ಹರಿಹರ:
ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮತ್ತು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮೈಲಾರ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕನಕಗುರು ಶಾಖಾ ಮಠದ ಉದ್ಘಾಟನೆಯನ್ನು ಮೇ.7,8 ಮತ್ತು 9 ರಂದು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಶಾಸಕ ಎಸ್. ರಾಮಪ್ಪ ಕೋರಿದ್ದಾರೆ.
ನಗರದ ರಚನಾ ಕ್ರೀಡಾ ಟ್ರಸ್ಟ್ ನಲ್ಲಿ ಶುಕ್ರವಾರ ನೆಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ, ಹೂವಿನ ಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಶಾಖಾ ಪೀಠವನ್ನು ನಿರ್ಮಿಸಲಾಗಿದ್ದು, ಮೇ.7,8 ಮತ್ತು 9ರಂದು ಏಳುಕೋಟಿ ಭಕ್ತರ ಕುಟೀರದ ಉದ್ಘಾಟನೆಯನ್ನೆ ಹಮ್ಮಿಕೊಳ್ಳಲಾಗಿದ್ದು, ಹರಿಹರದಲ್ಲಿ ಐದರಂದು ಶ್ರೀಗಳು ಹಾಗೂ ತಾಲೂಕಿನ ಭಕ್ತರಿಂದ ಬೃಹತ್ ಬೈಕ್ ರ್ಯಾಲಿಯನ್ನು ನೆಡೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರದಲ್ಲಿ ಪೀಠಾಧಿಪತಿ ನಿರಂಜನಾನಂದಪುರಿ ಶ್ರೀಗಳು ಹಾಗೂ ಕನಕ ಪೀಠದ ಶಾಖಾ ಮಠಗಳ ಶ್ರೀಗಳು ಸೇರಿದಂತೆ ನಾಡಿನ ನಾನಾ ಮಠಾಧೀಶರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಕುರುಬ ಹಾಗೂ ಇತರೆ ಸಮಾಜಗಳ ಮುಖಂಡರು ಸೇರಿದಂತೆ ನಾಡಿನ ಅನೇಕ ಭಾಗಗಳಿಂದ ಅಂದಾಜು 2 ಲಕ್ಷಕ್ಕೂ ಹೆಚ್ಚು ಭಕ್ತ ಸಮೂಹ ಮಹೋತ್ಸವಕ್ಕೆ ಸೇರಲಿದ್ದಾರೆ ಎಂದು ತಿಳಿಸಿದರು.
ಕುರುಬ ಸಮಾಜದ ಈ ಬೃಹತ್ ಕಾರ್ಯಕ್ರಮದ ಕುರಿತು ಸಮಾಜದಲಿ ಜಾಗೃತಿ ಮೂಡಿಸಲು ಮೇ 5ರ ಭಾನುವಾರದಂದು ಬೆಳಿಗ್ಗೆ 10ಕ್ಕೆ ಶಿವಮೊಗ್ಗ ರಸ್ತೆ ಪಕ್ಕೀರಸ್ವಾಮಿ ಮಠದಿಂದ ಬೃಹತ್ ಬೈಕ್ ರ್ಯಾಲಿ ಆಯೋಜಿಸಿದೆ. 10 ಸಾವಿರ ಬೈಕ್ಗಳ ಈ ರ್ಯಾಲಿಯು ಹರಿಹರದಿಂದ ಕುಮಾರಪಟ್ಟಣ, ಕವಲತ್ತು, ರಾಣೆಬೆನ್ನೂರು ಮಾರ್ಗವಾಗಿ ಮೈಲಾರಕ್ಕೆ ತಲುಪಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ರೇವಣಸಿದ್ದಪ್ಪ, ಸುರೇಶ್ ಚಂದಾಪೂರ್, ಚೂರಿ ಜಗದೀಶ್, ಸಿ.ಎನ್.ಹುಲಿಗೇಶ್, ಎಸ್.ಎಂ.ವಸಂತ್, ಡಿ. ಕುಮಾರ್, ಪಾಲಾಕ್ಷಪ್ಪ, ರೇವಣಪ್ಪ, ಗುತ್ಯಪ್ಪ, ಮಾಲತೇಶ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/3hrr-1.gif)