ಶಿರಾ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತರನ್ನು, ಕಾರ್ಮಿಕರನ್ನು ಹಾಗೂ ಜನ ಸಾಮಾನ್ಯರನ್ನು ಮನೆಯಲ್ಲಿ ಸುಮ್ಮನೆ ಕೂರಲು ಕೂಡ ಬಿಡದೆ ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಿದ್ದಲ್ಲದೆ, ಚುನಾವಣೆಗಳಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನೂ ಮಾಡುತ್ತಿದೆ ಎಂದು ರಾಜ್ಯ ಕೃಷಿ ಬೆಲೆಯ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಗಿ ತಿಳಿಸಿದರು.
ರೈತ, ದಲಿತ, ಕಾರ್ಮಿಕ ಚಳವಳಿಗಳು ಹಾಗೂ ಜನ ಪರ ಕನ್ನಡ ಸಂಘಟನೆಗಳ ಐಕ್ಯ ಹೋರಾಟ ವೇದಿಕೆಯಿಂದ ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಬಂದು ಜನ ತತ್ತರಿಸಿಹೋಗಿದ್ದಾರೆ. ಕೋವಿಡ್ನಿಂದ ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದ ಬಿ.ಜೆ.ಪಿ. ಈವರೆಗೂ ಉದ್ಯೋಗ ಸೃಷ್ಟಿ ಮಾಡಿಲ್ಲ. ಇಂತಹ ಬಿ.ಜೆ.ಪಿ. ಪಕ್ಷಕ್ಕೆ ಯಾರೂ ಕೂಡ ಮತ ಚಲಾಯಿಸಬೇಡಿ ಎಂದರು.
ಜಾರಿಗೆ ತಂದ ಸುರೀವಾಜ್ಞೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಸೆ.28 ರಂದು ನಮ್ಮ ಸಂಘಟನೆಯಿಂದ ಹೋರಾಟ ನಡೆಸಿದರೂ ಸುಗ್ರೀವಾಜ್ಞೆಗಳನ್ನು ಕೇಂದ್ರ ಹಿಂಪಡೆಯಲಿಲ್ಲ. ಮತ ಕೇಳಲು ಮನೆ ಬಾಗಿಲಿಗೆ ಬರುವ ಬಿ.ಜೆ.ಪಿ.ಯನ್ನು ಜನ ಪ್ರಶ್ನಿಸಬೇಕೆಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಪ್ರ. ಕಾರ್ಯದರ್ಶಿ ಶಂಕರಪ್ಪ, ಸಿ.ಯತಿರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ರಾಜ್ಯ ರೈತ ಸಂಘದ ಗೌ.ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್. ರವಿಕಿರಣ್ ಪೂಣಚ್ಚ, ನವಿಲೆನೂರು ಶಂಕರಪ್ಪ, ನಾದೂರು ಕೆಂಚಪ್ಪ, ರಾಮಣ್ಣ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
