ಹರಪನಹಳ್ಳಿ
ಕೇಂದ್ರ ಹಾಗೂ ರಾಜ್ಯ ಆಯವ್ಯಯದಲ್ಲಿ ಬಿಸಿಯೂಟ ತಾಯಾರಕರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಾಯಾರಕರ ಫೆಡರೇಶನ್ ತಾಲ್ಲೂಕು ಸಮಿತಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತೆಯರು ಐ.ಬಿ.ವೃತ್ತದ ಮೂಲಕ ಸಾಗಿ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, `ಶಾಲೆಗಳಲ್ಲಿ ಬಿಸಿಯೂಟ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಕನಿಷ್ಠ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ನೀಡುವ 2700 ಸಂಭಾವನೆ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಸರ್ಕಾರಗಳು ಮುಖ್ಯ ಅಡುಗೆಗಾರರು ಹಾಗೂ ಸಹಾಯಕ ಅಡುಗೆಗಾರರಿಗೆ ಕನಿಷ್ಠ ವೇತನ ನೀಡಬೇಕು’ ಎಂದು ಆಗ್ರಹಿಸಿದರು.
ಎಐವೈಎಫ್ ರಾಜ್ಯ ಸಂಚಾಲಕ ಎಚ್.ಎಂ.ಸಂತೋಷ ಮಾತನಾಡಿ, `ಈ ಬಾರಿಯ ಬಜೆಟ್ ಅಲ್ಲಿ ವೇತನ ಹೆಚ್ಚಿಸದೇ ಅನ್ಯಾಸ ಎಸಗಲಾಗಿದೆ. ಸರ್ಕಾರ ಪುನಃ ಪರಿಶೀಲಿಸಿ ವೇತನ ಹೆಚ್ಚಳಕ್ಕೆ ಮುಂದಾಗಬೇಕು. ಬಿಸಿಯೂಟ ಪೂರೈಕೆಯನ್ನು ಖಾಸಗಿ ಸಂಸ್ಥೆಯವರಿಗೆ ವಹಿಸಿದರೆ ಸುಮಾರು 1.18 ಲಕ್ಷ ಬಿಸಿಯೂಟ ತಯಾರಕರು ಬೀದಿಗೆ ಬೀಳುತ್ತಾರೆ. ಖಾಸಗಿಯವರಿಗೆ ಒಪ್ಪಿಸದೇ ಕೆಲಸಗಾರರನ್ನು ಮುಂದುವರಿಸಬೇಕು’ ಎಂದು ಆಗ್ರಹಿಸಿದರು.ಎಐಟಿಯುಸಿ ಮುಖಂಡ ಮೆಹಬೂಬ್ ಬಾಷಾ, ಕೆ.ಎಂ.ಕೊಟ್ರಯ್ಯ, ಪುಷ್ಪಾ, ವಿಶಾಲಮ್ಮ, ಫರ್ವೀನ್, ನಾಗಮ್ಮ, ಪಲ್ಕಿಬಾಯಿ, ಬಸವಣ್ಣೆಮ್ಮ, ಅಮೃತಾ, ಸುಧಾ, ಕೆಂಚಮ್ಮ, ದುರುಗಮ್ಮ, ಬಿ.ರತ್ಮಮ್ಮ, ಭಾಗ್ಯಮ್ಮ ಸೇರಿದಂತೆ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
