ಬೆಂಗಳೂರು
ಚಿತ್ರಕಲಾ ಪರಿಷತ್ನಿಂದ ಬರುವ ಭಾನುವಾರ(ಜ.6) ನಡೆಯುವ ವಾರ್ಷಿಕ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಅರ್ಪಣೆ ಮಾಡಲಾಗಿದೆ.
ಗಾಂಧೀಜಿ ಅವರ 150ನೇ ವರ್ಷದ ಜಯಂತಿ ನೆನಪಿಗಾಗಿ ಚಿತ್ರ ಸಂತೆಯ ಸಂಪೂರ್ಣ ಅಲಂಕಾರ, ರೂಪುರೇಷೆಗಳು ಗಾಂಧೀಜಿ ಅವರಿಗೆ ಗೌರವ ಸೂಚಿಸುವ ರೀತಿಯಲ್ಲೇ ಇರುತ್ತವೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಮಾರಕೃಪ ರಸ್ತೆ ಸೇರಿ ಸುತ್ತಮುತ್ತಲ ರಸ್ತೆಗಳಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಸುಮಾರು 1500 ಕಲಾವಿದರು ಭಾಗಿಯಾಗಿರುವ ಸಾಧ್ಯತೆಗಳಿವೆ, ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಕಲಾವಿದರು ಪಾಲ್ಗೊಂಡು ತಮ್ಮ ಕಲಾಪ್ರತಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಿದ್ದಾರೆ ಎಂದರು.
ಚಿತ್ರಸಂತೆಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಇಡೀ ಚಿತ್ರಸಂತೆಗೆ ಭದ್ರತೆಯ ದೃಷ್ಟಿಯಿಂದ ಸಿಸಿ ಟಿವಿ ಕಣ್ಗಾವಲು ಹಾಕಲಾಗುವುದು.
ಚಿತ್ರಸಂತೆಯಲ್ಲಿ 100 ರೂ.ಗಳಿಂದ ಹಿಡಿದು ಲಕ್ಷಾಂತರ ರೂ.ಗಳವರೆಗಿನ ಕಲಾಕೃತಿಗಳ ಮಾರಾಟ ಪ್ರದರ್ಶನ ನಡೆಯಲಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸುವರು ಎಂದು ಅವರು ಹೇಳಿದರು
ಮೂವರಿಗೆ ಸಮ್ಮಾನ ಪ್ರಶಸ್ತಿ
ಚಿತ್ರಸಂತೆಯ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ ನೀಡುವ ವಾರ್ಷಿಕ ಚಿತ್ರಕಲಾ ಸಮ್ಮಾನ ಪ್ರಶಸ್ತಿಗೆ ಈ ಬಾರಿ ಮೂವರು ಕಲಾವಿದರಾದ ಲೀಲಾಪಂಥ್, ಜೆ.ಎಂ.ಎಸ್. ಮಣಿ, ಜಸೂರಾವಲ್ ಅವರನ್ನು ಆಯ್ಕೆ ಮಾಡಲಾಗಿದ್ದು, ಚಿತ್ರಸಂತೆಯಂದು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.ಚಿತ್ರಕಲಾ ಪರಿಷತ್ ಈ ವರ್ಷದಿಂದ ದೇವರಾಜ ಅರಸು ಅವರ ಹೆಸರಿನಲ್ಲೂ ಪ್ರಶಸ್ತಿಯನ್ನು ಆರಂಭಿಸುತ್ತಿದೆ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
