ಬೆಂಗಳೂರು
ಕೇಂದ್ರದ ಮಧ್ಯಂತರ ಬಜೆಟ್ ಸೂಪರ್ ಕ್ಯಾಂಡಿ. ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುವಂತೆ ಕಾಟನ್ ಕ್ಯಾಂಡಿ ಅಲ್ಲ. 48 ಸಾವಿರ ಕೋಟಿ ರೂ. ರೈತರ ಸಾಲ ತೀರುವಳಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ರೈತರ ಖಾತೆಗೆ ಈವರೆಗೂ 6 ಪೈಸೆಯೂ ಜಮೆ ಆಗಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮೇಲ್ಮನೆ ಸದಸ್ಯ ಎನ್.ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಕೇಂದ್ರದ ಮಧ್ಯಂತರ ಬಜೆಟ್ ಹಿನ್ನೆಲೆ ರಾಜ್ಯ ಬಿಜೆಪಿ ವತಿಯಿಂದ ಬೆಂಗಳೂರಿನ ಟವನ್ ಹಾಲ್ ಮುಂಭಾಗ ಹಮ್ಮಿಕೊಂಡಿದ್ದ ಮೋದಿ, ಪಿಯೂಷ್ ಗೋಯಲ್ ‘ಅಭಿನಂದನಾ ಕಾರ್ಯಕ್ರಮ’ ವನ್ನುದ್ದೇಶಿಸಿ ಮಾತನಾಡಿದ ರವಿಕುಮಾರ್, ಪ್ರಧಾನಿ ಮೋದಿಯವರ ಬಜೆಟನ್ನು ಬೊಂಬಾಯಿ ಮಿಠಾಯಿ ಎಂದು ಟೀಕಿಸುವ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಮಂಡಿಸಿದ ಬಜೆಟನ್ನು ಜಾರಿಗೊಳಿಸಿಲ್ಲ. ರೈತ ಬೆಳಕು ಯೋಜನೆಯಲ್ಲಿ ರೈತರ ಖಾತೆಗೆ ಹಣ ಕಾಕುತ್ತೇನೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು,ಕಾಂಗ್ರೆಸ್, ಜೆಡಿಎಸ್ ನಾಯಕರು ಬಿಟ್ಟು ಉಳಿದೆಲ್ಲ ನಾಯಕರು, ದೇಶದ ಜನತೆ ಬಜೆಟನ್ನು ಮೆಚ್ಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೈತ ಸಮ್ಮಾನ್ ಯೋಜನೆಯಡಿ ಮಾರ್ಚ್ ತಿಂಗಳಿನಿಂದಲೇ ರೈತರ ಖಾತೆಗೆ 4 ಸಾವಿರ ಹಣ ಜಮೆಯಾಗುತ್ತಿದ್ದು, ಸಿದ್ದರಾಮಯ್ಯ ಅವರ ಬಜೆಟ್ ಬರಿ ಘೋಷಣೆಯಾಗಿ ಮಾತ್ರ ಉಳಿದಿದೆ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿ ಸರ್ಕಾರದ ಕಾರ್ಮಿಕ, ಬಡವರ ಪರ ಯೋಜನೆಗಳನ್ನು ಮುಂಗಡಪತ್ರದಲ್ಲಿ ನೀಡಿರುವುದನ್ನು ನೋಡಿ ಪ್ರಾದೇಶಿಕ ಪಕ್ಷಗಳ ನಾಯಕಿಯರಾದ ಮಮತಾ, ಮಾಯಾವತಿ ಅವರಿಗೆ ಭಯ ಹುಟ್ಟಿದೆ ಎಂದು ತಿಳಿಸಿದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗೈರಾಗಿದ್ದು, ಶಾಸಕ ಆರ್.ಅಶೋಕ್ ತಡವಾಗಿ ಆಗಮಿಸಿದ್ದು ಸೇರಿದಂತೆ ಬಹುತೇಕ ನಾಯಕರು ಇದರಿಂದ ದೂರವೇ ಉಳಿದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








