ಚಳ್ಳಕೆರೆ
ಕಳೆದ ಸುಮಾರು ಮೂರು ವರ್ಷಗಳಿಂದ ತಾಲ್ಲೂಕಿನ ವಿವಿಧೆಡೆ ಚಿರತೆಯ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಇತ್ತೀಚಿಗಷ್ಟೇ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರಹಟ್ಟಿಯ ಬಳಿ ಚಿರತೆ ಹಾಡುಹಗಲೇ ದಾಳಿ ನಡೆಸಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮಕ್ಕೆ ಹೊಂದಿಕೊಂಡಿರುವ ಕೆಲವೇ ಕಿ.ಮೀ ದೂರದಲ್ಲಿ ದೇವರ ಎತ್ತುಗಳು ಮೇಯುವ ಜಾಗಕ್ಕೆ ಆಗಮಿಸಿದ ಜಾಗಕ್ಕೆ ತಾಯಿಯನ್ನು ಉಗುರಿನಿಂದ ಗಾಯಗೊಳಿಸಿ ಅದರ ಕರುವನ್ನು ಎಳೆಕೊಂಡು ಹೋಗಿ ತಿಂದುಹಾಕಿದ್ದಲ್ಲದೆ, ಇದೇ ಸಂದರ್ಭದಲ್ಲಿ ಮತ್ತೊಂದು ಹಸುವಿಗೂ ಸಹ ಗಾಯಗೊಳಿಸಿದೆ. ಚಿರತೆ ದಾಳಿ ನಡೆಸಿದ ಕೆಲವೇ ಹೊತ್ತಿನಲ್ಲಿ ಕಿಲಾರಿಗಳು ಸ್ಥಳಕ್ಕೆ ಆಗಮಿಸಿದಾಗ ಎರಡು ಹಸುವಿನ ಕಣ್ಣಿನ ಭಾಗದಲ್ಲಿ ರಕ್ತ ಸುರಿಯುತ್ತಿದ್ದನ್ನು ಕಂಡ ಗಾಬರಿಯಾಗಿದ್ದಾರೆ. ಕೂಡಲೇ ಎಲ್ಲರೂ ಸೇರಿ ಚಿರತೆ ದಾಳಿಯನ್ನು ಖಾತರಿಪಡಿಸಿಕೊಂಡು ಗ್ರಾಮಕ್ಕೆ ಸುದ್ದಿ ಮುಟ್ಟಿಸಿದ್ದಾರೆ.
ಆದರೆ, ಗ್ರಾಮದ ಜನರು ಸ್ಥಳಕ್ಕೆ ಹೋಗಿ ನೋಡಿದಾಗ ಚಿರತೆ ಪತ್ತೆಯಾಗಲಿಲ್ಲ ಹಾಗೂ ಕರು ಸಹ ದೊರಕಲಿಲ್ಲ. ಗ್ರಾಮಸ್ಥರು ತಿಳಿಸುವಂತೆ ಚಿರತೆ ಕರುವನ್ನು ದೂರ ಎಳೆದುಕೊಂಡು ಹೋಗಿ ತಿಂದಿರುವುದಾಗಿ ತಿಳಿಸಿದ್ದಾರೆ. ಗಾಯಗೊಂಡ ಎರಡೂ ಹಸುಗಳಿಗೂ ಅವರೇ ಔಷಧವನ್ನು ಹಾಕಿ ಗುಣಪಡಿಸುತ್ತಿದ್ಧಾರೆ. ಈ ಭಾಗದಲ್ಲಿ ಆಗಾಗ ಚಿರತೆ ದಾಳಿ ಮಾಮೂಲಿಯಾಗಿದ್ದು, ಕೆಲವರಂತೂ ಚಿರತೆಯನ್ನು ದೂರದಿಂದ ಕಂಡು ಭಯಭೀತರಾಗಿದ್ಧಾರೆ. ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹುಡುಕಿ ಜಾನುವಾರುಗಳನ್ನು ರಕ್ಷಿಸುವಂತೆ ಕಿಲಾರಿಗಳಾದ ಜ್ಯೋಗಯ್ಯ, ಗಿರೀಶ್ ಮುಂತಾದವರು ಮನವಿ ಮಾಡಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
