ತುಮಕೂರು
ನಗರದ 32ನೇ ವಾರ್ಡ್ಗೆ ಸೇರ್ಪಡುವ ಶೆಟ್ಟಿಹಳ್ಳಿಪಾಳ್ಯದಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಚಿರತೆಗಳು ಕಂಡು ಬಂದ ಬಗ್ಗೆ ಕೆಲವರು ಹೇಳುತ್ತಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಠಿಯಾಗಿದೆ.
ಕಳೆದ ಗುರುವಾರದಂದು ರಾತ್ರಿ 8 ಗಂಟೆ ಸುಮಾರಿಗೆ ಶೆಟ್ಟಿಹಳ್ಳಿಪಾಳ್ಯದ ರಾಮಕೃಷ್ಣ ಎಂಬ ರೈತನು ಜಮೀನಿಗೆ ನೀರು ಹಾಯಿಸುವಾಗ ಚಿರತೆಗಳನ್ನು ಕಂಡು ಭಯಭೀತರಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮರುದಿನದ ಮುಂಜಾನೆ ನಾಲ್ಕುವರೆ ಸಮಯದಲ್ಲಿ ಗ್ರಾಮದ ಗಡಿ ಭಾಗದಲ್ಲಿದ್ದ ಕುರಿಗಳ ಶೆಡ್ಬಳಿ ಚಿರತೆ ಪ್ರತ್ಯಕ್ಷವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಮರುದಿನ ಬೆಳಗ್ಗೆ ರೈತರು ಹೊಲಕ್ಕೆ ತೆರಳಿದ್ದ ವೇಳೆ ಮತ್ತೊಮ್ಮೆ ಚಿರತೆ ಪ್ರತ್ಯಕ್ಷವಾಗಿದ್ದು, ಗಾಬರಿಗೊಂಡ ರೈತರು ಎರಡ್ಮೂರು ದಿನಗಳಿಂದ ಹೊಲಕ್ಕೆ ತೆರಳಲು ಭಯಬೀಳುತ್ತಿದ್ದಾರೆ. ರಾತ್ರಿವೇಳೆ ಹೊಲಕ್ಕೆ ನೀರು ಹಾಯಿಸಲು ಹೋಗುತ್ತಿದ್ದ ರೈತರು ಇದೀಗ ಪ್ರಾಣ ಭಯದಿಂದ ಹೊಲದ ಕಡೆಗೆ ತೆರಳುವುದನ್ನೇ ನಿಲ್ಲಿಸಿದ್ದಾರೆ.
ಈ ಬಗ್ಗೆ ಪೋಲೀಸರಿಗೆ ದೂರು ನೀಡಲಾಗಿದೆ. ಜೊತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ದೂರು ನೀಡಿದ್ದು, ಬೋನ್ ಅಳವಡಿಸಿ ಚಿರತೆಗಳನ್ನು ಹಿಡಿದು ಕಾಡಿಗೆ ರವಾನಿಸಬೇಕು. ಚಿರತೆಗಳ ಭಯದಿಂದ ಮಕ್ಕಳು ಶಾಲೆಗೆ ತೆರಳಲು ಭಯಭೀಳುತ್ತಿದ್ದಾರೆ. ಸಂಜೆ ಯಾಗುತ್ತಲೇ ಮನೆಯಿಂದ ಯಾರೂ ಕೂಡ ಹೊರಬರುತ್ತಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕೆಲವರು ಚಿರತೆಯ ಬಗ್ಗೆ ಹೇಳುತ್ತಿರುವುದಕ್ಕೆ ಪೂರಕ ಎಂಬಂತೆ ಚಿರತೆ ಓಡಾಡಿದ ಕಡೆಗಳಲ್ಲಿ ಹೆಜ್ಜೆಯ ಗುರುತುಗಳು ಸ್ಪಷ್ಟವಾಗಿ ಕಾಣುತ್ತಿವೆ. ಹೆಜ್ಜೆ ಗುರುತುಗಳನ್ನಾಧರಿಸಿ ಚಿರತೆಗಳನ್ನು ಸೆರೆ ಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ಗುರುವಾರದಂದು ರಾತ್ರಿ ಹಾಗೂ ಮರುದಿನ ಬೆಳಗ್ಗೆ ಎರಡ್ಮೂರು ಚಿರತೆಗಳು ಪ್ರತ್ಯಕ್ಷವಾಗಿದ್ದವು. ಇದನ್ನು ನೋಡಿದ ಗ್ರಾಮಸ್ಥರು ಹೊಲದ ಕಡೆ ತೆರಳಲು ಭಯಭೀತರಾಗಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಎರಡು ಕುರಿಗಳು ಹಾಗೂ ನಾಯಿಗಳು ಬಲಿಯಾಗಿದ್ದು, ಮನುಷ್ಯರ ಪ್ರಾಣ ಹೋಗುವುದಕ್ಕೆ ಮುಂಚೆ ಬೋನ್ಗಳನ್ನು ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯಬೇಕು.