ಜಲಶಕ್ತಿ ಅಭಿಯಾನ : ಬಳ್ಳಾರಿಗೆ 5ನೇ ಸ್ಥಾನ!

ಬಳ್ಳಾರಿ

    ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನದ ಅಡಿ ನಾನಾ ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಮೂಲಕ ಜಲಸಂರಕ್ಷಣೆ ಮತ್ತು ಅಂತರ್ಜಲಮಟ್ಟ ಹೆಚ್ಚಳಕ್ಕೆ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೀತು ದಿಲ್ಲಾನ್ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಲಶಕ್ತಿ ಅಭಿಯಾನದ ಪರಿಣಾಮಕಾರಿ ಅನುಷ್ಠಾನದ ವಿಷಯದಲ್ಲಿ ದೇಶದಲ್ಲಿಯೇ ಬಳ್ಳಾರಿ ಸದ್ಯ 5ನೇ ಸ್ಥಾನದಲ್ಲಿರುವುದು ಅತ್ಯಂತ ಹೆಮ್ಮೆಯ ವಿಷಯ; ಇದೇ ರೀತಿ ಅಂತರ್ಜಲಮಟ್ಟ ಹೆಚ್ಚಳ ಮತ್ತು ಅರಣ್ಯೀಕರಣದಂತ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಜಲಶಕ್ತಿ ಅಭಿಯಾನದ ಉದ್ದೇಶಗಳನ್ನು ಈಡೇರಿಸಿ ಎಂದು ಅವರು ಹೇಳಿದರು.

    ದೇಶದಾದ್ಯಂತ ಅಂತರ್ಜಲ ಕೊರತೆ, ನೀರಿನ ಅಭಾವದ ಆಧಾರದ ಮೇಲೆ 1590 ಬ್ಲಾಕ್ ಗಳನ್ನು ಗುರುತಿಸಲಾಗಿದ್ದು, ಆ ಬ್ಲಾಕ್ ಗಳಲ್ಲಿ ಜಲಸಂರಕ್ಷಣೆ, ಅಂತರ್ಜಲಮಟ್ಟ ಹೆಚ್ಚಳ ಸೇರಿದಂತೆ ಇನ್ನೀತರ ಜಲ ಸಂಬಂಧಿತ ಕ್ರಮಗಳ ಅನುಷ್ಠಾನಕ್ಕೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಲಶಕ್ತಿ ಅಭಿಯಾನದಡಿ ಉದ್ದೇಶಿಸಲಾಗಿದ್ದು, ಈ ಮೊದಲ ಹಂತದಲ್ಲಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮತ್ತು ಹಗರಿ ಬೊಮ್ಮನಹಳ್ಳಿ ತಾಲೂಕುಗಳು ಆಯ್ಕೆಯಾಗಿವೆ ಎಂದು ವಿವರಿಸಿದ ಅವರು ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿರುವ ಈ ತಾಲೂಕುಗಳಲ್ಲಿ ವಿವಿಧ ಜಲಸಂಬಂಧಿತ ಕ್ರಮಗಳನ್ನು ಕೈಗೊಂಡು ಅಂತರ್ಜಲಮಟ್ಟ ಹೆಚ್ಚಳ ಮಾಡಲಾಗುವುದು ಎಂದರು.

     ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ, ನದಿಗಳ ರಕ್ಷಣೆ, ಜಲಸಂರಕ್ಷಣೆ, ಜಲಮರುಪೂರಣ, ಅರಣ್ಯೀಕರಣ ಮಾಡುವುದು ಜಲಶಕ್ತಿ ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ. ಮೊದಲ ಹಂತದ ಜಲಶಕ್ತಿ ಅಭಿಯಾನದ ಅನುಷ್ಠಾನ ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್ 15ರವರೆಗೆ ನಡೆಯಲಿದೆ. ಹಗರಿಬೊಮ್ಮನಹಳ್ಳಿ ಮತ್ತು ಹರಪನಳ್ಳಿ ತಾಲೂಕುಗಳಲ್ಲಿ ಈ ಜಲಶಕ್ತಿ ಅಭಿಯಾನದಡಿ ನಾನಾ ಕೆಲಸಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

     ಮಳೆ ನೀರು ಕೊಯ್ಲು ಮಾಡುವುದರ ಮೂಲಕ ನೀರು ಇಂಗಿಸುವಿಕೆ ಯೋಜನೆ ಸಿದ್ದಪಡಿಸಿ ಎಂದು ಸೂಚಿಸಿದ ಅವರು ಹಗರಿ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಈ ಎರಡು ತಾಲೂಕುಗಳಲ್ಲಿ ಅಂತರ್ಜಲಮಟ್ಟ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಲಶಕ್ತಿ ಮೇಳ ಏರ್ಪಡಿಸಲು ಸಲಹೆ ನೀಡಿದನ್ನು ಸ್ವಾಗತಿಸಿದ ಅವರು, ಇದನ್ನು ಅನುಷ್ಠಾನ ಮಾಡಲಾಗುವುದು ಎಂದರು.

      ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾತನಾಡಿ, ನರೇಗಾ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲಾಗುವುದು. ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಭಿಯಾನದ ಯಶಸ್ಸಿಗೆ ಶ್ರಮಿಸಲಾಗುವುದು ಎಂದರು.

     ಅಂತರ್ಜಲದ ಕೊರತೆ, ನೀರಿನ ಅಭಾವದ ಆಧಾರದ ಮೇಲೆ ಗುರುತಿಸಲಾಗಿರುವ ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ಬ್ಲಾಕ್ ಗಳಲ್ಲಿ ಪಾರಂಪರಿಕ ಜಲಮೂಲಗಳ ರಕ್ಷಣೆಗೆ ಕ್ರಮ,ಅರಣ್ಯೀಕರಣ, ಜಲಮರುಪೂರಣ,ಅಂತರ್ಜಲಮಟ್ಟದ ಹೆಚ್ಚಳಕ್ಕೆ ವಿವಿಧ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಅವುಗಳನ್ನ ಅನುಷ್ಠಾನಕ್ಕೆ ಶೀಘ್ರ ತರಲಾಗುವುದು ಎಂದರು.

      ಕೃಷಿಹೊಂಡ ನಿರ್ಮಾಣ, ಕೆರೆ ಹೂಳೆತ್ತುವಿಕೆ, ಇಂಗು ಗುಂಡಿ ನಿರ್ಮಾಣ, ಬದುನಿರ್ಮಾಣ, ಗೋಕಟ್ಟೆ ನಿರ್ಮಾಣ, ಅರಣ್ಯೀಕರಣಕ್ಕೆ ಒತ್ತು, ಮಲ್ಟಿಚೆಕ್ ಡ್ಯಾಂ, ಚೆಕ್‍ಡ್ಯಾಂ ನಿರ್ಮಾಣ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಕೃಷಿ, ಸಣ್ಣ ನೀರಾವರಿ, ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪಿಆರ್ ಇಡಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕೆ ನರೇಗಾ ಅಡಿ ಮತ್ತು ತಮ್ಮ ಇಲಾಖೆಗಳ ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನದ ಮೂಲಕ ಕ್ರಮ ಕೈಗೊಳ್ಳಬೇಕು ಎಂದರು.

     ಜಿಲ್ಲಾ ಖನಿಜ ನಿಧಿ ಮತ್ತು ಎಚ್‍ಕೆಆರ್‍ಡಿಬಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜಲಸಂರಕ್ಷಣೆ ಮತ್ತು ಅಂತರ್ಜಲಮಟ್ಟದ ಹೆಚ್ಚಳ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.ಜಿಪಂ ಸಿಇಒ ಕೆ.ನಿತೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿ, ಸಣ್ಣನೀರಾವರಿ, ಬೃಹತ್ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap