ಬೆಂಗಳೂರು
70 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕೈಯಲ್ಲಿ ದೇಶ ಸುರಕ್ಷಿತವಾಗಿಯೇ ಇತ್ತು. 5 ವರ್ಷಗಳಲ್ಲಿ ತಾವು ಮಾಡಿರುವ ಸಾಧನೆಗಳ ಬಗ್ಗೆ ಹೇಳದೆ ಧರ್ಮದ ಆಧಾರದ ಮೇಲೆ ಮತ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಬಿಜೆಪಿ ಪಕ್ಷದ ದೇಶವನ್ನು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಒಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಅವರ ಪರ ಇಂದು ಪದ್ಮನಾಭನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ನಂತರ ಮಾತನಾಡಿದರು. ನೆಹರೂ ಕಾಲದಿಂದಲೂ ಕಾಂಗ್ರೆಸ್ ಬೆಂಗಳೂರು ನಗರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಹೆಚ್ ಎ ಎಲ್, ಬಿ ಹೆಚ್ ಇ ಎಲ್ ನಂತಹ ಸಾರ್ವಜನಿಕ ಉದ್ದಿಮೆಗಳನ್ನು ಇಲ್ಲಿ ಪ್ರಾರಂಭಿಸಿದೆ. ನಗರದ ಅಭಿವೃದ್ದಿಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಹಿರಿದಾಗಿದೆ. ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ಹಿರಿಯ ಮುತ್ಸದ್ದಿ ನಾಯಕ ಹರಿಪ್ರಸಾದ್ ಕಣದಲ್ಲಿದ್ದಾರೆ. ನಗರದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ನಿಶ್ಚಿತ ಎಂದರು.
ಕಾಂಗ್ರೆಸ್ ಪಕ್ಷ ಯಾವತ್ತೂ ಕೂಡಾ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಿಲ್ಲ. ನರೆಂದ್ರ ಮೋದಿ ಅವರು 5 ವರ್ಷಗಳ ಸಾಧನೆಯನ್ನು ಹೇಳುವುದೇ ಇಲ್ಲ. ಕೇವಲ ಧರ್ಮದ ಆಧಾರದ ಮೇಲೆ ಮತದ ಕೇಳುತ್ತಿದ್ದಾರೆ. 70 ವರ್ಷಗಳಿಂದ ದೇಶ ಸುರಕ್ಷಿತವಾಗಿಲ್ಲವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಭಾಷಣಗಳಲ್ಲೂ ಪಾಕಿಸ್ಥಾನದ ಬಗ್ಗೆಯೇ ಪ್ರಸ್ಥಾಪಿಸುತ್ತಿದ್ದಾರೆ. ಭಾರತದಲ್ಲಿ ಚುನಾವಣೆ ನಡೆಯುತ್ತಿದ್ದೆಯೇ ಅಥವಾ ಪಾಕಿಸ್ಥಾನದಲ್ಲಿ ಚುನಾವಣೆ ನಡೆಯುತ್ತಿದೆಯೋ ಗೊತ್ತಾಗುತ್ತಿಲ್ಲ ಎಂದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಮಾತನಾಡಿ, ದೇಶದ ಅಭಿವೃದ್ದಿ ಹಾಗೂ ರಾಜ್ಯದ ಅಭಿವೃದ್ದಿಗೆ ಕಾಂಗ್ರೆಸ್ ಬೆಂಬಲಿಸಬೇಕಾಗಿದೆ. ಕ್ಷೇತ್ರದಾದ್ಯಂತ ಒಳ್ಳೆಯ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಕೊಡುಗೆಗಳ ಆಧಾರದ ಮೇಲೆ ಜನ ಮತ ನೀಡಲಿದ್ದಾರೆ ಎಂದರು.
ಬೆಳಿಗ್ಗೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಪದ್ಮನಾಭನಗರದ ಬಡಾವಣೆಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಾಯಿತು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
