ದಾವಣಗೆರೆ:
ರಾಜ್ಯ ಸರ್ಕಾರ ತಾಂಡಗಳ ಸಮಗ್ರ ಅಭಿವೃದ್ಧಿಗಾಗಿ ನೀತಿಯೊಂದನ್ನು ಜಾರಿಗೆ ತರಬೇಕೆಂದು ಹೈಕೋರ್ಟ್ ವಕೀಲ ಎನ್.ಅನಂತ ನಾಯ್ಕ ಒತ್ತಾಯಿಸಿದ್ದಾರೆ.
ನಗರದ ಚೇತನ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ವಿಶ್ವ ಗೋರ್ ಕಟಮಾಳೊ ಸಂಘಟನೆಯಿಂದ ಬಂಜಾರರ ವಲಸೆ ತಡೆಯಲು ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ ಬಂದು ಏಳು ದಶಕಗಳು ಕಳೆದರೂ ಸಹ ತಾಂಡಗಳ ನೆಲೆಸಿರುವ ಬಂಜಾರರ ಹಾಗೂ ತಾಂಡಗಳ ಅಭಿವೃದ್ಧಿಗಾಗಿ ನೀತಿಯನ್ನು ರೂಪಿಸಿಲ್ಲ. ಇನ್ನೂ ಮುಂದಾದರೂ ರಾಜ್ಯ ಸರ್ಕಾರ ತಾಂಡಗಳ ಸಮಗ್ರ ಅಭಿವೃದ್ಧಿಗೆ ನೀತಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ನಗರ ಮತ್ತು ಪಟ್ಟಣಗಳಿಂದ ದೂರ ಇರುವ ತಾಂಡಗಳಲ್ಲಿ ವಾಸಿಸುತ್ತಿರುವ ಜನರ ಹೆಸರಲ್ಲಿ ನಿವೇಶನ, ಮನೆಗಳ ಹಕ್ಕುಪತ್ರಗಳಿಲ್ಲ. ಹೀಗಾಗಿ ವಾಸಿಸುವವನೇ ಮನೆ ಒಡೆಯ ಕಾಯ್ದೆಯಲ್ಲಿ ಹಕ್ಕುಪತ್ರ ನೀಡಬೇಕು. ಎಲ್ಲಾ ತಾಂಡಗಳಲ್ಲೂ ಆರೋಗ್ಯ ಕೇಂದ್ರಗಳನ್ನು ಆರಂಭಿಸಬೇಕು. ತಾಂಡದ ಜನ ಗುಳೆ ಹೋಗುವ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ನವೋದಯ ಶಾಲೆಗಳ ಮಾದರಿಯಲ್ಲಿ ವಸತಿ ಶಾಲೆಗಳನ್ನು ಆರಂಭಿಸಬೇಕು. ಯುವಕರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು. ಲಂಬಾಣಿ ಭಾಷೆಯನ್ನು ಸಂವಿಧಾನದ ಪರಿಧಿಯೊಳಗೆ ತರಬೇಕು. ಹಾಗೂ ತಾಂಡಗಳ ಸಮಸ್ಯೆಗಳನ್ನು ಅಧ್ಯಯನ ಮಾಡಲು ತಾಂಡ ಅಭಿವೃದ್ಧಿ ನಿಗಮದ ಅಡಿಯಲ್ಲಿ ಅನುಭವಿಗಳ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು
ಬಂಜಾರರ ಮೂಲವಾಗಿರುವ ರಾಜಸ್ತಾನದಿಂದ ಹಿಂದೆ ಆರಂಭವಾದ ವಲಸೆ ಪದ್ಧತಿ ಇಂದಿಗೂ ಮುಂದುವರೆದಿದೆ. ಆದರೆ, ಅಂದಿನ ವಲಸೆ ಹಾಗೂ ಇಂದಿನ ವಲಸೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಈ ವಲಸೆಯ ಕಾರಣಕ್ಕೆ ದೇಶದಲ್ಲಿ 8 ಕೋಟಿ ಜನಸಂಖ್ಯೆ ಇದ್ದರೂ ಸಹ ಇಂದಿಗೂ ನಮ್ಮ ಸಮುದಾಯ ಘಟ್ಟಿ ಅಸ್ತಿತ್ವವನ್ನು ಕಂಡುಕೊಳ್ಳಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ಥಿತಿವಂತರಿರುವರು ಪ್ರತಿಷ್ಠೆಗಾಗಿ ವಲಸೆ ಹೋದರೆ, ಲಂಬಾಣಿ ಸಮುದಾಯದ ಜನರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲಿಕ್ಕಾಗಿ ಗುಳೆ, ವಲಸೆ ಹೋಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಬ್ರಿಟಿಷ್ ಭಾರತದಲ್ಲಿ ಲಂಬಾಣಿ ಸಮುದಾಯವನ್ನು ಅಪರಾಧಿ ಬುಡಕಟ್ಟಿನಲ್ಲಿ ಸೇರಿಸಿದ ಕಾರಣಕ್ಕೆ ಸಿಕ್ಕ, ಸಿಕ್ಕ ಲಂಬಾಣಿಗರನ್ನು ಜೈಲಿಗೆ ಅಟ್ಟಲಾಯಿತು. ಹೀಗಾಗಿ ಪೊಲೀಸರ ಕಣ್ತಪ್ಪಿಸಿಕೊಳ್ಳಲಿಕ್ಕಾಗಿ ನಮ್ಮ ಜನತೆ ಕಾಡು-ಮೇಡುಗಳಲ್ಲಿ ವಾಸಿಸತೊಡಗಿದರು. ಆದ್ದರಿಂದ ಇಂದಿಗೂ ಲಂಬಾಣಿಗರು ಸಮಾಜದ ಮುಖ್ಯವಾಹಿನಿಗೆ ಬರಲಾಗಿಲ್ಲ ಎಂದು ಹೇಳಿದರು.
ಮೈಸೂರು ಪ್ರಾಂತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಮ್ಮ ಸಮುದಾಯಕ್ಕೆ ಮೊಟ್ಟ ಮೊದಲು ಶೈಕ್ಷಣಿಕ ಮೀಸಲಾತಿ ಕಲ್ಪಿಸಿದ್ದರು. ತದ ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು 1950ರಲ್ಲಿ ದೇಶಕ್ಕೆ ಸಮರ್ಪಿಸಿದ್ದ ಸಂವಿಧಾನದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಕೊರಚ, ಕೊರಮ ಜನಾಂಗಗಳ ಜತೆಗೆ ಬಂಜಾರ ಸಮುದಾಯಕ್ಕೂ ಮೀಸಲಾತಿ ನೀಡಿದ್ದರು. ಇದರ ಪರಿಜ್ಞಾನವೇ ಇಲ್ಲದ ಕೆಲವರು ದೇವರಾಜ ಅರಸು ಅವರು ಇತ್ತೀಚೆಗೆ ಲಂಬಾಣಿಗಳನ್ನು ಮೀಸಲಾತಿಯ ವ್ಯಾಪ್ತಿಗೆ ತಂದಿದ್ದಾರೆಂಬುದಾಗಿ ಅಪಪ್ರಚಾರ ಮಾಡುತ್ತಿರುವುದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಬಂಜಾರರನ್ನು 1950ರಲ್ಲಿಯೇ ಮೀಸಲಾತಿಯ ಪರಿಧಿಯೊಳಗೆ ತಂದರೂ, ನಮ್ಮ ಸ್ಥಿತಿಗತಿಗಳು ಇನ್ನೂ ಸುಧಾರಣೆಯಾಗಿಲ್ಲ. ಇತ್ತೀಚಿನ ವರದಿಯ ಪ್ರಕಾರ ಕರ್ನಾಟಕದ ಒಟ್ಟು ಸಾಕ್ಷರತೆಯ ಪ್ರಮಾಣ ಶೇ.61 ರಷ್ಟಿದ್ದರೆ, ಬಂಜಾರರ ಸಾಕ್ಷರತೆ ಪ್ರಮಾಣ ಕೇವಲ ಶೇ.23 ರಷ್ಟಿದೆ. ಇನ್ನೂ ಶೇ.77ರಷ್ಟು ಜನ ಅನಕ್ಷರಸ್ಥರಾಗಿದ್ದಾರೆ. ಆದರೆ, ನಮ್ಮ ಸೋದರ ಸಮುದಾಯಗಳು ಎಲ್ಲಾ ಹಾಸ್ಟೆಲ್ಗಳಲ್ಲೂ ಲಂಬಾಣಿ ಹುಡುಗರೇ ತುಂಬಿಕೊಂಡಿದ್ದಾರೆಂಬುದಾಗಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಇತ್ತೀಚೆಗೆ ಸರ್ಕಾರ ನಡೆಸಿದ ಸಮೀಕ್ಷೆಯ ಪ್ರಕಾರ ಶಾಲೆಯಿಂದ ಹೊರಗುಳಿದಿರುವ 68 ಮಕ್ಕಳಲ್ಲಿ 13 ಜನ ಮಕ್ಕಳು ನಮ್ಮ ಸಮುದಾಯದವರಾಗಿದ್ದಾರೆ. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಶಿಕ್ಷಣದ ವ್ಯಾಪಾರೀಕರಣದ ಪರಿಣಾಮದಿಂದಾಗಿ ದುಬಾರಿ ಶುಲ್ಕ ಪಾವತಿಸಲಾಗದೇ, ಸಮುದಾಯದ ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿ, ಉದ್ಯೋಗ ಹರಸಿ ಗುಳೆ, ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಲಸೆಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗೆ ನಿತ್ಯವೂ ವಲಸೆಯ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾ ಹೋದರೆ, ಸಮಾಜಕ್ಕೆ ಎಂತಹ ಮಕ್ಕಳನ್ನು ನೀಡಲು ಸಾಧ್ಯ. ಯಾವುದೇ ಒಂದು ಸಮಾಜದ ಅಭಿವೃದ್ಧಿಯೂ ಶಿಕ್ಷಣದ ಮೇಲೆ ಅವಲಂಬನೆಯಾಗಿದ್ದು, ನಮ್ಮ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ, ವಲಸೆ ಹಾಗೂ ಗುಳೆ ಹೋಗುವುದನ್ನು ತಪ್ಪಿಸಲಿಕ್ಕಾಗಿ ಸಮಾಜದ ಯುವಕರು ಸೈದ್ಧಾಂತಿಕ, ಸಂಘಟನೆಗಳ ಭಿನ್ನಾಭಿಪ್ರಾಯ ಮರೆತು ಒಂದಾಗಿ, ಸಂಘಟಿತ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಹಿರಿಯ ವಕೀಲರಾದ ರಾಘವೇಂದ್ರ ನಾಯ್ಕ, ಎನ್.ಜಯದೇವ ನಾಯ್ಕ, ಮುಖಂಡರಾದ ಗಾಯಕ್ ಕುಬೇರ್ ನಾಯ್ಕ, ಮಂಜು ನಾಯ್ಕ, ಖಂಡು ಬಂಜಾರ, ಪ್ರಕಾಶ್, ಈಶ್ವರ್ ಅಹಿಂಸಾ, ಲಿಂಗರಾಜ ನಾಯ್ಕ, ರುದ್ರಾಕ್ಷಿ ಬಾಯಿ ಪುಟ್ಟ ನಾಯ್ಕ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
