ಬೆಂಗಳೂರು: 
ಅಪರೂಪದ ನಿದರ್ಶನವೊಂದರಲ್ಲಿ, ಸಾರ್ವಜನಿಕರು ಕಟ್ಟಿದ್ದ 2 ಲಕ್ಷ 94 ಸಾವಿರ ರೂಪಾಯಿ ಕಿಯೋಸ್ಕ್ ನಿಂದ ನಾಪತ್ತೆಯಾದ ಬಳಿಕ ಬನಶಂಕರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್ ನನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ ಬಿ) ಅಮಾನತು ಮಾಡಿದೆ.
ಈ ಸಂಬಂಧ ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಕೂಡಾ ದಾಖಲಾಗಿದೆ. ಕ್ಯಾಷಿಯರ್ ಲಕ್ಷ್ಮೀ ಪುತ್ರ ನಿಂಗಪಪ್ಪ ನನ್ನು ಕಳೆದ ವರ್ಷವಷ್ಟೇ ಬನಶಂಕರಿಯ ಬನಗಿರಿ ಕಚೇರಿಗೆ ನಿಯೋಜಿಸಲಾಗಿತ್ತು.
ಸೆಪ್ಟೆಂಬರ್ 28 ರಂದು ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನೀರಿನ ಬಿಲ್ ಮತ್ತು ನಗದನ್ನು ಲೆಕ್ಕಾಹಾಕುವಾಗ 2 ಲಕ್ಷದ 94 ಸಾವಿರದ 60 ರೂಪಾಯಿ ನಾಪತ್ತೆಯಾಗಿರುವುದು ಕಂಡುಬಂದಿತ್ತು ಎಂದು ಬಿಡಬ್ಲ್ಯೂಎಸ್ ಎಸ್ ಬಿ ಮುಖ್ಯಸ್ಥ ಎನ್. ಜಯರಾಮ್ ಹೇಳಿದ್ದಾರೆ.ಕ್ಯಾಷಿಯರ್ ಶಂಕಿತ ಚಟುವಟಿಕೆಗಳ ಬಗ್ಗೆ ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾನೆ. ಆತನ ಮನೆಯಲ್ಲಿ ವಿಚಾರಣೆ ನಡೆಸಿದ್ದೇವೆ. ಕಿಯೋಸ್ಕ್ ನಲ್ಲಿನ ಹಣದ ಬಗ್ಗೆ ಸಿಬ್ಬಂದಿಯೇ ಸಂಪೂರ್ಣ ಹೊಣೆಯಾಗಿರುತ್ತಾರೆ. ಈ ಸಂಬಂಧ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಾದ್ಯಂತ ಬಿಡಬ್ಲ್ಯೂಎಸ್ ಎಸ್ ಬಿಯ 74 ಕಿಯೋಸ್ಕ್ ಗಳಿವೆ. ಕಚೇರಿ ಅವಧಿ ಮುಗಿದರೂ ಇದರ ಮೂಲಕ ಸಾರ್ವಜನಿಕರು ಶುಲ್ಕವನ್ನು ಕಟ್ಟಬಹುದಾಗಿದೆ. ಕಿಯೋಸ್ಕ್ ನಿಂದ ಹಣ ನಾಪತ್ತೆಯಾಗಿರುವುದು ಅಪರೂಪವಾಗಿದೆ ಎಂದು ಮತ್ತೋರ್ವ ಹಿರಿಯ ಅಧಿಕಾರಿ ಹೇಳಿದ್ದಾರೆ.
