ಬಳ್ಳಾರಿ
ರಾಹುಲ್ ಗಾಂಧಿ ಅವರನ್ನು ಕೊಲ್ಲಲು ಬಯಸಿದಂತ ಪುಣ್ಯಾತ್ಮನನ್ನು ಹುಡುಕಿಕೊಂಡು ಅವಾರ್ಡ್ ಕೊಡಬೇಕೆಂದು ಹೇಳಿಕೆ ನೀಡಿದ್ದ ಚಕ್ರವತಿ ಸೂಲಿಬೆಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ಜಗಧೀಶ್ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವತಿ ಸೂಲಿಬೆಲೆ ಅವರ ವಿರುದ್ಧ ಕಾನೂನು ಪ್ರಕಾರ ತನಿಖೆ ನಡೆದು ಶಿಕ್ಷೆಗೆ ಗುರಿ ಮಾಡಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿ ಚಂದ್ರು ಮಾತನಾಡಿ, ಮೋದಿ ಸುಳ್ಳಿನ ಸರದಾರ. ಮಾತಿನ ಮೋಡಿಯ ಮೋಡಿಗಾರ.
ಜನತಂತ್ರ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಪ್ರಮುಖ 19 ಯೋಜನೆಗಳನ್ನು ತಿದ್ದುಪಡಿ ಮಾಡಿ ಬಿಜೆಪಿ ಪಕ್ಷದ ಯೋಜನೆಗಳೆಂದು ಬಿಂಬಿಸಲು ಹೊರಟಿದ್ದಾರೆ ಎಂದು ಅನೇಕ ಯೋಜನೆಗಳನ್ನು ಉದಾಹರಣೆಯಾಗಿ ಹೇಳಿದರು. ಜಲಾಶಯಗಳ ನಿರ್ಮಾಣ, ಇಸ್ರೋ, ಮತದಾನದ ಹಕ್ಕು, ಆಧಾರ್ ಕಾರ್ಡ್, ಚಂದ್ರ ಯಾನ ಸೇರಿದಂತೆ ಅನೇಕ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ ಎಂದರು.
ಮಾಹಿತಿ ಹಕ್ಕು ಕಾಯ್ದೆ, ಕಡ್ಡಾಯ ಶಿಕ್ಷಣ, ಬಿಸಿಯೂಟ, ಬೆಂಬಲ ಬೆಲೆ, ಸಾಲ ಮನ್ನಾ, ಆರೋಗ್ಯ ಭಾಗ್ಯ, ಕ್ಷೀರ ಭಾಗ್ಯ, ಅನ್ನ ಭಾಗ್ಯ, ಪಶು ಭಾಗ್ಯ, ಕೃಷಿ ಭಾಗ್ಯ ಸೇರಿ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತರುವ ಮೂಲಕ ಕೇವಲ ರಾಜ್ಯ ಮಾತ್ರವಲ್ಲ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಐದು ವರ್ಷ ಸುಳ್ಳು ಹೇಳಿ ಇದೀಗ ಸೈನಿಕರನ್ನು ಮುಂದಿಟ್ಟುಕೊಂಡು ಮತ ಯಾಚಿಸಲು ಬಿಜೆಪಿಯ ಮೋದಿ ಹೊರಟಿದ್ದಾರೆ ಎಂದು ಟೀಕಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮಯ್ಯ, ಚಿಂತಕಿ ವಸುಂಧರಾ ಭೂಪತಿ, ಲೇಖಕಿ ಬಿಟಿ ಲಲಿತಾ ನಾಯಕ್ ಮತ್ತಿತರರು ಕೂಡ ಮಾತನಾಡಿ ಮೋದಿ, ರಾಹುಲ್ ಇರಬಾರದು ಅಂತೇನಿಲ್ಲ. ಈ ಚುನಾವಣೆಯಲ್ಲಿ ಜನ ಪ್ರಜ್ಞಾವಂತಿಕೆಯಿಂದ ಮತ ಹಾಕುವಂತೆ ಮನವಿ ಮಾಡಿದರು. ಮಹಿಳೆಯರು, ಮಕ್ಕಳಿಗೆ ರಕ್ಷಣೆ ಇಲ್ಲ. ಕೃಷಿ, ಕಾರ್ಮಿಕರಿಗೆ ನೆಲೆ ಇಲ್ಲ. ರೈತರು ದಿವಾಳಿ ಎದ್ದಿದ್ದಾರೆ. ಇಂತಹವನ್ನೆಲ್ಲ ಗಮನಿಸಿ ಕಾಂಗ್ರೆಸ್ ನ ಉಗ್ರಪ್ಪನವರಿಗೆ ಮತ ಹಾಕುವಂತೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
