‘ನಿನ್ನೊಲವಿನಲಿ’ ‘ಆಂತರ್ಯದ ಪ್ರತಿಬಿಂಬ’ ಕವನ ಸಂಕಲನಗಳ ಲೋಕಾರ್ಪಣೆ

ಕಂಪ್ಲಿ

     ಸಾಹಿತ್ಯ ಸಂಪತ್ತು ಮತ್ತು ಸ್ನೇಹ ಸಂಪತ್ತು ಕಂಪ್ಲಿ ನಾಗರೀಕರಲ್ಲಿ ಹೇರಳವಾಗಿದೆ ಎಂದು ಬಳ್ಳಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಘಟಕದ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪರವರು ಹೇಳಿದರು. ಅವರು ಸ್ಥಳೀಯ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಭಾನುವಾರ ಇಲ್ಲಿನ ಸಾಹಿತ್ಯ ಸಿರಿ ಪ್ರತಿಷ್ಠಾನ ಹಮ್ಮಿಕೊಂಡ, ಕಂಪ್ಲಿ ಕೋಟೆಯ ನ್ಯಾಯವಾದಿ ಜಿ.ಪ್ರಕಾಶ್ ಇವರ ಎರಡು ಕವನ ಸಂಕಲನಗಳ ಲೋಕಾರ್ಪಣಾ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

      ಕಂಪ್ಲಿ ಪಟ್ಟಣದಲ್ಲಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳು ಜರುಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಾಹಿತ್ಯ ಸರ್ವರಿಗೂ ಜೀವಾನುಭವವನ್ನು ಕೊಟ್ಟಿಕೊಡುವ ಸಾಧನೆಯಾಗಿದೆ. ವಕೀಲಿ ವೃತ್ತಿಯಲ್ಲಿ ಜಿ.ಪ್ರಕಾಶ್ ಅವರಿಗೆ ವೃತ್ತಿಯ ಅನುಭವಗಳೇ ಕಾವ್ಯ ರಚನೆಗೆ ಸ್ಫೂರ್ತಿ ನೀಡಿದೆ. ಕವಿಗೆ ಪ್ರೇರಣೆ ನೀಡುವ ಪರಿಸರ ಕಂಪ್ಲಿಯಲ್ಲಿ ಹೇರಳವಾಗಿದೆ. ಡಾ.ರಾಜ್ ಪ್ರಶಸ್ತಿ ನೀಡಿ ನನ್ನನ್ನು ಗೌರವಿಸಿದಕ್ಕಾಗಿ ಭಾವೈಕ್ಯ ಬಳಗಕ್ಕೆ ನಾನು ಋಣಿ ಇದ್ದೇನೆ ಎಂದು ಹೇಳಿದರು.

    ಇಲ್ಲಿನ ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರಕಾಶ್ ಅವರ ಎರಡು ಕವನ ಸಂಕಲನಗಳು ನಾಗರೀಕ ಸಮಾಜದ ಎಲ್ಲ ವರ್ಗಗಳ ಜನತೆಯ ಗಟ್ಟಿ ಪ್ರತಿಧ್ವನಿಯಾಗಿ ರೂಪುಗೊಂಡಿವೆ. ಸಾರ್ಥಕ ಬದುಕನ್ನು ಕಟ್ಟಿಕೊಳ್ಳುವಂತೆ ಕವನ ಸಂಕಲನಗಳು ಪ್ರೇರೇಪಿಸುತ್ತವೆ ಅಲ್ಲದೆ ಸಂಬಂಧಗಳನ್ನು ಗಟ್ಟಿಯಾಗಿ ಬೆಸೆಯುವ ಲಕ್ಷಣಗಳನ್ನು ಹೊಂದಿವೆ ಎಂದು ಹೇಳಿದರು.

      ಹೊಸಪೇಟೆಯ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಸ್.ಶಿವಾನಂದ ಅವರು ಜಿ.ಪ್ರಕಾಶ್ ಅವರ 7ನೇ ಕೃತಿ ‘ಆಂತರ್ಯದ ಪ್ರತಿಬಿಂಬ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ, ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದ್ದು, ಮನೆಹಾಳ ಧಾರವಾಹಿ ನೋಡುವ ಚಟ ಹೆಚ್ಚಾಗಿದೆ. ಪುಸ್ತಕ ಓದುವಿಕೆಯಿಂದ ಹೃದಯ ಶ್ರೀಮಂತಿಕೆ, ಸಂಸ್ಕಾರ ಪ್ರೇರಣೆಯಾಗುತ್ತದೆ, ವ್ಯಕ್ತಿತ್ವ ಪೂರ್ಣಗೊಳ್ಳುತ್ತದೆ.

       ಓದುವ ಸುಖ ಬೆಳೆಸಿಕೊಂಡಲ್ಲಿ ನಿವೃತ್ತ ಮತ್ತು ವೃದ್ಯಾಪ ಜೀವನನಕ್ಕೆ ಸಹಕಾರಿಯಾಗುತ್ತದೆ. ಆಂತರ್ಯದ ಪ್ರತಿಬಿಂಬವು ವ್ಯಕ್ತಿಯ ಅಂತರಂಗದ ಕನ್ನಡಿಯಾಗದೆ, ಸಮಾಜ, ಸಮಷ್ಠಿಯ ಪ್ರತಿಬಿಂಬ, ಗತಿಬಿಂಬವಾಗಿ ಹೊರಹೊಮ್ಮಿದೆ ಎಂದು ಕೃತಿ ಕುರಿತು ವಿಮರ್ಶಿಸಿ, ನಾನಾ ಘಟನೆಗಳನ್ನು ನೆನಪಿಸಿಕೊಳ್ಳುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

      ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಚೋರನೂರು ಟಿ.ಕೊಟ್ರಪ್ಪ ಅವರು ಪ್ರಕಾಶ್ ಅವರ 8ನೇ ಕೃತಿ ‘ನಿನ್ನೊಲವಿನಲಿ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ, ವೃತ್ತಿಯೊಂದಿಗೆ ಪ್ರವೃತ್ತಿಯೂ ಮುಖ್ಯವಾಗಿದೆ. ಪ್ರೀತಿ ಪ್ರೇಮಗಳನ್ನು ಅನುಭವಿಸಿದವರೇ ಸಮರ್ಥವಾಗಿ ವಿಮರ್ಶಿಸಬಲ್ಲರು. ಪ್ರೀತಿ ಇಲ್ಲದೆ ಹುಲ್ಲು ಕಡ್ಡಿಯೂ ಚಿಗುರಲಾರದು. ಜಿ.ಪ್ರಕಾಶ್ ಅವರ ‘ನಿನ್ನೊಲವಿನಲಿ’ ಸಂಕಲನದಲ್ಲಿ ಹೃದಯ ತಟ್ಟುವಂತಹ ಕವನಗಳು, ಸಮಾಜವನ್ನು ಮಾನವೀಯಗೊಳಿಸುವ ಕನಸುಳ್ಳ ಕವನಗಳು ಹೇರಳವಾಗಿವೆ ಎಂದು ಕೃತಿಯನ್ನು ವಿಮರ್ಶಿಸಿದರು.

      ಜನರನ್ನು ಚದುರಿಸಲು ಕವಿಗೋಷ್ಠಿ ಏರ್ಪಡಿಸಿ ಎಂದು ಪೊಲೀಸರಿಗೆ ಸೂಚನೆ ನೀಡುವಂತಹ ಪರಿಸ್ಥಿತಿ ಉಂಟಾಗಿದೆ. ತೋಚಿದ್ದು ಗೀಚಿದ್ದು ಕಾವ್ಯ ಎನ್ನುವಂತಾಗಿದೆ ಎಂದು ವಿಷಾಧಿಸಿದರು. ಅನಂತಪುರದ ವಿಜಯನಗರ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಎಚ್.ರಾಘವೇಂದ್ರಾಚಾರ್ ಮಾತನಾಡಿ, ಸಾರ್ವತ್ರಿಕತೆಯೇ ಕವಿತೆಗಳ ಅಳತೆಗೋಲಾಗಬೇಕು. ಕವಿತೆಗಳನ್ನು ಅರ್ಥೈಸಿಕೊಂಡಲ್ಲಿ ಮಾತ್ರ ಹೃದಯಕ್ಕೆ ಹತ್ತಿರವಾಗುತ್ತವೆ ಎಂದು ಕವಿಗಳಿಗೆ ನಾನಾ ಸಲಹೆ ಸೂಚನೆಗಳನ್ನು ಹೇಳಿದರು. ಹೊಸಪೇಟೆಯ ಸಂಗೀತ ಭಾರತಿ ಅಧ್ಯಕ್ಷ ನ್ಯಾಯವಾದಿ ಎಚ್.ಪಿ.ಕಲ್ಲಂಭಟ್ ಮಾತನಾಡಿ, ಕವಿತೆಗಳಲ್ಲಿ ಕಾವ್ಯಾಂಶಗಳ ಆಗರವಿದ್ದು ಅನುಭವದ ಸಾಹಿತ್ಯವಾಗಿ ಹೊರಹೊಮ್ಮಿದೆ ಎಂದರು.

      ಗಂಗಾವತಿಯ ಶರಣ ಸಾಹಿತಿ ಎನ್.ಶರಣಪ್ಪ ಮೆಟ್ರಿ ಮಾತನಾಡಿ, ಶಾಸ್ತ್ರ, ಲೋಕ ಮತ್ತು ಕಾವ್ಯ ಜ್ಞಾನವಿದ್ದಲ್ಲಿ ಉತ್ತಮ ಕವಿತೆಗಳನ್ನು ರಚಿಸಲು ಸಾಧ್ಯ. ಉದಯೋನ್ಮುಖ ಕವಿಗಳು ಕವಿತೆ ರಚನೆಯಲ್ಲಿ ಕಾವ್ಯಾಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

       ಬೆಂಗಳೂರಿನ ಜಿ.ಸಹನಾ ಗುಡೆಕೋಟೆಯವರಿಂದ ಗೀತಗಾಯನ ಜರುಗಿತು. ಡಿ.ಎಸ್.ರಾಜಕುಮಾರ್ ಸ್ವಾಗತಿಸಿದರು, ಎಸ್.ಜಿ.ಚಿತ್ರಗಾರ ಪ್ರಾಸ್ತವಿಕ ನುಡಿದರು, ಕವಿತಾಳ ಬಸವರಾಜ ವಂದಿಸಿದರು, ಎಸ್.ಶ್ಯಾಮಸುಂದರರಾವ್ ನಿರೂಪಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ವೀರಮ್ಮ ನಾಗರಾಜ, ರುಕ್ಮಣ ಬಾಬುರಾಜಶ್ರೀಖಂಡೆ, ಪುಷ್ಪಾ ಜಿ.ಪ್ರಕಾಶ್, ಮಡಿವಾಳ ಹುಲುಗುಪ್ಪ, ಬೂದಗುಂಪಿ ಅಂಬಣ್ಣ, ಕರೇಕಲ್ ಶಂಕ್ರಪ್ಪ, ಎಸ್.ಡಿ.ಬಸವರಾಜ ಸೇರಿ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link