ಬೆಂಗಳೂರು
ಎಚ್1 ಎನ್1 ಸೋಂಕಿನಿಂದ ಅಕಾಲಿಕ ನಿಧನರಾದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಬೊಂಬೆನಾಡು ಚನ್ನಪಟ್ಟಣದಿಂದ ವೃತ್ತಿ ಆರಂಭಿಸಿ ಸಾಕಷ್ಟು ಹೆಸರು ಮಾಡಿದ್ದು ಅವರ ಅಗಲಿಕೆಗೆ ರಾಮನಗರ ಜಿಲ್ಲೆಯ ಜನತೆ ಕಣ್ಣೀರಿಟ್ಟಿದ್ದಾರೆ.
ಚನ್ನಪಟ್ಟಣ ಉಪವಿಭಾಗದಲ್ಲಿ ಎಎಸ್ಪಿಯಾಗಿ 18 ತಿಂಗಳುಗಳ ಕಾಲ 2001ರ ಸೆಪ್ಟೆಂಬರ್ 17ರಿಂದ 20013ರ ಏಪ್ರಿಲ್ 18ರವರೆಗೆ ಮಧುಕರ್ ಶೆಟ್ಟಿ ಕರ್ತವ್ಯ ನಿರ್ವಹಿಸಿದ್ದರು. ಪ್ರೋಬೆಷನರಿ ಅವಧಿಯಲ್ಲಿಯೇ ದಕ್ಷ ಹಾಗೂ ಉತ್ತಮ ಆಡಳಿತ ನೀಡಿ ಸಾರ್ವಜನಿಕವಾಗಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ರಾತ್ರಿ ಪಾಳಿಯನ್ನು ಆರಂಭಿಸಿ ಪೊಲೀಸರಿಗೆ ಸೈಕಲ್ ಕೊಡಿಸಿ ಗಸ್ತು ತಿರುಗುವಂತೆ ಮಾಡಿದ್ದರು.
ತಾಲೂಕಿನ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಕೂಡ ಮಾಡಿಸಿಕೊಟ್ಟಿದ್ದರು. ಇದಲ್ಲದೇ ರಾಜ್ಯವೇ ಬೆಚ್ಚಿಬಿದ್ದಿದ್ದ ನೀರಾ ಚಳುವಳಿಯ ವೇಳೆ ಚನ್ನಪಟ್ಟಣ ತಾಲೂಕಿನ ವಿಠ್ಠೇನಹಳ್ಳಿ ಗ್ರಾಮದ ಗೋಲಿಬಾರ್ ನಿಂದ ಪೊಲೀಸರು ಗ್ರಾಮಕ್ಕೆ ಕಾಲಿಡಲು ಹೆದರುತ್ತಿದ್ದರು. ಈ ವೇಳೆ ಸ್ವತಃ ಮುಂದಾಳಾಗಿ ನಿಂತಿದ್ದ ಮಧುಕರ್ ಶೆಟ್ಟಿ ಗ್ರಾಮಸ್ಥರ ಜೊತೆ ಸಭೆ ನಡೆಸಿದ್ದರು. ಈ ಮೂಲಕ ಗ್ರಾಮಸ್ಥರು ಹಾಗೂ ಪೆಲೀಸರ ನಡುವೆ ಸೌಹಾರ್ದತೆ ಬೆಳೆಯುವಂತೆ ಮಾಡಿದ್ದರು.
ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದ ಸಮೀಪದ ಕಲ್ಲು ಕ್ವಾರಿಯೊಂದರಲ್ಲಿ ಜೀತದಾಳುಗಳಾಗಿದ್ದ 42 ಜನ ಕಾರ್ಮಿಕರಿಗೆ ಮುಕ್ತಿ ಕೊಡಿಸಿ ಅವರಿಗೆ ಸ್ವಂತ ಹಣದಿಂದ ರೈಲ್ವೇ ಟಿಕೆಟ್, ಖರ್ಚಿಗೂ ಸಹ ಹಣ ನೀಡಿ ಗ್ರಾಮಗಳಿಗೆ ಕಳುಹಿಸಿದ್ದರು. ಠಾಣಾ ಸಿಬ್ಬಂದಿಯನ್ನು ಹುರಿದುಂಬಿಸುವ ನಿಟ್ಟಿನಲ್ಲಿ ತಮ್ಮ ವೇತನದ ಹಣದಿಂದ ಬಹುಮಾನ ನೀಡುತ್ತಿದ್ದರು. ಹೀಗೆ ಅನೇಕ ಪರೋಪಕಾರಿ ಜೀವನದ ಜೊತೆಗೆ ಜನಸ್ನೇಹಿಯಾಗಿದ್ದ ಮಧುಕರ್ ಶೆಟ್ಟಿ ಅವರ ಅಕಾಲಿಕ ಸಾವಿನಿಂದ ಇದೀಗ ಚನ್ನಪಟ್ಟಣದ ಜನತೆ ಹಾಗೂ ಅವರ ಜೊತೆ ಕೆಲಸ ಮಾಡಿದ್ದವರು ಸಹ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
