ಬೆಂಗಳೂರು
ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾಗುವಂತೆ ಬಿಜೆಪಿ ಕಾರ್ಯಕರ್ತರ ಮೂಲಕ ತಮಗೆ ಆಹ್ವಾನ ಬಂದಿದ್ದು ಸತ್ಯ ಎಂದು ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಮಾಡುವುದಕ್ಕೆ ನನಗೆ ಯಾವ ರೋಗ ಬಂದಿಲ್ಲ, ಬಿಜೆಪಿ ಎಷ್ಟೇ ಒತ್ತಡ ಹೇರಿದರೂ ತಾವು ಪಕ್ಷ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಚರ್ಚೆ ನಡೆಸಿದ ಶಿವರಾಂ ಹೆಬ್ಬಾರ್ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ. ಅದು ನನ್ನ ಹಕ್ಕು ,ಅದನ್ನು ಕೇಳಿಯೇ ಕೇಳುತ್ತೇನೆ. ಪಕ್ಷದ ಮೇಲೆ ಸ್ಪಲ್ಪ ಮುನಿಸು ಇದೆ.ಅದನ್ನು ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇನೆ ಎಂದರು.
ರಾಜಕೀಯದಲ್ಲಿ ಎಲ್ಲರಿಗೂ ಇರುವಂತೆ ನನಗೂ ಸಚಿವನಾಗುವ ಆಸೆ ಇದೆ.ಅದರಲ್ಲಿ ತಪ್ಪೇನಿದೆ. ಸಚಿವ ಸ್ಥಾನ ಕೊಡಿ ಎಂದು ಎಲ್ಲೂ ಯಾರನ್ನು ನಾನು ಕೇಳಿಲ್ಲ.ಇಂದಲ್ಲಾ ನಾಳೆ ನಾನು ಮಂತ್ರಿಯಾಗುತ್ತೇನೆ ಎಂಬ ನಂಬಿಕೆಯಿದೆ. ಸಚಿವ ಸ್ಥಾನ ಕೊಟ್ಟಿಲ್ಲವೆಂದ ಮಾತ್ರಕ್ಕೆ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ತಮ್ಮ ಮೇಲಿನ ಆರೋಪಕ್ಕೆ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿದರು.
ತಮ್ಮ ಕುಟುಂಬ ಮತ್ತು ಮೊಮ್ಮಕ್ಕಳ ಜೊತೆ ಅಂಡಮಾನ್ ಗೆ ಪ್ರವಾಸ ಹೋಗಿದ್ದೆ, ಒಂದು ತಿಂಗಳು ಮೊದಲೇ ಪ್ರವಾಸ ಪೂರ್ವ ನಿಗದಿಯಾಗಿತ್ತು. ಪ್ರವಾಸ ಹೋಗುವುದಕ್ಕೂ ಇಲ್ಲಿ ಸಮಸ್ಯೆ ಸೃಷ್ಟಿಯಾಗಿರುವುದಕ್ಕೂ ಯಾವುದೇ ಸಂಬಂಧವಿಲ್ಲ.ಇದು ಕೇವಲ ಕಾಕತಾಳೀಯ. ಅಪ್ಪನ ಮೇಲೆ ಮಕ್ಕಳು ಸಿಟ್ಟಾಗೋದು ಸಹಜ ತಾನೆ, ಹಾಗಂತ ಮಕ್ಕಳು ಮನೆ ಬಿಟ್ಟು ಹೋಗುತ್ತಾರಾ, ಅದೇ ರೀತಿ ಕೌಟುಂಬಿಕ ಸಮಸ್ಯೆ ಇರುತ್ತವೆ.ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ತೊರೆಯುವುದಿಲ್ಲ ಎಂದು ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
