ಚಿತ್ರದುರ್ಗ:
ಮನುಷ್ಯನ ಬೆನ್ನು ಮೂಳೆ ಮುರಿದರೆ ದೇಹಕ್ಕೆ ಎಷ್ಟು ತೊಂದರೆಯಾಗುತ್ತದೋ ಅದೇ ರೀತಿ ದೇಶದ ಬೆನ್ನೆಲುಬು ರೈತನಿಗೆ ತೊಂದರೆಯಾದರೆ ಇಡೀ ದೇಶವೇ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತಾಸಕ್ತಿಯನ್ನು ಕಡೆಗಣಿಸಬಾರದು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರಮಹಾಸ್ವಾಮೀಜಿ ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಕರ್ನಾಟಕ ದಕ್ಷಿಣ ಪ್ರಾಂತ್ಯದಿಂದ ಎರಡು ದಿನಗಳ ಕಾಲ ವಿನಾಯಕ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಪ್ರಾಂತ ಸಮ್ಮೇಳನದ ನಾನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯನ ದೇಹಕ್ಕೆ ಬೆನ್ನು ಮೂಳೆ ಎಷ್ಟು ಮುಖ್ಯವೋ. ಅದೇ ರೀತಿ ದೇಶಕ್ಕೆ ರೈತ ಬೆನ್ನೆಲುಬಿದ್ದಂತೆ. ಯಾವುದೇ ಆಳುವ ಸರ್ಕಾರಗಳಿರಲಿ ರೈತರಿಗೆ ಅನ್ಯಾಯ ಮಾಡಿದರೆ ಇಡೀ ದೇಶವೇ ತೊಂದರೆ ಅನುಭವಿಸಬೇಕಾಗುತ್ತದೆ. ರೈತ ನೆಮ್ಮದಿಯಿಂದ ಇರಬೇಕಾದರೆ ಅರಮನೆ ಗುರುಮನೆ ಜೊತೆಯಲ್ಲಿ ಸಾಗಬೇಕು.
ಆದರೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಗುರುಮನೆಯನ್ನು ಮರೆತು ಅರಮನೆ ಜೊತೆ ಸಾಗುತ್ತಿದ್ದಾರೆ. ಕೋಟಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದವರು ನೂರಾರು ಕೋಟಿ ರೂ.ಗಳ ಅಕ್ರಮ ಆಸ್ತಿ ಸಂಪಾದಿಸಿಕೊಂಡು ದೇಶದ ಬೆನ್ನೆಲುಬು ರೈತನನ್ನು ಮರೆಯುತ್ತಿರುವುದು ವಿಷಾಧಕರ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಸ್ವಾವಲಂಬಿಯಾಗಿ ಸಾಲವಿಲ್ಲದೆ ಬದುಕಬೇಕಾದರೆ ರೈತನ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗಧಿಪಡಿಸಬೇಕು. ಈ ನಿಟ್ಟಿನಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಮೊದಲು ಸಂಘಟಿತರಾಗಬೇಕು ಎಂದು ತಿಳಿಸಿದರು.
ಸಾವಯವ ಕೃಷಿಕರು ಮತ್ತು ನಾಡೋಜ ಪ್ರಶಸ್ತಿ ಪುರಸ್ಕತರಾದ ದೊಡ್ಡಬಳ್ಳಾಪುರ ತಾಲೂಕು ಮಲ್ಲೇನಹಳ್ಳಿಯ ಎಲ್.ನಾರಾಯಣರೆಡ್ಡಿ ಪ್ರಾಂತ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತ ಯಾವುದೇ ಸರ್ಕಾರಗಳಾಗಲಿ, ಸಂಘ ಸಂಸ್ಥೆಗಳಿಂದ ನಿಮ್ಮ ಉದ್ದಾರವಾಗುವುದಿಲ್ಲ. ಭೂಮಿತಾಯಿಯನ್ನು ನಂಬಿ ಕೃಷಿಗೆ ಗಮನಕೊಟ್ಟು ಮೈಮುರಿದು ದುಡಿದರೆ ನೆಮ್ಮದಿಯ ಜೀವನ ನಿಮ್ಮದಾಗಲಿದೆ ಎಂದು ರೈತಾಪಿ ವರ್ಗಕ್ಕೆ ಸಲಹೆ ನೀಡಿದರು.
ಟ್ರಾಕ್ಟರ್ನಿಂದ ಭೂಮಿಯನ್ನು ಉಳುಮೆ ಮಾಡಿದರೆ ಭೂಮಿಯ ಫಲವತ್ತತೆ ಹಾಳಾಗಿ ನಿಮ್ಮ ಕೃಷಿ ಐವತ್ತು ವರ್ಷಗಳ ಹಿಂದೆ ಹೋಗುತ್ತದೆ. ಮೊದಲು ಟ್ರಾಕ್ಟರ್ನಿಂದ ಉಳುಮೆ ಮಾಡುವುದನ್ನು ನಿಲ್ಲಿಸಿ ಸಗಣಿ ಹಾಗೂ ಗಂಜಲವನ್ನು ನಿಮ್ಮ ಹೊಲಗಳಿಗೆ ಬಳಿಸಿ ಎಂದು ತಾಕೀತು ಮಾಡಿದ ಸಾವಯವ ಕೃಷಿಕ ಎಲ್.ನಾರಾಯಣರೆಡ್ಡಿ ಕೃಷಿಯ ಬಗ್ಗೆ ಸರಿಯಾದ ತಿಳುವಳಿಕೆ ಇಟ್ಟುಕೊಳ್ಳಿ. ಭೂಮಿ ಎಂದರೆ ಏನು, ಮಣ್ಣಿನಲ್ಲಿ ಏನಿದೆ. ಗೊಬ್ಬರ ಯಾವುದು, ನೀರು ಎಷ್ಟು ಬೇಕು, ಯಾವ ಬೆಳೆಯನ್ನು ಹೇಗೆ ಬೆಳೆಯಬೇಕು ಎನ್ನುವುದನ್ನು ತಿಳಿದುಕೊಂಡು ವ್ಯವಸಾಯ ಮಾಡಿದರೆ ಯಾವ ರೈತನು ಸಾಲದಿಂದ ಸಾಯುವುದಿಲ್ಲ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ಅಗ್ರಿಕಲ್ಚರ್ ಸೈನ್ಸ್ ಎನ್ನುವುದು ದೊಡ್ಡ ಷಡ್ಯಂತ್ರವಾಗಿದೆ. ಎಲ್ಲರಲ್ಲೂ ಸಾಮಾನ್ಯ ತಿಳುವಳಿಕೆ ಇದೆ. ದೇವರನ್ನು ನಂಬಿ ಪ್ರಾಮಾಣಿಕವಾಗಿ ಬದುಕಿ ಕೃಷಿಯಲ್ಲಿ ತೊಡಗಿಕೊಳ್ಳಿ. ನಷ್ಟ ಎನ್ನುವ ಮಾತೇ ಇಲ್ಲ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ಭೂಮಿಯಲ್ಲಿ ಇಂಗಿಸಿ. ಭೂಮಿಗೆ ಸಗಣಿ ಗಂಜಲ ಹಾಕಿ ಭೂಮಿತಾಯಿ ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಭಾರತೀಯ ಕಿಸಾನ್ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ಮತ್ತು ರೈತ ಉಳಿಯಬೇಕಾದರೆ ಮೊದಲು ನೀವುಗಳು ಸಂಘಟನೆಯಾಗಿ ಇಲ್ಲದಿದ್ದರೆ ಯಾವ ಸರ್ಕಾರಗಳು ಬಂದರೂ ನಿಮ್ಮನ್ನು ಯಾಮಾರಿಸುತ್ತಲೆ ಇರುತ್ತಾರೆ. ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿಕೊಂಡು ಹೇಗೆ ಹೊರ ಬರಲು ಆಗುವುದಿಲ್ಲವೋ ಅದೇ ರೀತಿ ರೈತ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಹೊರಬರಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಇದೊಂದು ದೊಡ್ಡ ದುರಂತ ಎಂದರು.
ಜಲ, ಗೋವುಗಳನ್ನು ಮೊದಲು ಸಂರಕ್ಷಣೆ ಮಾಡಿದರೆ ಸಾವಯವ ಕೃಷಿ ಉಳಿಯುತ್ತದೆ. ಮಂಡ್ಯದಲ್ಲಿ ಸಾಲಕ್ಕೆ ಹೆದರಿ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿದೆ. ಆಳುವ ಸರ್ಕಾರಗಳು ರೈತನ ಮನೆಗೆ ಹೋಗಿ ಸಾಂತ್ವನ ಹೇಳಬಹುದೇ ವಿನಃ ಬದುಕು ಕಟ್ಟಿಕೊಡಲು ಆಗುವುದಿಲ್ಲ. ಅದಕ್ಕಾಗಿ ನಿಮ್ಮ ಜೀವನವನ್ನು ನೀವುಗಳೇ ರೂಪಿಸಿಕೊಳ್ಳಿ. ಆತ್ಮಹತ್ಯೆಯಂತ ಹೇಡಿ ಕೆಲಸಕ್ಕೆ ಕೈಹಾಕಬೇಡಿ ಎಂದು ಆತ್ಮಸ್ಥೈರ್ಯ ತುಂಬಿದರು.
ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತ ಅಧ್ಯಕ್ಷ ಎಂ.ಜಿ.ಶಾಂತಪ್ಪಗೌಡ, ಭಾರತೀಯ ಕಿಸಾನ್ ಸಂಘ ಅಖಿಲ ಭಾರತೀಯ ಅಧ್ಯಕ್ಷ ಐ.ಎನ್.ಬಸವೇಗೌಡ, ಕಾರ್ಯದರ್ಶಿ ತೆಲಂಗಾಣದ ಸಾಯಿರೆಡ್ಡಿ, ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದೋಣೂರು ರಾಮು ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.
