ಶಿರಾ:
ಶಿರಾ ನಗರದಲ್ಲಿರುವ ಬಾಲಾಜಿ ನಗರದ ಬಡಾವಣೆಯಲ್ಲಿ ವರ್ಷವೇ ಕಳೆದರೂ ಇಲ್ಲಿನ ನಗರಸಭೆಯ ಸಿಬ್ಬಂಧಿ ಬಡಾವಣೆಯ ನೈರ್ಮಲ್ಯವನ್ನು ಕಾಪಾಡಲು ಬರುವುದೇ ಇಲ್ಲ. ಚರಂಡಿ ಹಾಗೂ ಕಸವನ್ನು ಬಾಚಿ ಹಾಕಿ ತಿಂಗಳು, ವರ್ಷವೇ ಕಳೆದಿದೆ ಎಂದು ಆರೋಪಿಸಿ ಇಲ್ಲಿನ ಸಾರ್ವಜನಿಕರು ಬಡಾವಣೆಯ ಮುಖ್ಯ ರಸ್ತೆಗೆ ಕಸವನ್ನು ಸುರಿದು ಪ್ರತಿಭಟನೆ ನಡೆಸಿದ ಪ್ರಸಂಗ ಶನಿವಾರ ನಡೆದಿದೆ.
ಬಾಲಾಜಿ ನಗರದ ಬಡಾವಣೆ ನಗರದ ಒಂದು ಪ್ರಮುಖ ಬಡಾವಣೆಯಲ್ಲಿ ಒಂದಾಗಿದ್ದು ವಿದ್ಯಾ ನಗರ, ಮಾಧವ ನಗರ, ಕೊಳದಪ್ಪಲೇಶ್ವರ ದೇವಸ್ಥಾನ, ಅನ್ನಪೂರ್ಣೇಶ್ವರಿ ದೇವಸ್ಥಾನ, ಮಡಿವಾಳ ಮಾಚಿದೇವ ದೇವಸ್ಥಾನ, ಹಾಗೂ ಖಾಸಗಿ ಶಾಲೆ, ಪ್ರಮುಖ ನರ್ಸಿಂಗ್ ಹೋಂಗಳಿಗೆ ಹಾದುಹೋಗುವ ಪ್ರಮುಖ ರಸ್ತೆಯೂ ಇದಾಗಿದೆ. ಈ ಬಡಾವಣೆಯಿಂದ ನಗರಸಭೆಗೆ ಅತಿ ಹೆಚ್ಚು ಕಂದಾಯವೂ ಸಂದಾಯವಾಗುತ್ತಿದೆ ಯಾದರೂ ಇಲ್ಲಿನ ಮೂಲಭೂತ ಸೌಲಭ್ಯಗಳನ್ನು ಪೂರೈಸುವ ಹೊಣೆಗಾರಿಕೆಯನ್ನು ಮಾತ್ರಾ ನಗರಸಭೆ ಹೊತ್ತುಕೊಂಡಿಲ್ಲ. ಕನಿಷ್ಟ ಪಕ್ಷ ಕಸವನ್ನು ಎತ್ತಲು ಕೂಡಾ ಇಲ್ಲಿನ ಸಿಬ್ಬಂಧಿ ಬರುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿ ಕಸವನ್ನು ಬೀದಿಗೆ ಸುರಿದು ಪ್ರತಿಭಟಿಸಲು ಕಾರಣವಾಗಿತ್ತು.
ಶನಿವಾರ ಬೆಳಿಗ್ಗೆ 6 ಗಂಟೆಗೆ ಬಾಲಾಜಿ ನಗರದ ಶಂಕರ್ ನರ್ಸಿಂಗ್ ಹೋಂ ಬಳಿ ಕಸವನ್ನು ರಸ್ತೆಗೆ ಸುರಿದ ಸಾರ್ವಜನಿಕರು ಸ್ಥಳಕ್ಕೆ ನಗರಸಭೆಯ ಅಧಿಕಾರಿಗಳು ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟಿಗೆ ಕೂತು ನಗರಸಭೆಯ ವಿರುದ್ಧ ಕಿಡಿಕಾರಿದರು. ಕೂಡಲೇ ಡಿ.ವೈ.ಎಸ್.ಪಿ. ಕುಮಾರಪ್ಪ ಸ್ಥಳಕ್ಕೆ ಆಗಮಿಸಿ ಕಸವನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಕಿಡಿಕಾರಿದರು. ಕಾನೂನು ಕೈಗೆ ತೆಗೆದುಕೊಳ್ಳಬಾರದು.
ನೀವು ಮಾಡುತ್ತಿರುವ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರಸಭೆಯ ಮುಂದೆ ಹೋಗಿ ಪ್ರತಿಭಟನೆ ಮಾಡಿ. ಇದೀಗ ನೀವು ನಡೆಸುತ್ತಿರುವ ಕ್ರಮ ಸರಿಯಲ್ಲ ಎಂದು ಸಾರ್ವಜನಿಕರನ್ನು ತರಾಟೆಗೆ ತೆಗೆದುಕೊಂಡರು ಪ್ರತಿಭಟನಾಕಾರರು ಆರಕ್ಷಕ ಅಧಿಕಾರಿಗಳ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದರಲ್ಲದೆ. ನಾವು ಇಲ್ಲಿಯೇ ಪ್ರತಿಭಟನೆ ನಡೆಸುವುದು. ನಗರಸಭೆಯ ಅಧಿಕಾರಿಗಳನ್ನು ಇಲ್ಲಿಗೇ ಕರೆಸಿ ಎಂದು ಪಟ್ಟು ಹಿಡಿದರು. ಬಾಲಾಜಿ ನಗರದ ಈ ಸಮಸ್ಯೆ ಇಂದು ನಿನ್ನೆಯದಲ್ಲ 40 ವರ್ಷಗಳಿಂದಲೂ ಈ ಬಡಾವಣೆಯನ್ನು ತಿರಸ್ಕರಿಸುತ್ತಲೇ ಬರಲಾಗುತ್ತಿದೆ. ಕಳೆದ 6 ತಿಂಗಳಿಂದಲೂ ಈ ಬಡಾವಣೆಯ ಕಸವನ್ನೇ ತೆಗೆದಿಲ್ಲ ಎಂದು ವಿಜಯರಾಜ್ ದೂರಿದರು.
ಅಭಿನಂಧನ್ ಮಾತನಾಡಿ ನಗರಸಭೆಗೆ ಅತಿ ಹೆಚ್ಚು ಕಂದಾಯ ಕಟ್ಟುವ ಬಾಲಾಜಿ ನಗರ ಮತ್ತು ವಿದ್ಯಾ ನಗರಗಳೆರಡನ್ನು ನಗರಸಭೆ ತಿರಸ್ಕರಿಸಿದೆ. ಚರಂಡಿಗಳು ಅನೈರ್ಮಲ್ಯದಿಂದ ತುಂಬಿವೆ, ರಸ್ತೆಗಳಲ್ಲಿನ ಕಸವನ್ನೇ ಬಾಚಲು ನಗರಸಭೆಯವರು ಬರುವುದಿಲ್ಲ. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವತನಕವೂ ನಾವು ರಸ್ತೆಗೆ ಸುರಿದ ಕಸ ತೆಗೆಯುವುದಿಲ್ಲ ಎಂದರು.
ನಗರಸಭೆಯ ಆಯುಕ್ತರಿಗೆ ಪೋನಾಯಿಸಿದ ಡಿ.ಎಸ್.ಪಿ. ಕುಮಾರಪ್ಪ ಅವರನ್ನು ಕೂಡಲೇ ಸ್ಥಳಕ್ಕೆ ಬರುವಂತೆ ಒತ್ತಡ ಹೇರಿದರು. ನಾನು ಊರಲ್ಲಿಲ್ಲ, ನಮ್ಮ ಸಿಬ್ಬಂಧಿಯನ್ನು ಕಳಿಸುತ್ತನೆ. ತಕ್ಷಣ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದ ಕ್ಷಣದಲ್ಲಿಯೇ ನಗರಸಭೆಯ ಆರೋಗ್ಯ ನಿರೀಕ್ಷಕರು ಮತ್ತು ಸಿಬ್ಬಂಧಿ ಸ್ಥಳಕ್ಕೆ ಬಂದು ಬಡಾವಣೆಯ ನೈರ್ಮಲ್ಯ ಕಾಪಾಡುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಬಡಾವಣೆಯ ಪ್ರಮುಖರಾದ ಬಿ.ಗೋವಿಂದಪ್ಪ, ಗಂಗಣ್ಣ, ಸಂಜು, ಕಪಿಲ್, ವಿಜಯರಾಜ್, ಜಯಣ್ಣ ಸೇರಿದಂತೆ ಅನೇಕ ಪ್ರಮುಖರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
