ದಾವಣಗೆರೆ :
ಬಿಜೆಪಿಯ ಶಾಸಕರು ಕೊನೆ ಭಾಗದ ರೈತರಿಗೆ ಭದ್ರಾ ನೀರು ತಲುಪಿಸದೇ, ಮೋಸ ಮಾಡಿದ್ದಾರೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್ ಆರೋಪಿಸಿದ್ದಾರೆ.
ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭದ್ರಾ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರವೀಂದ್ರನಾಥ್ ಕೊನೆಭಾಗದ ರೈತರ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ದೂರಿದರು.
ಹಿಂದೆ ಮಲ್ಲಿಕಾರ್ಜುನ್ ಅವರು ಶಾಸಕರು, ಸಚಿವರಾಗಿದ್ದಾಗ ಕೊನೆಭಾಗಕ್ಕೆ ನೀರು ತಲುಪಿಸಿದ್ದರು. ಆದರೆ ಇಂದು ಕೊನೆಭಾಗಕ್ಕೆ ನೀರು ಬಾರದಿದ್ದರೂ ಸಹ ಶಾಸಕರು ಮೌನ ವಹಿಸಿದ್ದಾರೆ ಎಂದು ದೂರಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಾಗಾನಹಳ್ಳಿ ಪರುಶುರಾಮ್ ಮಾತನಾಡಿ, ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಆದರೆ ಇಂದಿನ ಕೇಂದ್ರ ಸರ್ಕಾರ ಯಾವುದೇ ಜನಪರ ಯೋಜನೆಗಳನ್ನು ನೀಡದೇ ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವನಗೌಡ್ರು ಮಾತನಾಡಿ, ರೈತರ ಹಿತದೃಷ್ಟಿಯಿಂದ ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಮೈತ್ರಿ ಸರ್ಕಾರ ಸಾಲ ಮನ್ನಾ ಮಾಡಿದೆ. ಆದರೆ ಕೇಂದ್ರ ಸರ್ಕಾರ ಉದ್ಯಮಿಗಳ ಸಾಲಮನ್ನಾ ಮಾಡಿ ರೈತರ ಸಾಲ ಮನ್ನಾ ಮಾಡದೇ ವಂಚಿಸಿದೆ ಎಂದು ದೂರಿದರು.
ಮಾಜಿ ಸಚಿವರು, ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಗಳೂ ಆದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಣತಿಯಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಗೆಲ್ಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ತೀರ್ಮಾನಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಬಿ.ಕರಿಬಸಪ್ಪ, ರಾಘವೇಂದ್ರನಾಯ್ಕ, ಮೇಕಾ ಮುರುಳಿಕೃಷ್ಣ, ಚಮನ್ ಸಾಬ್, ಬಾತಿ ಉಮೇಶ್, ಬಾತಿ ಸಿದ್ದಲಿಂಗಪ್ಪ, ಗೌರಿಬಾಯಿ, ಕಡ್ಲೇಬಾಳು ಉಜ್ಜಪ್ಪ, ಬೇತೂರು ಮಂಜುನಾಥ್, ಡಾ||ನಾಗಭೂಷಣ್, ಸೇವಾನಾಯ್ಕ, ಭೀಮಾನಾಯ್ಕ, ಕಾಡಜ್ಜಿ ಚಂದ್ರಣ್ಣ, ಅನಸೂಯಮ್ಮ ವೀರಭದ್ರಪ್ಪ, ಮಂಜುನಾಥ್, ಸುನಂದಮ್ಮ ಮಂಜುನಾಥ್, ರತ್ನಮ್ಮ ಪರಸಪ್ಪ ಮತ್ತಿತರರು ಉಪಸ್ಥಿತರಿದ್ದರು.ಎಪಿಎಂಸಿ ಸದಸ್ಯ ಶಾಂತರಾಜ್ ಸ್ವಾಗತಿಸಿದರೆ, ಬಾತಿ ಅಂಜಿನಪ್ಪ ನಿರೂಪಿಸಿದರು. ಜಿ.ಟಿ.ವಿರೇಶ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








