ ಹಂತದಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ 15 ರಿಂದ ಮೇ 19 ರವರೆಗೆ ಮನೆಗಳ ಪಟ್ಟಿ ತಯಾರಿಸಲು ಜನಗಣತಿ ಕಾಯ್ದೆ ಪ್ರಕಾರ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು/ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಜನಗಣತಿಗೆ ಸಿದ್ದರಾಗುವಂತೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಭಾರತೀಯ ಜನಗಣತಿ 2021 ರ ಪೂರ್ವಭಾವಿಯಾಗಿ ನಡೆಸಬೇಕಾದ ತಯಾರಿ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜನಗಣತಿಗೆ ನಿಯೋಜಿತ ಅಧಿಕಾರಿಗಳು ಸಿದ್ದರಾಗಬೇಕು. ಎಲ್ಲ ಹಂತದ ಅಧಿಕಾರಿ/ಸಿಬ್ಬಂದಿಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು ಎಂದರು.
ಮೊದಲನೇ ಹಂತದ ಜನಗಣತಿಗೆ ಜಿಲ್ಲಾಧಿಕಾರಿಗಳು ಪ್ರಧಾನ ಜನಗಣತಿ ಅಧಿಕಾರಿಗಳಾಗಿರುತ್ತಾರೆ. ಅಪರ ಜಿಲ್ಲಾಧಿಕಾರಿ ಜಿಲ್ಲಾ ಜನಗಣತಿ ಅಧಿಕಾರಿಗಳಾಗಿದ್ದು, ಎನ್ಐಸಿ ಅಧಿಕಾರಿಗಳು, ನಗರಸಭೆ, ಪುರಸಭೆಗಳ ಆಯುಕ್ತರು, ಉಪ ಆಯುಕ್ತರು, ಮುಖ್ಯ ಅಧಿಕಾರಿಗಳು, ತಹಶೀಲ್ದಾರರು, ಶಿರಸ್ತೇದಾರರು ಕ್ರಮವಾಗಿ ನಗರ ಗಣತಿ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು, ಹೆಚ್ಚುವರಿ ಚಾರ್ಜ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ದಕ್ಷಿಣ ಬಿಇಓ ಸಿದ್ದಪ್ಪ ಹಾಗೂ ಸರ್ವ ಶಿಕ್ಷಣ ಅಭಿಯಾನದ ಉಪ ಯೋಜನಾ ಸಂಯೋಜಕ ಮಂಜುನಾಥಸ್ವಾಮಿ ಇವರನ್ನು ಮಾಸ್ಟರ್ಟ್ರೈನರ್ ಆಗಿ ಆಯ್ಕೆ ಮಾಡಿದ್ದು ಈಗಾಗಲೇ ಮೈಸೂರಿನಲ್ಲಿ ಇವರಿಗೆ ತರಬೇತಿ ನೀಡಲಾಗಿದೆ. ಈ ಮಾಸ್ಟರ್ ಟ್ರೈನರ್ಸ್ ಚಾರ್ಜ್ ಸೆನ್ಸಸ್ ಅಧಿಕಾರಿಗಳು ಮತ್ತು ಕ್ಷೇತ್ರ(ಫೀಲ್ಡ್) ಅಧಿಕಾರಿಗಳಿಗೆ ತರಬೇತಿ ನೀಡುವರು.
ಚಾರ್ಜ್ ಅಧಿಕಾರಿಗಳಾದ ತಹಶೀಲ್ದಾರರು, ನಗರಸಭೆ, ಪುರಸಭೆಗಳ ಆಯುಕ್ತರು, ಮುಖ್ಯ ಅಧಿಕಾರಿಗಳು ತಮ್ಮ ತಮ್ಮ ಹಂತದಲ್ಲಿ ಸಭೆ ನಡೆಸಿ, ಫೀಲ್ಡ್ ಆಫೀಸರ್ಸ್ನ್ನು ನೇಮಕ ಮಾಡಬೇಕಿದ್ದು, ಆಸಕ್ತರಿರುವ ಹಾಗೂ ಸಾಫ್ಟ್ವೇರ್ ಮತ್ತು ಆಂಡ್ರಾಯ್ಡ್ ಮೊಬೈಲ್ ಬಳಕೆ ತಿಳಿದಿರುವವನ್ನು ಗುರುತಿಸಿ ನೇಮಿಸಬೇಕು. ಇವರಿಗೆ ಮಾಸ್ಟರ್ಟ್ರೈನರ್ ತರಬೇತಿ ನೀಡುವರು. ಪ್ರೌಢಶಾಲಾ ಮುಖ್ಯೋಪಾಧ್ಯಯರು, ಪಿಯುಸಿ ಉಪನ್ಯಾಸಕರು, ಸಿಆರ್ಸಿ, ಬಿಆರ್ಸಿ ಅಥವಾ ಆಸಕ್ತ ಯಾವುದೇ ಬಿ ಗುಂಪಿಗೆ ಸೇರಿದ ಅಧಿಕಾರಿಗಳನ್ನು ಫೀಲ್ಡ್ ಆಫೀಸರನ್ನಾಗಿ ನೇಮಕ ಮಾಡಿ ನಾಳೆ ಸಂಜೆಯೊಳಗೆ ಅವರ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಡಿಸಿ ಕಚೇರಿಗೆ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಗಣತಿ ನಿರ್ದೇಶನಾಲಯದ ಜಿಲ್ಲಾ ನೋಡಲ್ ಅಧಿಕಾರಿ ಜಿ.ಶ್ರೀನಿವಾಸ್ ಮಾತನಾಡಿ, 2011 ರ ಜನಗಣಯನ್ನು ಉಲ್ಲೇಖವಾಗಿರಿಸಿಕೊಂಡು ಬ್ಲಾಕ್ಗಳನ್ನು ವಿಂಗಡಿಸಬೇಕು. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ವಾರ್ಡುಗಳ ಸಂಖ್ಯೆ ಮತ್ತು ತಾಲ್ಲೂಕುಗಳಲ್ಲಿ ಜನಸಂಖ್ಯೆ ಹೆಚ್ಚಿದ್ದು ಇದಕ್ಕೆ ಅನುಗುಣವಾಗಿ ಬ್ಲಾಕ್ಗಳನ್ನು ವಿಂಗಡಿಸಿಕೊಳ್ಳಬೇಕು. ಈ ಜನಗಣತಿ ಚುನಾವಣೆ ಜನಸಂಖ್ಯೆಗೂ ಸಂಬಂಧಿಸಿದ್ದರಿಂದ ವಾರ್ಡುಗಳನ್ನು, ಬೂತ್ಗಳನ್ನು ಬದಲಾಯಿಸದಂತೆ ಗಣತಿ ಪ್ರದೇಶಗಳನ್ನು ವಿಂಗಡಿಸಬೇಕು.
ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಬಳಕೆ : ಪ್ರಥಮ ಬಾರಿಗೆ ಜನಗಣತಿಯನ್ನು ಮೊಬೈಲ್ ಆ್ಯಪ್ ಬಳಸಿ ಮಾಡಲಾಗುತ್ತಿದೆ. ಇದು ಮ್ಯಾನುವಲ್ಗಿಂತ ಸುಲಭವಾಗಿದ್ದು, ಈ ಗಣತಿ ಆ್ಯಪ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ನಾವು ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ನೀಡುತ್ತೇವೆ. ಮಾಸ್ಟರ್ಟ್ರೈನರ್ ಈ ಆ್ಯಪ್ ಬಳಕೆ ಬಗ್ಗೆ ತರಬೇತಿ ನೀಡುವರು. ಸಾರ್ವಜನಿಕರು ಕೂಡ ಗಣತಿದಾರರಿಗೆ ಸಹಕರಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
