ಹಾನಗಲ್ಲ :
ನ.1 ರಿಂದ 7 ರವರೆಗೆ ನಡೆಯುವ “ಬೇಟಿ ಪಡಾವೋ-ಬೇಟಿ ಬಚಾವೋ” ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಶನಿವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವಿನ ಜನ್ಮದಿನ ಆಚರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಲೀಲಾ ಕ್ಯಾಡಿ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ, ಲಿಂಗಪತ್ತೆಯಂಥ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಲಿಂಗ ತಾರತಮ್ಯ ದೂರವಾಗಬೇಕಾದರೆ ಹೆಣ್ಣು ಮಗುವಿಗೆ ಹೆಚ್ಚು ಸೌಲಭ್ಯಗಳು ಒದಗಬೇಕು.
ಇತ್ತೀಚೆಗೆ ಹೆಣ್ಣು ಮಕ್ಕಳ ಶೋಷಣೆ ಹೆಚ್ಚುತ್ತಿದ್ದು ಕಠಿಣ ಕಾನೂನು ರಚನೆಯಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಶಾಲೆಗೆ ತೆರಳುವ ಮಗುವಿಗೆ ಪ್ರತಿ ತಿಂಗಳು ಹಣ ನೀಡುವುದು, ಭಾಗ್ಯಲಕ್ಷೀ ಯೋಜನೆ, ಹಣ್ಣು ಮಗುವಿನ ಬದುಕಿಗೆ ಮಾರಕವಾಗುವ ಅಂಶಗಳನ್ನು ದೂರಮಾಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಸಪ್ತಾಹದ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ವಿವರಿಸಿದರು.
ಸಪ್ತಾಹದ ಮೊದಲ ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಗುವಿನ ತಾಯಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. “ಬೇಟಿ ಪಡಾವೋ-ಬೇಟಿ ಬಚಾವೋ” ಸಪ್ತಾಹದ ಅಂಗವಾಗಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಸಹಯೋಗದಲ್ಲಿ ಆಸ್ಪತ್ರೆ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.
ಕಾರ್ಯಕ್ರಮದಲ್ಲಿ ಸಿಡಿಪಿಒ ವಿದ್ಯಾ ಬಡಿಗೇರ, ವೈದ್ಯಾಧಿಕಾರಿ ಡಾ.ವೈ.ಎಸ್.ಹರೀಶ್, ಡಾ.ವೀಣಾ, ಆಡಳಿತಾಧಿಕಾರಿ ಸುಭಾಸ್ ಚೊಗಚಿಕೊಪ್ಪ, ಮಕ್ಕಳ ತಜ್ಞ ಡಾ.ಹರೀಶ್, ರೇಣುಕಾ ಹಾವೇರಿ, ಮಾಲಾ ಈಳಿಗೇರ, ನಾಗಪ್ಪ ಹಲಸೂರ, ಪೂರ್ಣಿಮಾ ಶಿವಗೇರಿ, ಜಯಶ್ರೀ ಕಾಯಕದ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
