ಚಿತ್ರದುರ್ಗ:
ಭಗವದ್ಗೀತೆ ಪಠಣದಿಂದ ಸಮಾಜ ಹಾಗೂ ಮನಸ್ಸು ಶುಭ್ರವಾಗುತ್ತದೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಾಲಿಂಗಾನಂದ ಸ್ವಾಮೀಜಿ ಹೇಳಿದರು.ನಗರದ ಶಾರದಾ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದ ಪ್ರಶಿಕ್ಷಣಾರ್ಥಿಗಳ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಅಂತರಂಗ ಬಹಿರಂಗಗಳನ್ನು ಪವಿತ್ರಗೊಳಿಸಿ, ತತ್ವವೆಂಬ ಜಲದಿಂದ ಮನಸ್ಸಿನ ಎಲ್ಲ ಕಲ್ಮಶ ತೊಳೆದು ಸಂಸ್ಕೃತನನ್ನಾಗಿಸಿ ಜೀವನ ವಿಕಾಸಗೊಳಿಸುವ ಶಕ್ತಿ ಗೀತೆಗಿದೆ ಎಂದರು.ಸಮಾಜದಲ್ಲಿ ನೈತಿಕ ಅಧಃಪತನ ಹೆಚ್ಚುತ್ತಿದೆ. ಜನರಲ್ಲಿ ದುರಾಸೆ, ದ್ವೇಷಗಳು ಹೆಚ್ಚಾಗಿ ಹಲವು ಅಪರಾಧಗಳು ಹೆಚ್ಚುತ್ತಿವೆ. ಪ್ರತಿಯೊಬ್ಬರಿಗೂ ನೈತಿಕ ಆಧ್ಯಾತ್ಮಿಕ ಮೌಲ್ಯದ ಕಲ್ಪನೆ ಬರಬೇಕೆಂದರೆ ಅವರಿಗೆ ಭಗವದ್ಗೀತೆಯ ಜ್ಞಾನದ ಅಗತ್ಯವಿದೆ ಎಂದರು.
ಜಗತ್ತಿನ ಎಲ್ಲ ಸಾತ್ವಿಕ ತತ್ವೋಪದೇಶಗಳು ಗೀತೆಯಲ್ಲಿವೆ. ಇದು ಕೇವಲ ಭಾರತಕ್ಕೆ ಸೀಮಿತವಾಗಿರದೆ ವಿಶ್ವಮಾನ್ಯ ಗ್ರಂಥವಾಗಿದೆ. ಸ್ವಸ್ಥ ಹಾಗೂ ಸಾಮರಸ್ಯ ಸಮಾಜದ ನಿರ್ಮಾಣಕ್ಕೆಂದು ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನ ಆಕಾಶದೆತ್ತರದ ಯಶಸ್ಸುಗಳಿಸಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಭಾವೈಕ್ಯ, ಸಾಮಾಜಿಕ ಸಾಮರಸ್ಯ, ನೈತಿಕ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಾಸನವು ಅಭಿಯಾನದ ಪ್ರಧಾನ ಉದ್ದೇಶ ಗಳಾಗಿವೆ. ಕರ್ನಾಟಕವನ್ನು ದಾಟಿ ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೂ ಪ್ರವೇಶಿಸಿರುವುದು ಉತ್ತಮ ಬೆಳವಣಿಗೆ ಎಂದರು .ಅಭಿಯಾನದ ಪೂರ್ಣಾವಧಿ ಶಿಕ್ಷಕರಾದ ಸ್ವರ್ಣವಲ್ಲಿ ಮಠದ ಗೀತಾ ಜೋಷಿ, ಸುಮನಾಭಟ್ ಕಾರ್ಯಾಗಾರ ನಡೆಸಿಕೊಟ್ಟರು. ಆರು ತಾಲೂಕಿನಿಂದ 300 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಅಧ್ಯಕ್ಷರಾದ ಲಕ್ಷ್ಮೀಕಾಂತರೆಡ್ಡಿ, ಕಾರ್ಯಾಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಮಾರುತಿ ಮೋಹನ್, ನರಸಿಂಹಮೂರ್ತಿ, ಸುಮನಾ ಭಟ್, ಯು.ಎಸ್.ರಮೇಶ್, ನಂಜುಂಡಸ್ವಾಮಿ ಇತರರು ಉಪಸ್ಥಿತರಿದ್ದರು.