ತಿಪಟೂರು
ಮಕ್ಕಳ ನಿಷ್ಕಲ್ಮಶ ಮನಸ್ಸು ಪ್ರಾಮಾಣಿಕವಾದುದು ಮತ್ತು ಏನು ಅರಿಯದ ಮನಸ್ಸು ದೇವರಿಗೆ ಸಮವಾದುದು ಬಿ.ಸಿ.ನಾಗೇಶ್ ತಿಳಿಸಿದರು.
ನಗರದ ಆರ್ಯಬಾಲಿಕ ಶಾಲೆಯಲ್ಲಿ ಬಾಲಭವನ ಸೊಸೈಟಿ ಬೆಂಗಳೂರು ತಾಲ್ಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾ.ಶಿ.ಇ ತಿಪಟೂರು ಮತ್ತಿತರ ಸಂಸ್ಥೆಗಳು ಹಾಗೂ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ (ರಿ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಬಾಲಮೇಳವನ್ನು ಉದ್ಘಾಟಿಸಿ ಮಾತನಾಡಿ, ನಮ್ಮದು ವೇದ ಸಾಹಿತ್ಯ ಪರಂಪರೆಯನ್ನು ಹೊಂದಿದ್ದು ಮಕ್ಕಳಿಗೆ ದೈವೀಸ್ವರೂಪವನ್ನು ನೀಡಲಾಗಿದೆ. ನಮ್ಮಲ್ಲಿ ಮಕ್ಕಳನ್ನು ಪೂಜಿಸುವ ಪದ್ದತಿಯು ಜಾರಿಯಲ್ಲಿದೆ. ಏಕೆಂದರೆ ಮಕ್ಕಳ ಮನಸ್ಸು ಏನನ್ನು ತಿಳಿಯದ ನಿಷ್ಕಲ್ಮಶವಾದುದು, ಭೇದಭಾವ, ಮೇಲು ಕೀಳು, ನ್ಯಾಯ-ಅನ್ಯಾಯ ಏನು ತಿಳಿದವರು ಅವರು ದೇವರಿಗೆ ಸಮಾನವೆಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಉಪಾಧ್ಯಕ್ಷೆ ಜಹರಾ ಜಬೀನ್ ಮಕ್ಕಳ ಆಟಪಾಟವನ್ನು ನೋಡುವುದೇ ಒಂದು ಖುಷಿ. ಮನೆಯಲ್ಲಿ ಮಕ್ಕಳಿದ್ದರೆ ಮನರಂಜನೆಗೆ ಯಾವುದೇ ಕೊರತೆ ಇರುವುದಿಲ್ಲ. ಇಂದು ನಾವು ಟಿ.ವಿ ಮುಂತಾದ ದೃಶ್ಯಮಾದ್ಯಮದಲ್ಲಿ ಮಕ್ಕಳಿಗೆ ಕೊಡುವ ಪ್ರಾಮುಖ್ಯತೆ ಕಡಿಮೆಯಾಗಿದೆ. ಆದ್ದರಿಂದ ಮಕ್ಕಳಿಗೆ ಪ್ರೀತಿವಾತ್ಸಲ್ಯವನ್ನು ನೀಡಿ ಎಂದರು.
ನಗರಸಭೆಯ ಸ್ಥಾಯಿಸಮಿತಿ ಅಧ್ಯಕ್ಷ ಟಿ.ಸಿ.ಗಂಗಾಧರ್ ಮಾತನಾಡಿ, ಮನೆಯಲ್ಲಿ ಮಕ್ಕಳಿದ್ದರೆ ಬೀಸಣಿಗೆ ಯಾತಕ ಮಕ್ಕಳಿರಲಿ ಮನೆತುಂಬ ಎಂಬ ಜನಪದ ಸಾಹಿತ್ಯದಂತೆ ಮನೆಯಲ್ಲಿ ಮಕ್ಕಳಿದ್ದರೆ ನಮಗೆ ಹೊರಗಡೆ ಆದ ಆಯಾಸವೆಲ್ಲ ಹೋಗಿ ಮಕ್ಕಳನ್ನು ನೋಡುತ್ತಿದ್ದಂತೆಯೇ ಮನಸ್ಸು ಹಗುರವಾಗುತ್ತದೆ. ಮಕ್ಕಳ ತೊದಲುನುಡಿಯನ್ನು ಕೇಳುವುದೇ ಒಂದು ಚೆಂದ. ಆದ್ದರಿಂದ ಮಕ್ಕಳು ಕೀಟಲೆ ಮಾಡುತ್ತವೆ, ಅಳುತ್ತವೆ ಎಂದು ನಾವೀಗ ಕೈಗೆ ಮೊಬೈಲ್ ಕೊಟ್ಟು ಸುಮ್ಮನೆಮಾಡುತ್ತೇವೆ. ಅದು ತುಂಬಾ ಅಪಾಯಕಾರಿ ಮತ್ತು ಮಕ್ಕಳನ್ನು ನಾವೇ ಹಾಳುಮಾಡುತ್ತೇವೆ. ಆದ್ದರಿಂದ ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದರು.
ಕಾರ್ಯಕ್ರಮದಲ್ಲಿ ಸಿ.ಡಿ.ಪಿ.ಓ ಓಂಕಾರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು, ನಗರಸಭೆಯ ಅಧ್ಯಕ್ಷ ಟಿ.ಎನ್.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದು ನಗರಸಭಾ ಸದಸ್ಯರಾದ ಲೋಕೇಶ್, ಹರಿಬಾಬು, ರೇಖಾಅನುಪ್, ಡಾ.ಎನ್.ಎ ರವಿಕುಮಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ನಂದಕುಮಾರ್ ಮುಂತಾದವರು ಭಾಗವಹಿಸಿದ್ದರು.
